ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ 25 ವರ್ಷದ ಅಸಾಪೂಲ್ ಮಲ್ಲಿಕ್ ಎಂಬ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಅಸಾಪೂಲ್ ಮಲ್ಲಿಕ್ ಜಿಗಣಿಯಲ್ಲಿ ವಾಸವಿದ್ದು, ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.
ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ಹಾಗೂ ಡಿಸಿಪಿ ನಾರಾಯಣ್ ನೇತೃತ್ವದ ವಿಶೇಷ ತಂಡ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿದ್ದ ವೇಳೆ ಈತನ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸುಮಾರು ಒಂದು ತಿಂಗಳ ಕಾಲ ಮಾಹಿತಿ ಕಲೆಹಾಕಿ ಬಳಿಕ ಹೆಬ್ಬಗೋಡಿ ಪೊಲೀಸರು ಇನ್ಸ್ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡದ ಮೂಲಕ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಅಸಾಪೂಲ್ ಮಲ್ಲಿಕ್ TTP (Tehrik-e-Taliban Pakistan) ಸಂಘಟನೆಯ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ. ಪಾಕಿಸ್ತಾನ ಸೇನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಮೊಬೈಲ್ನಲ್ಲಿ ಸಂದೇಶಗಳು ಮತ್ತು ಆಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಮಸೀದಿಗಳು ಹಾಗೂ ಮುಸ್ಲಿಮರ ಮೇಲೆ ಪಾಕಿಸ್ತಾನ ಸೇನೆ ದೌರ್ಜನ್ಯ ನಡೆಸುತ್ತಿದೆ ಎಂಬ ವಿಚಾರಗಳನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ಇಸ್ರೇಲ್–ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಪಾಕಿಸ್ತಾನ ಸೇನೆ ಇಸ್ರೇಲ್ ಪರವಾಗಿ ಸಹಾಯ ಮಾಡುತ್ತಿದೆ ಮತ್ತು ಪ್ಯಾಲೆಸ್ಟೈನ್ ಮುಸ್ಲಿಮರಿಗೆ ಸಹಾಯ ಮಾಡುತ್ತಿಲ್ಲ ಎಂಬ ವಿಚಾರಗಳ ಬಗ್ಗೆಯೂ ಪೋಸ್ಟ್ಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.
ತನಿಖೆ ವೇಳೆ ಅಸಾಪೂಲ್ ಮಲ್ಲಿಕ್ಗೆ ಅಫ್ಘಾನಿಸ್ತಾನ ಮೂಲದ ಇಮ್ರಾನ್ ಅಹಿಂದರ್ ಎಂಬ TTP ಸದಸ್ಯನ ಪರಿಚಯವಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇಮ್ರಾನ್ ಅಹಿಂದರ್ನ ಸಹಾಯ ಪಡೆದುಕೊಂಡು ಅಫ್ಘಾನಿಸ್ತಾನಕ್ಕೆ ತೆರಳಲು ಪಾಸ್ಪೋರ್ಟ್ ಮಾಡಿಸಿಕೊಂಡು ವೀಸಾಗೆ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಅಫ್ಘಾನಿಸ್ತಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಅಲ್ಲಿ ತೆರಳಿ ತರಬೇತಿ ಪಡೆದು ಮತ್ತೆ ಭಾರತಕ್ಕೆ ವಾಪಸ್ ಬಂದು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇತ್ತು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಅಸಾಪೂಲ್ ಮಲ್ಲಿಕ್ ಪಾಕಿಸ್ತಾನ, ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಭಾವಿಸಿದ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಬಗ್ಗೆ ಸಂಘಟನೆಯೊಂದಿಗೆ ಚರ್ಚೆ ನಡೆಸಿದ್ದ ಎನ್ನಲಾಗಿದೆ. ಈತ ಪಾಕಿಸ್ತಾನ ಸೇನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಎನ್ನಲಾಗಿದ್ದು, ಸಂಘಟನೆಯ ವಿಚಾರಧಾರೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ಕೆಲ ಸಂಘಟನೆಗಳಿಗೆ ಹಣವನ್ನೂ ವರ್ಗಾವಣೆ ಮಾಡಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸಾಪೂಲ್ ಮಲ್ಲಿಕ್ ಬೆಂಗಳೂರಿಗೆ ಎರಡನೇ ಬಾರಿಗೆ ಬಂದು ನೆಲೆಸಿದ್ದ ಎನ್ನಲಾಗಿದೆ. ಜಿಗಣಿಯಲ್ಲಿ ಈತನೊಂದಿಗೆ ಮತ್ತೊಬ್ಬ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೂ ವಾಸವಾಗಿದ್ದ ಎನ್ನಲಾಗಿದ್ದು, ಆತ ಸದ್ಯ ಪರಾರಿಯಾಗಿದ್ದಾನೆ. ಆತನ ಪಾತ್ರದ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್ ವೇಳೆ ಶಂಕಿತನ ಚಟುವಟಿಕೆಗಳು ಪೊಲೀಸರ ಗಮನಕ್ಕೆ ಬಂದಿದ್ದು, ಬಳಿಕ ನಿರಂತರವಾಗಿ ಫಾಲೋಅಪ್ ನಡೆಸಿ ಬಂಧಿಸಲಾಗಿದೆ.
ಸದ್ಯ ಅಸಾಪೂಲ್ ಮಲ್ಲಿಕ್ನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಆತನಿಗೆ ಉಗ್ರ ಸಂಘಟನೆಯೊಂದಿಗೆ ಇದ್ದ ಸಂಪರ್ಕ, ವಿದೇಶಕ್ಕೆ ತೆರಳುವ ಪ್ರಯತ್ನ, ಹಣ ವರ್ಗಾವಣೆ, ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳು ಹಾಗೂ ದಾಳಿಗೆ ಸಂಚು ರೂಪಿಸಿದ್ದಾನೆಯೇ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಪರಾರಿಯಾಗಿರುವ ಮತ್ತೊಬ್ಬ ವ್ಯಕ್ತಿಯ ಪತ್ತೆಗೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣು : ಟೀಮ್ ಇಂಡಿಯಾ ಮುಖ್ಯ ಆಯ್ಕೆಗಾರನಾಗಿ ಅಗರ್ಕರ್ ಅಧಿಕಾರಾವಧಿ ವಿಸ್ತರಣೆ



















