ಡೆಹ್ರಾಡೂನ್: ಅಯೋಧ್ಯೆ ರಾಮಮಂದಿರದ ಕಾಣಿಗೆ ಹಾಗೂ ದೇಣಿಗೆಯಲ್ಲಿ ಅವ್ಯವಹಾರ ನಡೆದಿರುವ ಆರೋಪವು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಇದೀಗ ವಿಶ್ವಪ್ರಸಿದ್ಧ ಬದರಿನಾಥ ಧಾಮದ ಕಾಣಿಕೆ ಹಣದಲ್ಲೂ ಗೋಲ್ಮಾಲ್ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ (BKTC), ಪ್ರಕರಣದ ಸತ್ಯಾಸತ್ಯತೆ ಹೊರತರಲು ಉನ್ನತ ಮಟ್ಟದ ಆಂತರಿಕ ತನಿಖೆಗೆ ಆದೇಶಿಸಿದೆ.
ಭೈರವ್ ಸೇನೆಯಿಂದ ಕಳವು ಆರೋಪ
ದೇವಸ್ಥಾನದ ಕಾಣಿಕೆ ಸಂಗ್ರಹದಲ್ಲಿ ಆರ್ಥಿಕ ಅಕ್ರಮಗಳು ನಡೆದಿವೆ ಎಂದು ‘ಭೈರವ್ ಸೇನೆ’ ಎಂಬ ಸಂಘಟನೆಯು ಶುಕ್ರವಾರ ಅಧಿಕೃತವಾಗಿ ದೂರಿದೆ. ಅಷ್ಟೇ ಅಲ್ಲದೆ, ದೇವಸ್ಥಾನ ಸಮಿತಿಯ ಅಧ್ಯಕ್ಷರ ಆಪ್ತ ಸಹಾಯಕರೇ ಈ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಸಂಘಟನೆಯು, ಈ ಬಗ್ಗೆ ನಿಷ್ಪಕ್ಷ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ. ಈ ಆಪಾದನೆಯು ಭಕ್ತರ ವಲಯದಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಕಟ್ಟುನಿಟ್ಟಿನ ಕ್ರಮದ ಭರವಸೆ
ಈ ಕುರಿತು ಪ್ರತಿಕ್ರಿಯಿಸಿರುವ ಬಿಕೆಟಿಸಿ (BKTC) ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಆರೋಪಗಳ ಬೆನ್ನಲ್ಲೇ ಸಮಿತಿಯು ಎಚ್ಚೆತ್ತುಕೊಂಡಿದ್ದು, ತನಿಖಾ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಆರೋಪ ಎದುರಿಸುತ್ತಿರುವ ಸಂಬಂಧಪಟ್ಟ ಉದ್ಯೋಗಿಗಳಿಂದ ಸಮಜಾಯಿಷಿ ಕೇಳಲಾಗಿದೆ ಎಂದಿದ್ದಾರೆ.
ಇದೇ ವೇಳೆ, ಆರೋಪಕ್ಕೊಳಗಾಗಿರುವ ವ್ಯಕ್ತಿ ತಮ್ಮ ‘ವೈಯಕ್ತಿಕ ಆಪ್ತ ಕಾರ್ಯದರ್ಶಿ’ ಎಂಬ ವದಂತಿಯನ್ನು ದ್ವಿವೇದಿ ನಿರಾಕರಿಸಿದ್ದಾರೆ. “ಅವರು ನನ್ನ ವೈಯಕ್ತಿಕ ಸಹಾಯಕರಲ್ಲ, ಬದಲಿಗೆ ಬಿಕೆಟಿಸಿಯ ಕಾಯಂ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಈ ಹಿಂದೆ ಸಮಿತಿಯ ಮೂವರು ಮಾಜಿ ಅಧ್ಯಕ್ಷರ ಬಳಿಯೂ ಅವರು ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತನಿಖೆಯಲ್ಲಿ ಯಾರೇ ದೋಷಿ ಎಂದು ಕಂಡುಬಂದರೂ ಅವರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ
ಮತ್ತೊಂದೆಡೆ, ಶ್ರೀ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸೋಹನ್ ಸಿಂಗ್ ರಂಗದ್ ಮಾತನಾಡಿ, “ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು ಕೇಳಿಬಂದ ತಕ್ಷಣವೇ ಬದರಿನಾಥ ದೇಗುಲದ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆದರೆ, ಲಭ್ಯವಿರುವ ದೃಶ್ಯಾವಳಿಗಳು ಅಷ್ಟೊಂದು ಸ್ಪಷ್ಟವಾಗಿಲ್ಲ. ಆದಾಗ್ಯೂ, ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ ಸಂಪೂರ್ಣ ವಿವರವನ್ನು ಅಧ್ಯಕ್ಷರ ಗಮನಕ್ಕೆ ತರಲಾಗಿದೆ” ಎಂದು ಹೇಳಿದ್ದಾರೆ.
ಸದ್ಯದಲ್ಲೇ ಪೂರ್ಣ ಪ್ರಮಾಣದ ತನಿಖಾ ಸಮಿತಿ ರಚನೆಯಾಗಲಿದ್ದು, ಲಭ್ಯವಿರುವ ಸಾಕ್ಷ್ಯಾಧಾರಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಿಕೊಂಡು ವರದಿ ಸಿದ್ಧಪಡಿಸಲಿದೆ. ಒಂದು ವೇಳೆ ಅಕ್ರಮ ನಡೆದಿರುವುದು ಸಾಬೀತಾದರೆ, ‘ಶ್ರೀ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ ಕಾಯ್ದೆ 1939’ ಮತ್ತು ಉದ್ಯೋಗಿ ನಡಾವಳಿ ನಿಯಮಾವಳಿಗಳ ಅಡಿಯಲ್ಲಿ ಕಠಿಣ ಇಲಾಖಾ ಮತ್ತು ಶಾಸನಬದ್ಧ ಕ್ರಮ ಜರುಗಿಸಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.
ಇದೇ ವೇಳೆ ಈ ವಿಷಯವು ದೇಶದ ಕೋಟ್ಯಂತರ ಭಕ್ತರ ಆಳವಾದ ನಂಬಿಕೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಭಕ್ತಾದಿಗಳು ಯಾವುದೇ ಆಧಾರರಹಿತ ವದಂತಿಗಳನ್ನು ಅಥವಾ ದಿಕ್ಕು ತಪ್ಪಿಸುವಂತಹ ಆರೋಪಗಳನ್ನು ಹರಡಬಾರದು ಎಂದೂ ಅವರು ಮನವಿ ಮಾಡಿದ್ದಾರೆ.



















