ಪಾಟ್ನಾ : ಬಿಹಾರದ ಸಾಸಾರಾಮ್ ಮುನ್ಸಿಪಲ್ ಕೌನ್ಸಿಲ್ನ ಕಾರ್ಯನಿರ್ವಾಹಕ ಅಧಿಕಾರಿ (ಇಒ) ವಿಮಲ್ ಕುಮಾರ್ ಅವರನ್ನು ಅವರ ಕಾರು ಚಾಲಕನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ರಾಜಧಾನಿ ಪಾಟ್ನಾ ಕಡೆಗೆ ಪ್ರಯಾಣಿಸುತ್ತಿದ್ದಾಗ, ಶೌಚಾಲಯಕ್ಕೆ ಹೋಗಲು ವಾಹನ ನಿಲ್ಲಿಸುವಂತೆ ಚಾಲಕ ಮಿಥಿಲೇಶ್ ಕುಮಾರ್ ಕೇಳಿಕೊಂಡಿದ್ದ. ಆದರೆ, ಅಧಿಕಾರಿ ಇದಕ್ಕೆ ನಿರಾಕರಿಸಿದ್ದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ, ಕಾರಿನಲ್ಲಿದ್ದ ಕಬ್ಬಿಣದ ರಾಡ್ನಿಂದ ಹೊಡೆದು ವಿಮಲ್ ಕುಮಾರ್ ಅವರನ್ನು ಹತ್ಯೆ ಮಾಡಿರುವುದಾಗಿ ಚಾಲಕ ಮಿಥಿಲೇಶ್ ಕುಮಾರ್ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಪೊಲೀಸರ ತನಿಖೆಯಿಂದ ಕಟ್ಟುಕಥೆ ಬಯಲು
ಆರಂಭದಲ್ಲಿ ಈ ಕೊಲೆಯನ್ನು ಬೇರೆಯವರ ತಲೆಗೆ ಕಟ್ಟಲು ಚಾಲಕ ಯತ್ನಿಸಿದ್ದ. ಅಪರಿಚಿತ ದುಷ್ಕರ್ಮಿಗಳು ವಾಹನವನ್ನು ತಡೆದು ದಾಳಿ ಮಾಡಿ ಪರಾರಿಯಾಗಿದ್ದಾರೆ ಎಂದು ಕಟ್ಟುಕಥೆ ಹೆಣೆದಿದ್ದ. ಆದರೆ, ಘಟನಾ ಸ್ಥಳದಲ್ಲಿದ್ದರೂ ಚಾಲಕನ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲದಿರುವುದು ಹಾಗೂ ಆತ ನೀಡುತ್ತಿದ್ದ ಹೇಳಿಕೆಗಳಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ ಪೊಲೀಸರಿಗೆ ಆತನ ಮೇಲೆಯೇ ಅನುಮಾನ ಶುರುವಾಗಿತ್ತು.
ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಸಂಖ್ಯೆ ಹಾಗೂ ಬೈಕ್ಗಳ ಬಗ್ಗೆ ಚಾಲಕ ಪದೇ ಪದೇ ಹೇಳಿಕೆ ಬದಲಾಯಿಸುತ್ತಿದ್ದ. ತೀವ್ರ ವಿಚಾರಣೆಗೊಳಪಡಿಸಿದಾಗ ಆತನೇ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಅತಿಯಾದ ಕೆಲಸದೊತ್ತಡ ಹಾಗೂ ದೀರ್ಘಕಾಲದ ಕರ್ತವ್ಯದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎಂಬುದನ್ನು ಇತರೆ ಸಿಬ್ಬಂದಿ ಕೂಡ ಖಚಿತಪಡಿಸಿದ್ದಾರೆ. ಕೊಲೆಯ ಬಳಿಕ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಆತ ವಾಹನವನ್ನು ನಿಲ್ಲಿಸಿದ್ದ ರೀತಿಯೂ ತನಿಖೆ ವೇಳೆ ಬಯಲಾಗಿದೆ ಎಂದು ಮಗಧ ವಲಯದ ಐಜಿ ವಿಕಾಸ್ ವೈಭವ್ ಹೇಳಿದ್ದಾರೆ.
ಶಾಸಕನ ವಿರುದ್ಧ ಮೃತ ಅಧಿಕಾರಿಯ ಪತ್ನಿ ಆರೋಪ
ಒಂದೆಡೆ ಪೊಲೀಸರ ತನಿಖೆ ಚಾಲಕನ ತಪ್ಪೊಪ್ಪಿಗೆಯತ್ತ ಬೊಟ್ಟು ಮಾಡುತ್ತಿದ್ದರೆ, ಮತ್ತೊಂದೆಡೆ ಮೃತ ಅಧಿಕಾರಿಯ ಪತ್ನಿ ಬಬಿತಾ ಅವರು ಈ ಕೊಲೆಯಲ್ಲಿ ಡೆಹ್ರಿ ಕ್ಷೇತ್ರದ ಎಲ್ಜೆಪಿ (ರಾಮ್ ವಿಲಾಸ್) ಶಾಸಕ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಸೋನು ಸಿಂಗ್ ಅವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರು ತಮ್ಮ ಪತಿಗೆ ನಿರಂತರವಾಗಿ ಕರೆ ಮಾಡಿ ಮೊದಲು 50 ಲಕ್ಷ ರೂಪಾಯಿ, ಬಳಿಕ 25 ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಿದ್ದರು ಎಂದು ದೂರಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ, ಹಾಗಾಗಿ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಿಲ್ಲ ಎಂದು ತಮ್ಮ ಪತಿ ಹೇಳುತ್ತಿದ್ದರು. ಪದೇ ಪದೇ ಸಭೆಗಳಿಗೆ ಕರೆಯುತ್ತಿದ್ದ ಶಾಸಕರೇ ಈ ಕೊಲೆಯ ರೂವಾರಿ ಎಂದು ಅವರು ನೇರ ಆರೋಪ ಮಾಡಿದ್ದಾರೆ.
ಆರೋಪ ನಿರಾಕರಿಸಿದ ಶಾಸಕ ಸೋನು ಸಿಂಗ್
ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಶಾಸಕ ಸೋನು ಸಿಂಗ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಾವು ಈ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಭಾನುವಾರ ಸಂಜೆ ಡೆಹ್ರಿಯಲ್ಲಿ ನಡೆದ ‘ಏಕ್ ಶಾಮ್ ಶಹೀದೋಂ ಕೆ ನಾಮ್’ ಕಾರ್ಯಕ್ರಮದಲ್ಲಿ ವಿಮಲ್ ಕುಮಾರ್ ಅವರನ್ನು ಭೇಟಿಯಾಗಿ ಕೆಲಕಾಲ ಮಾತನಾಡಿದ್ದು ನಿಜ. ಆದರೆ, ನಮ್ಮ ನಡುವೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಹಣಕಾಸಿನ ವಿಚಾರವಾಗಿ ವಿವಾದವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ಸ್ಥಳೀಯ ರಾಜಕೀಯದ ಹಿತಾಸಕ್ತಿಗಳಿಗಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ನಿಷ್ಪಕ್ಷ ತನಿಖೆಯಿಂದಷ್ಟೇ ಸತ್ಯ ಹೊರಬರಲು ಸಾಧ್ಯ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ : “ನನ್ನ ಸ್ಕಾಲರ್ಶಿಪ್ ಪತ್ರ ಪರಿಶೀಲಿಸಿ” : ಅಮೆರಿಕ ವ್ಯಾಸಂಗ ವಿವಾದದ ಬಗ್ಗೆ RTI ಕಾರ್ಯಕರ್ತನಿಗೆ ದೀಪ್ಕೆ ತಿರುಗೇಟು!



















