ಕೋಲ್ಕತ್ತಾ : ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭುಗಿಲೆದ್ದಿರುವ ಆಂತರಿಕ ಬಿಕ್ಕಟ್ಟು ದಿನೇ ದಿನೇ ತಾರಕಕ್ಕೇರುತ್ತಿದೆ. ಪಕ್ಷದ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಅವರ ವಿರುದ್ಧವೇ ಈಗ ಅವರ ಆಪ್ತ ವಲಯದಲ್ಲಿದ್ದ ನಾಯಕರು ಧ್ವನಿ ಎತ್ತತೊಡಗಿದ್ದಾರೆ. ಭ್ರಷ್ಟಾಚಾರ ಮತ್ತು ನಾಯಕರ ನಿರ್ಲಕ್ಷ್ಯದ ಧೋರಣೆಯಿಂದಾಗಿ ಪಕ್ಷದೊಳಗೆ ಕುದಿಯುತ್ತಿದ್ದ ಅಸಮಾಧಾನ ಈಗ ಸ್ಫೋಟಗೊಂಡಿದ್ದು, ಇದು ಈಗ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ದೊಡ್ಡ ಆಘಾತವನ್ನು ನೀಡಿದೆ.
2009ರಿಂದಲೂ ಮಮತಾ ಬ್ಯಾನರ್ಜಿ ಅವರ ಬೆನ್ನೆಲುಬಾಗಿ ನಿಂತಿದ್ದ ಟಿಎಂಸಿಯ ಹಿರಿಯ ನಾಯಕಿ ಹಾಗೂ ನಾಲ್ಕು ಬಾರಿಯ ಸಂಸದೆ ಶತಾಬ್ದಿ ರಾಯ್ ಅವರೂ ಪಕ್ಷದ ವಿರುದ್ಧ ಬಂಡಾಯ ಸಾರಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಅವರು, “ಕಳೆದ ಕೆಲವು ವರ್ಷಗಳಲ್ಲಿ ‘ದೀದಿ’ (ಮಮತಾ ಬ್ಯಾನರ್ಜಿ) ಸಾರ್ವಕಾಲಿಕವಾಗಿ ಬದಲಾಗಿಹೋದರು,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಮತಾ ಅವರೊಂದಿಗೆ ತಮಗೆ ಭಾವನಾತ್ಮಕ ಸಂಬಂಧವಿದ್ದರೂ, ಜನರ ಕೆಲಸ ಮುಖ್ಯವಾಗಿರುವುದರಿಂದ ತಾವು ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಖಂಡರ ಭೇಟಿಗೆ ಸಿಗದ ಅವಕಾಶ
ಪಕ್ಷದೊಳಗೆ ತಮಗೆ ಎದುರಾದ ಕಹಿ ಅನುಭವಗಳನ್ನು ಹಂಚಿಕೊಂಡ ಶತಾಬ್ದಿ ರಾಯ್, ನಾಯಕತ್ವದ ಅಲಭ್ಯತೆಯೇ ಈ ಬಂಡಾಯಕ್ಕೆ ಪ್ರಮುಖ ಕಾರಣ ಎಂದು ದೂರಿದ್ದಾರೆ. ಪಕ್ಷದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿತ್ತು. ಉಳಿದ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ. ತಮ್ಮ ಧ್ವನಿಯನ್ನು ಯಾರೂ ಆಲಿಸುತ್ತಿಲ್ಲ ಮತ್ತು ಕೇವಲ ಆಯ್ದ ಕೆಲವು ನಾಯಕರಿಗೆ ಮಾತ್ರ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಂಡಾಯ ಬಣದ ಮೂಲಗಳ ಪ್ರಕಾರ, ಮಮತಾ ಸರ್ಕಾರದ ಸಚಿವರು ಕೂಡ ಸಂಸದರ ವಿನಂತಿಗಳಿಗೆ ಸ್ಪಂದಿಸುತ್ತಿರಲಿಲ್ಲ ಮತ್ತು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಂಸದರನ್ನು ಸಂಪರ್ಕಿಸುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಈ ಬಗ್ಗೆ ಮಾತನಾಡಲು ಯತ್ನಿಸಿದಾಗಲೆಲ್ಲಾ ಅವರನ್ನು ಸುಮ್ಮನಿರುವಂತೆ ಹೆದರಿಸಲಾಗುತ್ತಿತ್ತು ಎಂದೂ ಆರೋಪಿಸಲಾಗಿದೆ.
ಎನ್ಡಿಎ ಪರ ಬಂಡಾಯ ಸಂಸದರ ಒಲವು
ತೃಣಮೂಲ ಕಾಂಗ್ರೆಸ್ ಪಕ್ಷದ ಸುಮಾರು 12ಕ್ಕೂ ಹೆಚ್ಚು ಸಂಸದರು ಈಗಾಗಲೇ ರಹಸ್ಯವಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿದ್ದಾರೆ. ಈ ಬಂಡಾಯಗಾರರ ಗುಂಪಿಗೆ ಶತಬ್ದಿ ರಾಯ್ ಅವರನ್ನು ಉಪನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಬಂಡಾಯಗಾರರ ಮುಖ್ಯ ಸಚೇತಕರಾಗಿ (ಚೀಫ್ ವಿಪ್) ನೇಮಕಗೊಂಡಿರುವ ಕಾಕೋಲಿ ಘೋಷ್ ದಸ್ತಿದಾರ್ ಅವರ ಪ್ರಕಾರ, ಬಂಡಾಯ ಸಂಸದರ ಸಂಖ್ಯೆ ಈಗ 20ಕ್ಕೆ ಏರಿಕೆಯಾಗಿದೆ. ಈ ಕುರಿತು ಈಗಾಗಲೇ ಸ್ಪೀಕರ್ ಅವರಿಗೂ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಪಕ್ಷದೊಳಗಿನ ಭ್ರಷ್ಟಾಚಾರದ ವಿರುದ್ಧ ಆಕ್ರೋಶ
ಬಂಗಾಳಿ ಚಿತ್ರರಂಗದ ಜನಪ್ರಿಯ ನಟಿಯಾಗಿಯೂ ಗುರುತಿಸಿಕೊಂಡಿರುವ ಶತಾಬ್ದಿ ರಾಯ್, ಟಿಎಂಸಿ ಪಕ್ಷದಲ್ಲಿ ತಳಮಟ್ಟದಿಂದ ಉನ್ನತ ಮಟ್ಟದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ. “ಪಕ್ಷದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಂಡು ನನಗೆ ತೀವ್ರ ನಿರಾಶೆಯಾಗಿದೆ. ಆದರೆ ನನ್ನ ಇಮೇಜ್ ಅತ್ಯಂತ ಸ್ವಚ್ಛವಾಗಿದೆ. ಯಾವುದೇ ಕಳಂಕವನ್ನು ತೊಳೆಯಲು ನನಗೆ ಪಕ್ಷದ ಬೆಂಬಲದ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವಾಗಲೇ ಈ ಪ್ರಶ್ನೆಯನ್ನು ಏಕೆ ಎತ್ತಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಡವಾಗಿಯಾದರೂ ಪರಿಸ್ಥಿತಿಯ ಗಂಭೀರತೆ ಈಗ ಅರ್ಥವಾಗಿದೆ ಮತ್ತು ತಮ್ಮ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹೈದರಾಬಾದ್ನಲ್ಲಿ ಜಲಕ್ಷಾಮ : ದಿನಕ್ಕೆ 20,000 ಟ್ಯಾಂಕರ್ಗಳಿಗೆ ಹೆಚ್ಚಿದ ಬೇಡಿಕೆ.. ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು!



















