ಗುರುಗ್ರಾಮ : ದೆಹಲಿಯ ಲಜಪತ್ ನಗರ ಮಾರುಕಟ್ಟೆಗೆ ಸಹೋದರಿಯರೊಂದಿಗೆ ಮದುವೆಯ ಶೇರ್ವಾನಿ ಖರೀದಿಸಲು ತೆರಳಿದ್ದ 31 ವರ್ಷದ ಯುವರಾಜ್ ಸಿಂಗ್ ಮಂಚಂದ ಎಂಬ ಯುವಕ ಭೀಕರವಾಗಿ ಹತ್ಯೆಯಾದ ಘಟನೆ ನಡೆದಿದೆ. ಸೆಪ್ಟೆಂಬರ್ 6 ರಂದು ಸಂಜೆ ರೆಸ್ಟೋರೆಂಟ್ ಒಂದರಲ್ಲಿ ಆಹಾರ ಸೇವಿಸಿದ ನಂತರ, ಗುರ್ಗ್ರಾಮದಲ್ಲಿರುವ ತಮ್ಮ ಮಾಜಿ ಸಹೋದ್ಯೋಗಿಯನ್ನು ಭೇಟಿಯಾಗಲು ತುರ್ತು ಕೆಲಸವಿದೆ ಎಂದು ಹೇಳಿ ಯುವರಾಜ್ ತೆರಳಿದ್ದರು.
ಅಂದು ರಾತ್ರಿ 10 ಗಂಟೆಗೆ ಮನೆಗೆ ಹಿಂತಿರುಗುವುದಾಗಿ ತಿಳಿಸಿದ್ದ ಅವರು, ನಂತರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಎಷ್ಟೇ ಹುಡುಕಾಟ ನಡೆಸಿದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ಸೆಪ್ಟೆಂಬರ್ 8 ರಂದು ಬಂದ ಕೊನೆಯ ವಾಟ್ಸ್ ಆ್ಯಪ್ ಸಂದೇಶದ ಬಳಿಕ ಅವರ ಮೊಬೈಲ್ ಸಂಪೂರ್ಣವಾಗಿ ಸ್ವಿಚ್ ಆಫ್ ಆಗಿತ್ತು. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಯುವರಾಜ್ ಅವರ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರೆ, ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಪೊಲೀಸರ ನಡೆಗೆ ಕುಟುಂಬಸ್ಥರ ಆಕ್ರೋಶ
ಯುವರಾಜ್ ಪತ್ತೆಯಾಗದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಕುಟುಂಬಸ್ಥರು ದೆಹಲಿಯ ಲಜಪತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಗುರ್ಗ್ರಾಮ್ ಪೊಲೀಸರು ಸೆಪ್ಟೆಂಬರ್ 10 ರಂದೇ ಚರಂಡಿಯೊಂದರಲ್ಲಿ ಯುವರಾಜ್ ಅವರ ಮೃತದೇಹವನ್ನು ವಶಪಡಿಸಿಕೊಂಡಿದ್ದರು. ಗುರುತು ಪತ್ತೆಯಾಗದ ಮೃತದೇಹಗಳ ಸರ್ಕಾರಿ ಪೋರ್ಟಲ್ (ZIPNET) ನಲ್ಲಿ ಸರಿಯಾದ ಸಮಯಕ್ಕೆ ಮಾಹಿತಿ ನೀಡದ ಪೊಲೀಸರು, ಕುಟುಂಬಕ್ಕೆ ವಿಷಯ ತಿಳಿಸುವ ಮುನ್ನವೇ ಸೆಪ್ಟೆಂಬರ್ 14 ರಂದು ಮೃತದೇಹದ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕುಟುಂಬಸ್ಥರು, ಮರಣೋತ್ತರ ಪರೀಕ್ಷೆಯ ವರದಿ, ಛಾಯಾಚಿತ್ರಗಳು, ಡಿಎನ್ಎ ಮಾದರಿಗಳು ಹಾಗೂ ಯುವರಾಜ್ ಅವರ ವಸ್ತುಗಳನ್ನು ತಮಗೆ ತಕ್ಷಣ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ತನಿಖೆಯಲ್ಲಿ ಬಯಲಾಯ್ತು ಹತ್ಯೆಯ ರಹಸ್ಯ
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಯುವರಾಜ್ ಅವರ ಕರೆಗಳ ವಿವರಗಳನ್ನು (CDR) ಪರಿಶೀಲಿಸಿದಾಗ, ಅವರು ಕೊನೆಯದಾಗಿ ವತ್ಸ್ ಎಂಬ ತಮ್ಮ ಮಾಜಿ ಮಹಿಳಾ ಸಹೋದ್ಯೋಗಿಯೊಂದಿಗೆ ಮಾತನಾಡಿದ್ದು ಕಂಡುಬಂದಿದೆ. ಆಕೆಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಕೊನೆಗೆ ಉತ್ತರಾಖಂಡದಲ್ಲಿ ಹೊಸ ಮೊಬೈಲ್ ಸಂಖ್ಯೆ ಬಳಸುತ್ತಿದ್ದ ಆರೋಪಿ ವತ್ಸ್ ಹಾಗೂ ಆಕೆಯ ಸ್ನೇಹಿತನೊಬ್ಬನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಣಕಾಸಿನ ವೈಷಮ್ಯ ಶಂಕೆ
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಯುವರಾಜ್ ಅವರನ್ನು ಕೊಲೆ ಮಾಡಿ ಗುರ್ಗ್ರಾಮ್ನಲ್ಲಿರುವ ತಮ್ಮ ಮನೆಯ ಬಳಿಯಿದ್ದ ಚರಂಡಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರ್ಥಿಕ ವೈಷಮ್ಯವೇ ಈ ಕೊಲೆಗೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ. ಆದರೆ, ಆರೋಪಿ ಮಹಿಳೆಯು ಹತ್ಯೆಯ ನಿಜವಾದ ಕಾರಣವನ್ನು ಮರೆಮಾಚುತ್ತಿದ್ದಾಳೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದ್ದು, ಕೊಲೆಯ ಹಿಂದಿನ ನಿಖರ ಉದ್ದೇಶ ಹಾಗೂ ಕೃತ್ಯ ಎಸಗಿದ ರೀತಿಯ ಬಗ್ಗೆ ತೀವ್ರ ವಿಚಾರಣೆ ಮುಂದುವರಿದಿದೆ.
ಇದನ್ನೂ ಓದಿ ; ಕಾಬೂಲ್ನಿಂದ ಭಾರತದ ಕಾಮೆಂಟರಿ ಬಾಕ್ಸ್ವರೆಗೆ : ಅಮಿತಾಭ್ ಚಿತ್ರಗಳಿಂದ ಹಿಂದಿ ಕಲಿತ ಅಫ್ಘಾನ್ ಕಾಮೆಂಟೇಟರ್!



















