ಚೆನ್ನೈ : ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ಜೋಸೆಫ್ ವಿಜಯ್ ಅವರು ತಮ್ಮ ಜನಪರ ಆಡಳಿತದ ಮೊದಲ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ಶಾಲಾ-ಕಾಲೇಜುಗಳು, ದೇವಾಲಯಗಳು ಹಾಗೂ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳನ್ನು (ಟಾಸ್ಮಾಕ್) ಮುಂದಿನ ಎರಡು ವಾರಗಳ ಒಳಗೆ ಮುಚ್ಚುವಂತೆ ಅವರು ಆದೇಶ ಹೊರಡಿಸಿದ್ದಾರೆ.
ಕಳೆದ ತಿಂಗಳು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು (ವಿಜಯ್ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ 107) ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದ್ದ ಕಾರಣ, ಕಾಂಗ್ರೆಸ್, ಎಡಪಕ್ಷಗಳು ಹಾಗೂ ವಿಸಿಕೆ ಪಕ್ಷದ ಬೆಂಬಲದೊಂದಿಗೆ ವಿಜಯ್ ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಸಾರ್ವಜನಿಕ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 4,765 ಟಾಸ್ಮಾಕ್ ಮದ್ಯದಂಗಡಿಗಳಿವೆ. ಈ ಪೈಕಿ 276 ದೇವಾಲಯಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಬಳಿ ಕಾರ್ಯನಿರ್ವಹಿಸುತ್ತಿದ್ದು, ಇವೆಲ್ಲವನ್ನೂ ಮುಚ್ಚಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆದಾಯಕ್ಕಿಂತ ಜನರ ಆರೋಗ್ಯವೇ ಮುಖ್ಯ
ತಮಿಳುನಾಡು ಸರ್ಕಾರದ ಬೊಕ್ಕಸಕ್ಕೆ ಟಾಸ್ಮಾಕ್ ಮದ್ಯ ಮಾರಾಟವು ಆದಾಯದ ಪ್ರಮುಖ ಮೂಲವಾಗಿದೆ. ಕೇವಲ 2025ನೇ ಇಸವಿಯೊಂದರಲ್ಲೇ ರಾಜ್ಯ ಸರ್ಕಾರ ಮದ್ಯ ಮಾರಾಟದಿಂದ ಬರೋಬ್ಬರಿ 48,000 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿತ್ತು. ಇಷ್ಟೊಂದು ಭಾರಿ ಮೊತ್ತದ ಆದಾಯ ತಂದುಕೊಡುವ ಮೂಲವಾಗಿದ್ದರೂ, ರಾಜ್ಯವನ್ನು ‘ವ್ಯಸನ ಮುಕ್ತ’ವನ್ನಾಗಿಸುವ ತಮ್ಮ ಚುನಾವಣಾ ಭರವಸೆಗೆ ಬದ್ಧರಾಗಿರುವ ಮುಖ್ಯಮಂತ್ರಿ ವಿಜಯ್, ಜನಸಾಮಾನ್ಯರ ಒಳಿತಿಗಾಗಿ ಈ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಟಾಸ್ಮಾಕ್ ಮೇಲಿನ ಇಡಿ ದಾಳಿ
ಈ ಹಿಂದೆ ಡಿಎಂಕೆ ಆಡಳಿತವಿದ್ದಾಗ ಟಾಸ್ಮಾಕ್ ಮದ್ಯದಂಗಡಿಗಳು ಜಾರಿ ನಿರ್ದೇಶನಾಲಯದ (ಇಡಿ) ತೀವ್ರ ನಿಗಾಗೆ ಗುರಿಯಾಗಿದ್ದವು. ಟಾಸ್ಮಾಕ್ ಕಾರ್ಯಾಚರಣೆಯಲ್ಲಿ ಟೆಂಡರ್ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದ ಇ.ಡಿ., ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ರಾಜ್ಯಾದ್ಯಂತ ಹಲವು ಕಡೆ ದಾಳಿ ನಡೆಸಿತ್ತು. ಸರಿಸುಮಾರು 1,000 ಕೋಟಿ ರೂಪಾಯಿಗಳ ಲೆಕ್ಕಕ್ಕೆ ಸಿಗದ ನಗದು ಪತ್ತೆಯಾಗಿದೆ ಹಾಗೂ ಮದ್ಯದ ಬಾಟಲಿಗಳ ಮೇಲೆ 10 ರಿಂದ 30 ರೂಪಾಯಿಗಳ ಹೆಚ್ಚುವರಿ ಶುಲ್ಕವನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದರು.
ಆದರೆ, ಈ ದಾಳಿಯನ್ನು ಅಂದಿನ ಡಿಎಂಕೆ ಸರ್ಕಾರದ ಅಬಕಾರಿ ಸಚಿವರಾಗಿದ್ದ ಎಸ್. ಮುತ್ತುಸಾಮಿ ಅವರು ತೀವ್ರವಾಗಿ ಖಂಡಿಸಿ, ಇದು ರಾಜಕೀಯ ಪ್ರೇರಿತ ಮತ್ತು ರಾಜ್ಯದ ಅಧಿಕಾರಿಗಳಿಗೆ ಕಿರುಕುಳ ನೀಡುವ ತಂತ್ರ ಎಂದು ಟೀಕಿಸಿದ್ದರು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ತನಿಖೆ ನಡೆಸುವ ರಾಜ್ಯ ಸರ್ಕಾರದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆಯೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ಸಂಸ್ಥೆಯ ನಡೆಯನ್ನು ಕಟುವಾಗಿ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು
ಇದನ್ನೂ ಓದಿ : ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ : ‘ಟಿವಿಕೆ’ ಸರ್ಕಾರಕ್ಕೆ AIADMK ಬಂಡಾಯ ಬಣದ ಬೆಂಬಲ


















