ನವದೆಹಲಿ : ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (CBSE) ಡಿಜಿಟಲ್ ಮೌಲ್ಯಮಾಪನ ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿ ದೇಶದ ಗಮನ ಸೆಳೆದಿದ್ದ 12ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್, ಈಗ ಪಾರದರ್ಶಕತೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾನೆ. ಭಾರತ ಸರ್ಕಾರದ ಕೇಂದ್ರೀಯ ಸಾರ್ವಜನಿಕ ಸಂಗ್ರಹಣೆ (CPP) ಪೋರ್ಟಲ್ನಿಂದ ಸುಮಾರು 1.66 ಕೋಟಿಗೂ ಅಧಿಕ ಖರೀದಿ ಮತ್ತು ಟೆಂಡರ್ ದಾಖಲೆಗಳನ್ನು ಕಲೆಹಾಕಿ, ಸಾಮಾನ್ಯ ನಾಗರಿಕರು ಹಾಗೂ ಸಂಶೋಧಕರಿಗಾಗಿ ಮುಕ್ತ ಸಾರ್ವಜನಿಕ ಪೋರ್ಟಲ್ ವೊಂದನ್ನು ಸಿದ್ಧಪಡಿಸಿದ್ದಾನೆ.
ತನ್ನ ಈ ಹೊಸ ತಂತ್ರಜ್ಞಾನ ಆಧಾರಿತ ಉಪಕ್ರಮದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಘೋಷಿಸಿರುವ ಸಾರ್ಥಕ್, “ಪಾರದರ್ಶಕತೆ ಎಂಬುದು ಪ್ರತಿಯೊಬ್ಬರಿಗೂ ಸುಲಭವಾಗಿ ಕೈಗೆಟುಕುವಂತಿರಬೇಕು. ಇಂದಿನಿಂದ ಅದು ಸಾಧ್ಯವಾಗುತ್ತಿದೆ” ಎಂದು ಬರೆದುಕೊಂಡಿದ್ದಾನೆ. ಕಳೆದ ಎರಡು ವಾರಗಳಲ್ಲಿ ಸಿಪಿಪಿ ಪೋರ್ಟಲ್ನಿಂದ ಕೋಟ್ಯಂತರ ಸಾರ್ವಜನಿಕ ವೆಚ್ಚದ ದಾಖಲೆಗಳನ್ನು ಮುಕ್ತಗೊಳಿಸಲಾಗಿದ್ದು, ನಾಗರಿಕರು, ಪತ್ರಕರ್ತರು ಮತ್ತು ಸಂಶೋಧಕರು ಸರ್ಕಾರಿ ಒಪ್ಪಂದಗಳನ್ನು ಸುಲಭವಾಗಿ ಪರಿಶೀಲಿಸಲು ಇದು ಸಹಕಾರಿಯಾಗಲಿದೆ. ಸಾರ್ವಜನಿಕ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಡೇಟಾಬೇಸ್ ಅನ್ನು ಸ್ವತಂತ್ರವಾಗಿ ಡೌನ್ಲೋಡ್ ಮಾಡಿಕೊಂಡು ವಿಶ್ಲೇಷಿಸುವಂತೆ ಆತ ಜನರಿಗೆ ಕರೆ ನೀಡಿದ್ದಾನೆ.
ಸಂಸತ್ ಸಮಿತಿ ಮೆಚ್ಚುಗೆ ಗಳಿಸಿದ್ದ ಯುವ ಸಂಶೋಧಕ
ಸಾರ್ಥಕ್ ಈ ಹಿಂದೆ ಸಿಬಿಎಸ್ಇಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಸಿಸ್ಟಮ್ ಮತ್ತು ಹನ್ನೆರಡನೇ ತರಗತಿಯ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನಕ್ಕೆ ಸಂಬಂಧಿಸಿದ ಟೆಂಡರ್ ದಾಖಲೆಗಳ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ. ಆತನ ಆಳವಾದ ಸಂಶೋಧನೆ ಮತ್ತು ಆವಿಷ್ಕಾರಗಳು ಎಷ್ಟು ಪ್ರಭಾವಶಾಲಿಯಾಗಿದ್ದವೆಂದರೆ, ಶಿಕ್ಷಣದ ಮೇಲಿನ ಸಂಸದೀಯ ಸ್ಥಾಯೀ ಸಮಿತಿಯ ಮುಂದೆ ಹಾಜರಾಗಿ ಮೌಲ್ಯಮಾಪನ ವ್ಯವಸ್ಥೆ ಹಾಗೂ ಖರೀದಿ ಪ್ರಕ್ರಿಯೆಗಳ ಕುರಿತು ಪ್ರಸ್ತುತಿ ನೀಡಲು ಆತನಿಗೆ ಆಹ್ವಾನ ಸಿಕ್ಕಿತ್ತು. ಈಗ ಆತನ ಕಾರ್ಯವ್ಯಾಪ್ತಿ ಕೇವಲ ಶಿಕ್ಷಣ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಇಡೀ ದೇಶದ ಸಾರ್ವಜನಿಕ ಹಣಕಾಸು ವೆಚ್ಚಗಳ ಪಾರದರ್ಶಕತೆಯತ್ತ ವಿಸ್ತರಿಸಿದೆ.
ವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಯಶೋಗಾಥೆ
ಈ ಇಡೀ ಹೋರಾಟದ ಹಿಂದೆ ಸ್ವಾರಸ್ಯಕರ ಹಿನ್ನೆಲೆಯಿದೆ. ಸಾರ್ಥಕ್ ಆರಂಭದಲ್ಲಿ ತನ್ನದೇ ಆದ ದ್ವಿತೀಯ ಪಿಯುಸಿ (ಕ್ಲಾಸ್ 12) ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದಾಗ ಅಂಕಗಳ ಹಂಚಿಕೆಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಿದ್ದ. ಈ ವೇಳೆ ಡಿಜಿಟಲ್ ಮೌಲ್ಯಮಾಪನದ ಬಗ್ಗೆ ದೇಶಾದ್ಯಂತ ವಿದ್ಯಾರ್ಥಿಗಳಿಂದ ಆಕ್ಷೇಪಗಳು ಕೇಳಿಬಂದಾಗ, ಆತ ಸಿಬಿಎಸ್ಇ ಸಾರ್ವಜನಿಕ ವಲಯದಲ್ಲಿ ಲಭ್ಯವಿಟ್ಟಿದ್ದ ವಿವಿಧ ಹಂತದ ಟೆಂಡರ್ ದಾಖಲೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ. ಬಿಡ್ಡಿಂಗ್ ಪ್ರಕ್ರಿಯೆಯ ಬೇರೆ ಬೇರೆ ಹಂತಗಳಲ್ಲಿ ಅರ್ಹತಾ ಮಾನದಂಡಗಳು, ಕಾರ್ಯಕ್ಷಮತೆಯ ನಿಯಮಗಳು ಮತ್ತು ಪ್ರಮಾಣೀಕರಣದ ಅಗತ್ಯತೆಗಳನ್ನು ಪದೇ ಪದೇ ಬದಲಾಯಿಸಿರುವುದನ್ನು ಆತ ಪತ್ತೆಹಚ್ಚಿ, ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದ. ಯುವ ಸಂಶೋಧಕರು ಸಾರ್ವಜನಿಕ ತಂತ್ರಜ್ಞಾನದ ನೆರವಿನಿಂದ ದೇಶದ ವ್ಯವಸ್ಥೆಯನ್ನು ಹೇಗೆ ಸುಧಾರಿಸಬಹುದು ಎಂಬುದಕ್ಕೆ ಸಾರ್ಥಕ್ ಸದ್ಯ ಅತ್ಯುತ್ತಮ ಉದಾಹರಣೆಯಾಗಿ ಹೊರಹೊಮ್ಮಿದ್ದಾನೆ.
ಇದನ್ನೂ ಓದಿ : ರಾಮ ಮಂದಿರ ದೇಣಿಗೆ ಅಕ್ರಮ : 8 ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ಪೊಲೀಸ್ ದಾಳಿ!


















