ಬೆಂಗಳೂರು : ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ಇಂದಿನಿಂದ ಬೆಂಗಳೂರಿನಲ್ಲಿ ಫುಟ್ಪಾತ್ ಒತ್ತುವರಿ ತೆರವಿನ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದೆ. ನಗರದ ಸುಮಾರು 2,000 ಕಿಲೋಮೀಟರ್ ರಸ್ತೆಗಳಲ್ಲಿ ಫುಟ್ಪಾತ್ಗಳನ್ನು ಅತಿಕ್ರಮಿಸಿರುವ ಅಂಗಡಿಗಳು, ಸ್ಟಾಲ್ಗಳು, ಜಾಹೀರಾತು ಫಲಕಗಳು ಹಾಗೂ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಫುಟ್ಪಾತ್ಗಳನ್ನು ಅತಿಕ್ರಮಿಸಿರುವ ಹೋಟೆಲ್ಗಳು ಮತ್ತು ಅಂಗಡಿಗಳ ವಿರುದ್ಧ ಭಾರಿ ದಂಡ ವಿಧಿಸುವ ಜೊತೆಗೆ, ನಿಯಮ ಉಲ್ಲಂಘನೆ ಮುಂದುವರಿದರೆ ವ್ಯಾಪಾರ ಪರವಾನಗಿಯನ್ನೇ ರದ್ದುಪಡಿಸುವ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ. ಅಲ್ಲದೆ, ಫುಟ್ಪಾತ್ಗಳಲ್ಲಿ ವಾಹನ ನಿಲುಗಡೆಗೂ ಸಂಪೂರ್ಣ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳನ್ನು ಕಡ್ಡಾಯವಾಗಿ ಟೋಯಿಂಗ್ ಮಾಡುವಂತೆ ಸೂಚಿಸಲಾಗಿದೆ.
ಅಕ್ರಮ ಒತ್ತುವರಿಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದು, ಪಾದಚಾರಿಗಳಿಗೆ ತೊಂದರೆ ಉಂಟುಮಾಡುವ ಎಲ್ಲಾ ರೀತಿಯ ಅತಿಕ್ರಮಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇನ್ನೊಂದೆಡೆ, ಈ ಕಾರ್ಯಾಚರಣೆಯಿಂದ ಬೀದಿಬದಿ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿದೆ. “ವ್ಯಾಪಾರ ನಡೆಸಲು ಪರ್ಯಾಯ ಸ್ಥಳ ಕಲ್ಪಿಸದೆ ತೆರವು ಮಾಡಿದರೆ ಜೀವನೋಪಾಯಕ್ಕೆ ಸಂಕಷ್ಟವಾಗುತ್ತದೆ” ಎಂದು ವ್ಯಾಪಾರಿಗಳು ಸರ್ಕಾರದ ಮುಂದೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮಂಗಳೂರಿನಲ್ಲಿ ದುರಂತ.. ಭಾರೀ ಮಳೆಗೆ ಮನೆ ಮೇಲೆ ತಡೆಗೋಡೆ ಕುಸಿದು ಮೂವರು ಸಾವು!



















