ಹೈದರಾಬಾದ್ : ತೆಲಂಗಾಣದ ಹೈದರಾಬಾದ್ನ ಸಿಕಂದರಾಬಾದ್ ಕಂಟೋನ್ಮೆಂಟ್ನಲ್ಲಿರುವ ಅತಿ ಭದ್ರತೆಯುಳ್ಳ ಮಿಲಿಟರಿ ಪ್ರದೇಶದಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳು ಇತ್ತೀಚೆಗೆ ಅತ್ಯಂತ ಅಚ್ಚರಿಯೆಂಬಂತೆ ಕಳವಾಗಿತ್ತು. ಈ ಪ್ರಕರಣವನ್ನು ಇದೀಗ ಹೈದರಾಬಾದ್ ಪೊಲೀಸರು ಭೇದಿಸಿದ್ದಾರೆ. ಮದ್ರಾಸ್ ರೆಜಿಮೆಂಟ್ನ 20ನೇ ಬಟಾಲಿಯನ್ನ ಕೋಟ್ ಮತ್ತು ಮ್ಯಾಗಜೀನ್ ಕೊಠಡಿಗಳಿಂದ ಶಸ್ತ್ರಾಸ್ತ್ರಗಳನ್ನು ಕದ್ದಿದ್ದ ಆರೋಪದ ಮೇಲೆ ನಿವೃತ್ತ ಹವಲ್ದಾರ್ ಉಪ್ಪುತೋಲ್ಲ ಮಲ್ಲೇಶ್ (37) ಎಂಬಾತನನ್ನು ಬಂಧಿಸಲಾಗಿದೆ.
ಸುದೀರ್ಘ ಸೇವೆ ಮತ್ತು ನಿವೃತ್ತಿಯ ಅಸಮಾಧಾನ
2010ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಮಲ್ಲೇಶ್, 2026ರ ಜೂನ್ 30ರಂದು ಸೇವಾ ನಿವೃತ್ತಿ ಹೊಂದಿದ್ದರು. ಆಗಸ್ಟ್ 30 ಮತ್ತು 31 ರ ಮಧ್ಯರಾತ್ರಿ ಈ ಭಾರಿ ಕಳವು ಕೃತ್ಯ ಎಸಗಲಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಅವಧಿಗೂ ಮುನ್ನ ನಿವೃತ್ತಿ ಹೊಂದಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಮಲ್ಲೇಶ್ ಈ ದುಷ್ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿದೆ. ಕಳವಾದ ಶಸ್ತ್ರಾಸ್ತ್ರಗಳಲ್ಲಿ ನಾಲ್ಕು ಎಕೆ-203 ರೈಫಲ್ಗಳು, ಒಂದು ಇನ್ಸಾಸ್ (INSAS) ರೈಫಲ್, ಏಳು ಪಿಸ್ತೂಲ್ಗಳು, ಮ್ಯಾಗಜೀನ್ಗಳು, ನೈಟ್-ವಿಷನ್ ಬೈನಾಕ್ಯುಲರ್ ಮತ್ತು ಸುಮಾರು 1,900 ರೌಂಡ್ ಮದ್ದುಗುಂಡುಗಳು ಸೇರಿದ್ದವು.
ಸಿಟಿಟಿವಿಯಿಂದ ಬಯಲಾಯ್ತು ಮಾಹಿತಿ
ತೆಲಂಗಾಣ ಡಿಜಿಪಿ ಸಿ.ವಿ. ಆನಂದ್ ನೀಡಿರುವ ಮಾಹಿತಿಯ ಪ್ರಕಾರ, ಕಳವಿನ ನಂತರ ಮಲ್ಲೇಶ್ ಬಾಲಾಜಿ ನಗರದಲ್ಲಿರುವ ತನ್ನ ಮನೆಗೆ ಹಿಂತಿರುಗಿದ್ದರು. ಬೆಳಗಿನ ಜಾವ 4.34ಕ್ಕೆ ಅವರು ಮನೆ ತಲುಪಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಕದ್ದ ಮಾಲನ್ನು ತಮ್ಮ ಬಿಳಿ ಬಣ್ಣದ ಬ್ರೆಝಾ ಕಾರಿನಲ್ಲಿ ಇಟ್ಟುಕೊಂಡಿದ್ದ ಅವರು, ಮೊದಲೇ ದೇವಸ್ಥಾನವೊಂದರಲ್ಲಿ ಅಡಗಿಸಿಟ್ಟಿದ್ದ ರೈಫಲ್ಗಳು ಹಾಗೂ ಮದ್ದುಗುಂಡುಗಳನ್ನು ಕಾರಿಗೆ ಲೋಡ್ ಮಾಡಿಕೊಂಡು ಅಚ್ಚಂಪೇಟೆಯತ್ತ ಪ್ರಯಾಣ ಬೆಳೆಸಿದ್ದರು. ಟೋಲ್ ಗೇಟ್ಗಳಲ್ಲಿ ಸಿಕ್ಕಿಬೀಳುವುದನ್ನು ತಪ್ಪಿಸಲು ಶ್ರೀಶೈಲಂ ರಸ್ತೆಯನ್ನು ಹೊರತುಪಡಿಸಿ, ಔಟರ್ ರಿಂಗ್ ರೋಡ್ ಮತ್ತು ಬೆಂಗಳೂರು ಗೇಟ್ ರಸ್ತೆಗಳನ್ನು ಬಳಸಿ ಸಂಚರಿಸಿದ್ದರು.
ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನ
ತನ್ನ ಮೇಲೆ ಯಾವುದೇ ಅನುಮಾನ ಬಾರದಂತೆ ತಡೆಯಲು ಮತ್ತು ತಾನು ಬೇರೆ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದೇನೆ ಎಂದು ಬಿಂಬಿಸಲು ಮಲ್ಲೇಶ್ ದಾರಿಯಲ್ಲಿ ಪ್ರಯಾಣಿಕರನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಸಾಗರ್ ರಿಂಗ್ ರೋಡ್ ಬಳಿ ನಾಲ್ಕು ಜನರನ್ನು ಹತ್ತಿಸಿಕೊಂಡು ದೇವರಕೊಂಡದಲ್ಲಿ ಇಳಿಸಿ ಹಣ ಪಡೆದಿದ್ದರು. ತದನಂತರ ದಿಂಡಿ ಬಳಿ ಮತ್ತಿಬ್ಬರು ಪ್ರಯಾಣಿಕರನ್ನು ಕರೆದೊಯ್ದಿದ್ದರು. ಆಗಸ್ಟ್ 31 ರ ಮಧ್ಯಾಹ್ನ 1.15 ರ ಸುಮಾರಿಗೆ ಅವರು ಅಚ್ಚಂಪೇಟೆ ತಲುಪಿದ್ದರು.
ಎಲ್ಲ ಶಸ್ತ್ರಾಸ್ತ್ರಗಳೂ ವಶಕ್ಕೆ
ತಮ್ಮ ಮೇಲಿನ ಅನುಮಾನ ಹೆಚ್ಚಾಗುತ್ತಿದ್ದಂತೆ ಗಾಬರಿಗೊಂಡ ಮಲ್ಲೇಶ್ ಸೆಪ್ಟೆಂಬರ್ 6 ರಂದು ಶಸ್ತ್ರಾಸ್ತ್ರಗಳ ಜಾಗವನ್ನು ಬದಲಾಯಿಸಲು ಯತ್ನಿಸಿದ್ದರು. ಅಂತಿಮವಾಗಿ ಸೆಪ್ಟೆಂಬರ್ 10 ರಂದು ಪೊಲೀಸರ ಮುಂದೆ ಅವರೇ ಹಾಜರಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೈದರಾಬಾದ್ ಟಾಸ್ಕ್ ಫೋರ್ಸ್ ತಂಡವು ಆರೋಪಿಯಿಂದ ಕಳವು ಮಾಡಲಾಗಿದ್ದ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಕಳವಿನ ಹಿಂದಿನ ನೈಜ ಉದ್ದೇಶ ಮತ್ತು ಸಂಚಿನ ಕುರಿತು ಮತ್ತಷ್ಟು ಆಳವಾದ ತನಿಖೆ ಮುಂದುವರಿದಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ InStem ಸಂಸ್ಥೆಯಲ್ಲಿ ನೇಮಕಾತಿ: ಬಿ.ಇ, ಬಿ.ಟೆಕ್ ಮುಗಿಸಿದವರಿಗೆ ಅವಕಾಶ



















