ನವದೆಹಲಿ : 2025ರ ನವೆಂಬರ್ನಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಸಮೀಪ 11 ಜನರ ಸಾವಿಗೆ ಕಾರಣವಾದ ಭೀಕರ ಕಾರು ಬಾಂಬ್ ಸ್ಫೋಟದ ಹಿಂದೆ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್ಖೈದಾದ ಕೈವಾಡವಿತ್ತು ಎಂಬ ಆಘಾತಕಾರಿ ಅಂಶವನ್ನು ವಿಶ್ವಸಂಸ್ಥೆ ದೃಢಪಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಉಸ್ತುವಾರಿ ತಂಡವು ತನ್ನ ಇತ್ತೀಚಿನ ವರದಿಯಲ್ಲಿ ಈ ದಾಳಿಯನ್ನು ‘ಅಲ್-ಖೈದಾ ಇನ್ ದಿ ಇಂಡಿಯನ್ ಸಬ್ಕಾಂಟಿನೆಂಟ್’ (ಭಾರತ ಉಪಖಂಡದ ಅಲ್ಖೈದಾ-AQIS) ನಡೆಸಿದೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದ್ದು, ಈ ಸಂಘಟನೆಯು ದಕ್ಷಿಣ ಏಷ್ಯಾದಾದ್ಯಂತ ತನ್ನ ಜಾಲವನ್ನು ವಿಸ್ತರಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ವಿಕೇಂದ್ರೀಕೃತ ಜಾಲದ ಮೂಲಕ ಹೆಚ್ಚಿದ ವಿಧ್ವಂಸಕ ಶಕ್ತಿ
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಈ ಹಿಂದೆ ಆಂತರಿಕವಾಗಿ ದುರ್ಬಲಗೊಂಡಿದ್ದ ಎಸ್ಕ್ಯುಐಎಸ್ ಸಂಘಟನೆಯು ಈಗ ಸಣ್ಣ ಮತ್ತು ಹಂಚಿಹೋಗಿರುವ ರಹಸ್ಯ ಘಟಕಗಳ ಮೂಲಕ ತನ್ನ ಜಾಲವನ್ನು ಬಲಪಡಿಸಿಕೊಂಡಿದೆ. ಬೃಹತ್ ಗುಂಪುಗಳಾಗಿ ಕಾರ್ಯಾಚರಣೆ ನಡೆಸುವ ಬದಲಿಗೆ, ಭದ್ರತಾ ಸಂಸ್ಥೆಗಳಿಗೆ ಚಳ್ಳೆಹಣ್ಣು ತಿನಿಸಲು ಸಣ್ಣ ಸಣ್ಣ ತಂಡಗಳನ್ನು ರಚಿಸಿಕೊಂಡು ಹಣಕಾಸು ಮತ್ತು ಲಾಜಿಸ್ಟಿಕ್ಸ್ ನೆರವು ಪಡೆಯುತ್ತಿದೆ.
2025ರ ನವೆಂಬರ್ 10 ರಂದು ನಡೆದ ಕೆಂಪುಕೋಟೆ ಸ್ಫೋಟವು ಈ ಉಗ್ರ ಸಂಘಟನೆಯ ಮರುಸಂಘಟನೆಗೆ ಸಾಕ್ಷಿಯಾಗಿದೆ. ಉಮರ್ ಉನ್-ನಬಿ ಎಂಬ ಮಾಜಿ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕನು ಈ ಸ್ಫೋಟದ ರೂವಾರಿಯಾಗಿದ್ದು, ಘಟನೆಯಲ್ಲಿ ಆತನೂ ಸಾವನ್ನಪ್ಪಿದ್ದ. ಈ ಪ್ರಕರಣದ ಮೂಲ ತನಿಖೆ ನಡೆಸಿದ್ದ ಭಾರತದ ಎನ್ಐಎ (NIA) ಪತ್ತೆ ಹಚ್ಚಿದ್ದ ಅಂಶಗಳಿಗೆ ಈಗ ವಿಶ್ವಸಂಸ್ಥೆಯ ವರದಿಯೂ ಜಾಗತಿಕ ಮುದ್ರೆ ಒತ್ತಿದೆ.
ದಾಳಿಗಳಿಗೆ ‘ಎಐ’ ಹಾಗೂ ‘ಚಾಟ್ಜಿಪಿಟಿ’ ಬಳಕೆ!
ತಂತ್ರಜ್ಞಾನ ಬೆಳೆದಂತೆ ಉಗ್ರರ ದಾಳಿಯ ಶೈಲಿಯೂ ಬದಲಾಗುತ್ತಿರುವುದು ಈ ವರದಿಯಿಂದ ಜಗತ್ತಿಗೆ ತಿಳಿದುಬಂದಿದೆ. ಎಸ್ಕ್ಯುಐಎಸ್ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳು ಬಾಂಬ್ ತಯಾರಿಕೆ, ದಾಳಿಯ ಸ್ಥಳಗಳ ಆಯ್ಕೆ ಮತ್ತು ತಾಂತ್ರಿಕ ಮಾಹಿತಿಗಳಿಗಾಗಿ ಚಾಟ್ಜಿಪಿಟಿ (ChatGPT) ಯಂತಹ ಕೃತಕ ಬುದ್ಧಿಮತ್ತೆ (AI) ಉಪಕರಣಗಳನ್ನು ಬಳಸಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ, ಐಸಿಸ್-ಕೆ (ISIL-K) ನಂತಹ ಸಂಘಟನೆಗಳು ತಮ್ಮ ಧರ್ಮಾಂಧ ಪ್ರಚಾರದ ವಿಷಯಗಳನ್ನು ಪ್ರಪಂಚದ ನಾನಾ ಭಾಷೆಗಳಿಗೆ ತಕ್ಷಣವೇ ಭಾಷಾಂತರಿಸಿ ಪ್ರಸಾರ ಮಾಡಲು ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬಾಂಗ್ಲಾದೇಶಕ್ಕೂ ವಿಸ್ತರಿಸುವ ಆತಂಕ
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿ ಭಾಗಗಳಲ್ಲಿ ಸಕ್ರಿಯವಾಗಿರುವ ಎಸ್ಕ್ಯುಐಎಸ್, ಈಗ ಬಾಂಗ್ಲಾದೇಶವನ್ನು ಕೇಂದ್ರೀಕರಿಸಿಕೊಂಡು ದಕ್ಷಿಣ ಏಷ್ಯಾದಾದ್ಯಂತ ತನ್ನ ಕರಾಳ ಹಸ್ತವನ್ನು ವಿಸ್ತರಿಸಲು ಸಂಚು ರೂಪಿಸುತ್ತಿದೆ. ಇದರ ಜೊತೆಗೆ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಟಿಟಿಪಿ (TTP) ಉಗ್ರರಿಗೆ ಬೆಂಬಲ ನೀಡುತ್ತಿರುವುದರಿಂದ ಪಾಕಿಸ್ತಾನ-ಆಫ್ಘನ್ ಗಡಿಯಲ್ಲಿ ಸೇನಾ ಸಂಘರ್ಷಗಳು ತೀವ್ರಗೊಂಡಿವೆ ಎಂದು ವರದಿ ಹೇಳಿದೆ. ಅಲ್-ಖೈದಾ ಬೆಂಬಲಿತ ಉಗ್ರರು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಜೊತೆಗೆ ಜೈವಿಕ ಹಾಗೂ ರಾಸಾಯನಿಕ ಆಯುಧಗಳ ಮೇಲೆಯೂ ಕಣ್ಣಿಟ್ಟಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ : 13 ವರ್ಷದ ಬಾಲಕಿಗೆ ಪಾದ್ರಿಯಿಂದ ಲೈಂಗಿಕ ಕಿರುಕುಳ ಆರೋಪ ; ಪೋಕ್ಸೋ ಪ್ರಕರಣ ದಾಖಲು!



















