ಕಠ್ಮಂಡು : ನೇಪಾಳದ ಭೀಕರ ಪ್ರವಾಹದ ನಡುವೆ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಜನರ ರೋಮಾಂಚಕ ಹಾಗೂ ಕಣ್ಣೀರ ಕಥನಗಳು ಒಂದೊಂದಾಗಿ ಹೊರಬರುತ್ತಿವೆ. ಪ್ರವಾಹದಲ್ಲಿ ಸಿಲುಕಿದ್ದ ಬಾಲಕನೊಬ್ಬ ತನ್ನ ಸಮಯಪ್ರಜ್ಞೆ ಮತ್ತು ಸಾಹಸದಿಂದ ಸೈನಿಕರ ಗಮನ ಸೆಳೆದು, ಗಾಳಿಯಲ್ಲೇ ಹಾರಾಡುತ್ತಿದ್ದ ಹೆಲಿಕಾಪ್ಟರ್ ಏರಿ ಜೀವ ಉಳಿಸಿಕೊಂಡಿರುವ ಅತ್ಯಂತ ರೋಮಾಂಚಕಾರಿ ಘಟನೆಯೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯ ಜನರ ಮೈಜುಮ್ ಎನ್ನಿಸುವಂತಿದೆ.
ಚಾವಣಿ ಮೇಲೆ ನಿಂತು ಕೈಬೀಸಿದ
ಸುತ್ತಲೂ ಪ್ರಚಂಡ ವೇಗದಲ್ಲಿ ಹರಿಯುತ್ತಿದ್ದ ಪ್ರವಾಹದ ನೀರಿನ ಮಧ್ಯೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದ ಮನೆಯೊಂದರ ಛಾವಣಿಯ ಮೇಲೆ ಬಾಲಕ ಸಿಲುಕಿಕೊಂಡಿದ್ದ. ತಪ್ಪಿಸಿಕೊಳ್ಳಲು ಯಾವುದೇ ಹಾದಿಯಿಲ್ಲದೆ ಆತಂಕದಲ್ಲಿದ್ದ ಬಾಲಕ, ಆಕಾಶದಲ್ಲಿ ರಕ್ಷಣಾ ಹೆಲಿಕಾಪ್ಟರ್ ಹಾರಾಡುವುದನ್ನು ಕಂಡ ತಕ್ಷಣವೇ ತಡಮಾಡದೇ ತನ್ನ ಮೈಮೇಲಿದ್ದ ಟಿ-ಶರ್ಟ್ ಬಿಚ್ಚಿ ಗಾಳಿಯಲ್ಲಿ ಜೋರಾಗಿ ಬೀಸಲು ಪ್ರಾರಂಭಿಸಿದ. ಹೆಲಿಕಾಪ್ಟರ್ನಲ್ಲಿದ್ದ ರಕ್ಷಣಾ ಸಿಬ್ಬಂದಿಗೆ ತಾನಿರುವ ಸ್ಥಳದ ಸುಳಿವು ನೀಡಲು ಆತ ನಿರಂತರವಾಗಿ ಬಟ್ಟೆಯನ್ನು ಬೀಸುತ್ತಾ ಸಹಾಯಕ್ಕಾಗಿ ವಿನಂತಿಸಿದ.
ಸೇನಾ ಪೈಲಟ್ನ ಅದ್ಭುತ ಕೌಶಲ, ಬಾಲಕನ ಸಾಹಸ
ಬಾಲಕನ ಸಂಕೇತವನ್ನು ಗಮನಿಸಿದ ನೇಪಾಳ ಸೇನೆಯ ರಕ್ಷಣಾ ಹೆಲಿಕಾಪ್ಟರ್ ತಕ್ಷಣವೇ ಮನೆಯ ಚಾವಣಿಯ ಸಮೀಪಕ್ಕೆ ಬಂದು ಗಾಳಿಯಲ್ಲೇ ಅತ್ಯಂತ ಜಾಗರೂಕತೆಯಿಂದ ನಿಂತಿತು. ಬಾಲಕ ಕೂಡ ಸ್ವಲ್ಪವೂ ಧೈರ್ಯಗೆಡದೆ ಹೆಲಿಕಾಪ್ಟರ್ ಸಮೀಪಕ್ಕೆ ಬರುತ್ತಿದ್ದಂತೆ ಅದರ ಲ್ಯಾಂಡಿಂಗ್ ಸ್ಕಿಡ್ ಅನ್ನು (ಲ್ಯಾಂಡಿಂಗ್ ರಾಡ್) ಗಟ್ಟಿಯಾಗಿ ಹಿಡಿದುಕೊಂಡು ಹತ್ತಲಾರಂಭಿಸಿದ. ತಕ್ಷಣವೇ ಹೆಲಿಕಾಪ್ಟರ್ನ ಬಾಗಿಲಿನಲ್ಲಿ ಕುಳಿತಿದ್ದ ಯೋಧರೊಬ್ಬರು ತಮ್ಮ ಕೈ ಚಾಚಿ ಬಾಲಕನ ಕೈಯನ್ನು ಗಟ್ಟಿಯಾಗಿ ಹಿಡಿದು, ಆತನನ್ನು ಮೇಲಕ್ಕೆ ಎಳೆದುಕೊಂಡು ಸುರಕ್ಷಿತವಾಗಿ ವಿಮಾನದೊಳಗೆ ಸೇರಿಸಿಕೊಂಡರು.
ನೆರೆದಿದ್ದ ಜನರಲ್ಲಿ ನಿಟ್ಟುಸಿರು, ಪ್ರಶಂಸೆಗಳ ಮಹಾಪೂರ
ನೆಲದ ಮೇಲೆ ನಿಂತು ಈ ರೋಮಾಂಚಕಾರಿ ಹಾಗೂ ಕಠಿಣ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದ ಜನರು ಕ್ಷಣಕಾಲ ಉಸಿರು ಬಿಗಿಹಿಡಿದು ಕುಳಿತಿದ್ದರು. ಬಾಲಕ ಸುರಕ್ಷಿತವಾಗಿ ಹೆಲಿಕಾಪ್ಟರ್ ಮೇಲೇರುತ್ತಿದ್ದಂತೆ ಸ್ಥಳದಲ್ಲಿದ್ದವರೆಲ್ಲರೂ ಹರ್ಷೋದ್ಗಾರ ಮಾಡಿ, ಚಪ್ಪಾಳೆ ತಟ್ಟುತ್ತಾ ನಿಟ್ಟುಸಿರು ಬಿಟ್ಟರು. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಹದಗೆಟ್ಟ ವಾತಾವರಣದಲ್ಲೂ ಅತ್ಯಂತ ಕೌಶಲದಿಂದ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿದ ನೇಪಾಳ ಸೇನೆಯ ಪೈಲಟ್ಗಳು ಹಾಗೂ ಯೋಧರ ಸಾಹಸಕ್ಕೆ ಜಗತ್ತಿನಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ‘ಇದು ನಮಗೆ ಎರಡನೇ ಜನ್ಮ’ : ನೇಪಾಳದಿಂದ ತಮಿಳುನಾಡಿಗೆ ಮರಳಿದ 21 ಯಾತ್ರಿಕರ ನಿಟ್ಟುಸಿರು



















