ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಶೈಕ್ಷಣಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ವಿರುದ್ಧ ದೇಶದಲ್ಲಿ ಮತ್ತೆ ಜನಾಕ್ರೋಶ ಹೆಚ್ಚಾಗಿದೆ. ಶಿಕ್ಷಣ ತಜ್ಞ, ಪರಿಸರವಾದಿ ಸೋನಮ್ ವಾಂಗ್ಚುಕ್ ಜಂತರ್ ಮಂತರ್ನಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ತೀವ್ರ ಸ್ವರೂಪ ಪಡೆದುಕೊಂಡಿದೆ.
2 ದಿನಗಳ ಹಿಂದೆ ವಾಂಗ್ಚುಕ್ರನ್ನು ಪೊಲೀಸರು ಹೊತ್ತೊಯ್ದು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರತಿಭಟನಾಕಾರರ ಕಿಚ್ಚು ಕಮ್ಮಿ ಆಗಿಲ್ಲ. ನಿನ್ನೆ ಸಂಸತ್ನ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಪ್ರತಿಭಟನಾಕಾರರು ಕರೆ ನೀಡಿದ್ದ `ಸಂಸತ್ ಚಲೋ’ ಮೆರವಣಿಗೆ ಹಿಂಸಾರೂಪ ಪಡೆದುಕೊಂಡಿದೆ.
ಪೊಲೀಸರು ಹಾಗೂ ʻಕಾಕ್ರೋಚ್ʼಗಳ ನಡುವಿನ ಘರ್ಷಣೆಯಲ್ಲಿ ದೆಹಲಿ ಪೊಲೀಸರು ಹಾಗೂ ಅರೆಸೈನಿಕ ಪಡೆಗಳ ಒಟ್ಟು 118ಕ್ಕೂ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 5ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಲವಾರು ಮಂದಿಗೂ ಗಾಯಗಳಾಗಿವೆ.
ಆಗಿದ್ದೇನು?
ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಸಂಸತ್ತಿನ ಮುಂದೆ ಮಂಡಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು (ಟಿಯರ್ ಗ್ಯಾಸ್) ಸಿಡಿಸಿದರು ಹಾಗೂ ಲಾಠಿಚಾರ್ಜ್ ನಡೆಸಿದರು. ಹಿಂಸಾಚಾರದ ವೇಳೆ ಹಲವು ಪೊಲೀಸ್ ಬಸ್ಗಳ ಮುಂಭಾಗದ ಗಾಜುಗಳು ಪುಡಿಪುಡಿಯಾಗಿವೆ. ಕೆಲ ಅಂಗಡಿಗಳ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನನ್ನ ಉಪವಾಸ ಮುಂದುವರಿಯಲಿದೆ ; ಸೋನಮ್ ವಾಂಗ್ಚುಕ್
‘ಕಾಕ್ರೋಚ್ ಜನತಾ ಪಾರ್ಟಿ’ (CJP) ನೇತೃತ್ವದ ಪ್ರತಿಭಟನಾಕಾರರ ಮೇಲಿನ ಪೊಲೀಸರ ಲಾಠಿ ಚಾರ್ಜ್ ಅನ್ನು ಖಂಡಿಸಿರುವ ಸೋನಮ್ ವಾಂಗ್ಚುಕ್, ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ತಾವೀಗ ದಾಖಲಾಗಿರುವ ದೆಹಲಿಯ ಆಸ್ಪತ್ರೆಗೆ ಸಂಸದರು ಬರುವವರೆಗೆ ಅಥವಾ ಸಿಜೆಪಿ ಯುವ ನಾಯಕರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಅನುಮತಿ ನೀಡುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಮ್ಮ ಸಹಿ ಇರುವ ಕೈಬರಹದ ಪತ್ರವನ್ನು ಹಂಚಿಕೊಂಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಸರ್ಕಾರ ದೌರ್ಜನ್ಯ ಎಸಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದ ಯುವಕರನ್ನು ತಡೆದ ರೀತಿಯ ಬಗ್ಗೆ ಸೋನಮ್ ವಾಂಗ್ಚುಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ಉಪವಾಸ ಸತ್ಯಾಗ್ರಹ ಇನ್ನೂ ಮುಂದುವರಿಯಲಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಕರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಂಡಿರುವುದನ್ನು ಕಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯುವ ನಾಯಕರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಬಿಡಬೇಕು ಅಥವಾ ಆಸ್ಪತ್ರೆಯಲ್ಲಿ ನನ್ನನ್ನು ಭೇಟಿಯಾಗಲು ಅವರಿಗೆ ಅನುಮತಿ ನೀಡಬೇಕು. ಅಲ್ಲಿಯವರೆಗೆ ನನ್ನ ಉಪವಾಸ ಮುಂದುವರಿಯುತ್ತದೆ” ಎಂದು ವಾಂಗ್ಚುಕ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಮಣ್ಣಲ್ಲಿ ಮಣ್ಣಾದ ದೊಡ್ಡ’ಗೌಡ್ತಿ’.. ರಂಗನಾಥನ ಪಾದದಲ್ಲಿ ಚಿರನಿದ್ರೆಗೆ ಜಾರಿದ ಚೆನ್ನಮ್ಮ!



















