ಹೈದರಾಬಾದ್ : ಪತಿ ಹಾಗೂ ಅತ್ತೆಯ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತು ಐದು ತಿಂಗಳ ಗರ್ಭಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹುಟ್ಟಲಿರುವ ಮಗುವಿನ ಪಿತೃತ್ವವನ್ನು ಶಂಕಿಸಿ, ಶಿಶುವಿನ ಡಿಎನ್ಎ ಪರೀಕ್ಷೆ ನಡೆಸುವಂತೆ ಪತಿ ಪಟ್ಟು ಹಿಡಿದಿದ್ದೇ ಪತ್ನಿಯ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ. ತೆಲಂಗಾಣದ ಮೇದಕ್ ಜಿಲ್ಲೆಯ ಅಲ್ಲಾದುರ್ಗ್ ಮಂಡಲದ ಗಡಿಪೆದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಸುಶ್ಮಿತಾ (23) ಎಂದು ಗುರುತಿಸಲಾಗಿದೆ.
ಸೀಮಂತದ ಸಿದ್ಧತೆಯ ನಡುವೆ ಗದ್ದಲ
ಸುಶ್ಮಿತಾ ಅವರಿಗೆ ಸುಮಾರು 18 ತಿಂಗಳ ಹಿಂದೆಯಷ್ಟೇ ಜಿ. ಅಭಿಲಾಷ್ ಎಂಬಾತನೊಂದಿಗೆ ವಿವಾಹವಾಗಿತ್ತು. ಸದ್ಯ ಐದು ತಿಂಗಳ ಗರ್ಭಿಣಿಯಾಗಿದ್ದ ಸುಶ್ಮಿತಾ ಅವರ ಸೀಮಂತ ಕಾರ್ಯದ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಜೂನ್ 23 ರಂದು ಅವರ ಹೆತ್ತವರು ಮಗಳ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲೇ ಗದ್ದಲ ಸೃಷ್ಟಿಸಿದ ಅಭಿಲಾಷ್, ಹೆಂಡತಿಯ ನಡತೆಯನ್ನು ಶಂಕಿಸಿ, ನನಗೆ ಆಕೆಯ ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಯಾರು ಎಂಬ ಬಗ್ಗೆಯೂ ಅನುಮಾನವಿದೆ. ಹಾಗಾಗಿ ಹುಟ್ಟಲಿರುವ ಮಗುವಿಗೆ ಮೊದಲು ಡಿಎನ್ಎ ಪರೀಕ್ಷೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾನೆ. ಆಗ ಸ್ಥಳೀಯ ಹಿರಿಯರು ಮಧ್ಯಪ್ರವೇಶಿಸಿ ಜಗಳವನ್ನು ತಿಳಿಗೊಳಿಸಿದ್ದರು. ಆದರೆ ಆ ಬಳಿಕವೂ ಕಿರುಕುಳ ಮುಂದುವರಿದಿದ್ದರಿಂದ ಮನನೊಂದ ಸುಶ್ಮಿತಾ ಎರಡು ದಿನಗಳ ನಂತರ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರೋಪಿಗಳ ಬಂಧನ
ಮಗಳ ಸಾವಿಗೆ ಪತಿ ಮತ್ತು ಅತ್ತೆಯ ಕಿರುಕುಳವೇ ಕಾರಣ ಎಂದು ತಾಯಿ ಜನಾಬಾಯಿ ಅಲ್ಲಾದುರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಸದ್ಯ ಮೃತದೇಹವನ್ನು ಸಂಗಾರೆಡ್ಡಿ ಸರ್ಕಾರಿ ಸಾರ್ವತ್ರಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಸುಶ್ಮಿತಾ ಪತಿ ಜಿ. ಅಭಿಲಾಷ್ ಮತ್ತು ಆತನ ತಾಯಿಯನ್ನು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಲ್ಲಾದುರ್ಗ್ ಪೊಲೀಸ್ ಉಪನಿರೀಕ್ಷಕ ಡಿ. ಶಂಕರ್ ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲು
ಮೃತರ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ ಮತ್ತು ಆತನ ಸಂಬಂಧಿಕರಿಂದ ಕ್ರೌರ್ಯ (ಸೆಕ್ಷನ್ 85), ಆತ್ಮಹತ್ಯೆಗೆ ಪ್ರಚೋದನೆ (ಸೆಕ್ಷನ್ 108) ಹಾಗೂ ಜಂಟಿ ಅಪರಾಧದ ಉದ್ದೇಶಕ್ಕೆ ಸಂಬಂಧಿಸಿದ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ವೈದ್ಯರ ನಿರ್ಲಕ್ಷ್ಯಕ್ಕೆ ಕಣ್ಣನ್ನೇ ಕಳೆದುಕೊಂಡ 19 ತಿಂಗಳ ಕಂದಮ್ಮ!



















