ನವದೆಹಲಿ : ಭಾರತವನ್ನು 2047ರ ವೇಳೆಗೆ ವಿಕಸಿತ ದೇಶವನ್ನಾಗಿ ಪರಿವರ್ತಿಸುವ ಗುರಿಗೆ ದೇಶದ ಆಂತರಿಕ ಭದ್ರತೆಯೇ ಮುಖ್ಯ ತಳಹದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಇಂಟಲಿಜೆನ್ಸ್ ಬ್ಯೂರೋದ (ಐಬಿ) ರಾಷ್ಟ್ರೀಯ ಭದ್ರತಾ ತಂತ್ರಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಭದ್ರತೆ, ಗಡಿ ರಕ್ಷಣೆ ಮತ್ತು ಅಪರಾಧ ತಡೆಗೆ ಸಂಬಂಧಿಸಿದಂತೆ 2047ರ ಸುದೀರ್ಘ ಭವಿಷ್ಯದ ನೀತಿಯನ್ನು ಅನಾವರಣಗೊಳಿಸಿದರು.
“ದೇಶ ಧರ್ಮಛತ್ರವಲ್ಲ”– ಅಕ್ರಮ ನುಸುಳುಕೋರರಿಗೆ ಖಡಕ್ ಎಚ್ಚರಿಕೆ
ತಮ್ಮ ಭಾಷಣದಲ್ಲಿ ಅಕ್ರಮ ನುಸುಳುವಿಕೆ ವಿರುದ್ಧ ಅತ್ಯಂತ ಕಠಿಣ ಮಾತುಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಚಿವರು, “ಈ ದೇಶವೇನೂ ಧರ್ಮಛತ್ರವಲ್ಲ. ಭಾರತದಲ್ಲಿ ಜೀವಿಸುವ ಸಂಪೂರ್ಣ ಹಕ್ಕು ಈ ದೇಶದ ಪ್ರಜೆಗಳಿಗೆ ಮಾತ್ರವೇ ಇದೆ” ಎಂದು ಪ್ರತಿಪಾದಿಸಿದರು. ಅಕ್ರಮ ನುಸುಳುಕೋರರು ದೇಶದ ಆಂತರಿಕ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ಜನಸಂಖ್ಯಾ ಸಮತೋಲನಕ್ಕೆ ತೀವ್ರ ಬೆದರಿಕೆಯಾಗಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಭಾರತವನ್ನು ಸಂಪೂರ್ಣವಾಗಿ ನುಸುಳುಕೋರರ ಮುಕ್ತ ದೇಶವನ್ನಾಗಿ ಮಾಡಲು ಸರ್ಕಾರ ಚತುರ್ಮುಖ ಗಡಿ ಭದ್ರತಾ ಚೌಕಟ್ಟನ್ನು ಸಿದ್ಧಪಡಿಸಿದೆ ಎಂದು ಸ್ಪಷ್ಟಪಡಿಸಿದರು.
ದೇಶದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ತಂದಿರುವ ಸುಧಾರಣೆಗಳ ಕುರಿತು ಮಾತನಾಡಿದ ಶಾ, ಮೂರು ನೂತನ ಕ್ರಿಮಿನಲ್ ಕಾನೂನುಗಳನ್ನು ಮುಂದಿನ ಒಂದು ವರ್ಷದೊಳಗೆ ಪೂರ್ಣಪ್ರಮಾಣದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು. ಹೊಸ ಕಾನೂನುಗಳ ಮೂಲಕ ಸುಪ್ರೀಂ ಕೋರ್ಟ್ ಹಂತದವರೆಗಿನ ಪ್ರಕರಣಗಳನ್ನು ಕೇವಲ 3 ವರ್ಷಗಳಲ್ಲಿ ಇತ್ಯರ್ಥಪಡಿಸುವ ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಮಾಣವನ್ನು ಶೇ.25ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, 2019ರಿಂದ 2026ರ ನಡುವೆ ವಿದೇಶಕ್ಕೆ ಓಡಿಹೋಗಿದ್ದ 274 ಆರ್ಥಿಕ ಅಪರಾಧಿಗಳು ಹಾಗೂ ತಲೆಮರೆಸಿಕೊಂಡವರನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದರು.
ಭಯೋತ್ಪಾದನೆ ಮತ್ತು ಡ್ರಗ್ಸ್ ವಿರುದ್ಧ ‘ಪ್ರಹಾರ್’
ಭಯೋತ್ಪಾದನಾ ಜಾಲಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ‘ಪ್ರಹಾರ್’ ತಂತ್ರಜ್ಞಾನವನ್ನು ಭದ್ರತಾ ಪಡೆಗಳು ದೈನಂದಿನ ಕಾರ್ಯಾಚರಣೆಯಲ್ಲಿ ಬಳಸಬೇಕು ಎಂದು ಕರೆ ನೀಡಿದರು. ನಿಷೇಧಿತ ಪಿಎಫ್ಐ ಸಂಘಟನೆಯ ವಿರುದ್ಧದ ಕಾರ್ಯಾಚರಣೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅತ್ಯುತ್ತಮ ಸಮನ್ವಯಕ್ಕೆ ಮಾದರಿಯಾಗಿದೆ ಎಂದರು. ಇದೇ ವೇಳೆ, ಡ್ರಗ್ಸ್ ಜಾಲವನ್ನು ಧ್ವಂಸಗೊಳಿಸಲು 2026-2029ರ ನಾರ್ಕೋಟಿಕ್ಸ್ ದೃಷ್ಟಿಕೋನ ದಾಖಲೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ‘ಪತ್ತೆ ಮಾಡಿ, ಅಸ್ತವ್ಯಸ್ತಗೊಳಿಸಿ ಮತ್ತು ನಾಶಪಡಿಸಿ’ (Detect, Disrupt, Destroy) ಎಂಬ ತಂತ್ರ ಅನುಸರಿಸುವಂತೆ ಎಲ್ಲಾ ರಾಜ್ಯಗಳ ಪೊಲೀಸರಿಗೆ ಸೂಚಿಸಿದರು.
ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI), ದತ್ತಾಂಶ ವಿಶ್ಲೇಷಣೆ ಮಾದರಿಗಳನ್ನು ಬಳಸಿಕೊಂಡು ಸವಾಲುಗಳನ್ನು ಎದುರಿಸಲು ಯುವ ಪೊಲೀಸ್ ಅಧಿಕಾರಿಗಳಿಗೆ ಅವರು ಕಿವಿಮಾತು ಹೇಳಿದರು. ಸಿಸಿಟಿಎನ್ಎಸ್(CCTNS), ಐಸಿಜೆಎಸ್ (ICJS), ನ್ಯಾಟ್ ಗ್ರಿಡ್ (NATGRID)ನಂತಹ ಗುಪ್ತಚರ ಜಾಲಗಳನ್ನು ಬಳಸಿಕೊಂಡು ಮುಂದಿನ 15 ರಿಂದ 20 ವರ್ಷಗಳಲ್ಲಿ ಎದುರಾಗಬಹುದಾದ ಸೈಬರ್ ದಾಳಿಗಳು, ಜಾಗತಿಕ ಅಸ್ಥಿರತೆಯ ಬೆದರಿಕೆಗಳನ್ನು ಮೊದಲೇ ಊಹಿಸಿ ನಿಷ್ಕ್ರಿಯಗೊಳಿಸುವಂತೆ ಗೂಢಚಾರಿ ಸಂಸ್ಥೆಗಳಿಗೆ ಅಮಿತ್ ಶಾ ಕರೆ ನೀಡಿದರು.
ಇದನ್ನೂ ಓದಿ : ಬೆಂಗಳೂರಿನ DRDO ಸಂಸ್ಥೆಯಲ್ಲಿ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ



















