ಹೈದರಾಬಾದ್ : ತೆಲಂಗಾಣ ರಾಜಧಾನಿ ಹೈದರಾಬಾದ್ ಮಹಾನಗರದಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದ್ದು, ಜನಸಾಮಾನ್ಯರು ಹನಿ ನೀರಿಗೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನ ಬೇಗೆ, ಕುಸಿದಿರುವ ಅಂತರ್ಜಲ ಮಟ್ಟ ಹಾಗೂ ಮುಂಗಾರು ಮಳೆಯ ವಿಳಂಬದಿಂದಾಗಿ ನಗರವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಜಲಕ್ಷಾಮ ಎದುರಿಸುತ್ತಿದೆ. ನೀರಿನ ಕೊರತೆಯಿಂದಾಗಿ ನಗರದಾದ್ಯಂತ ವಾಟರ್ ಟ್ಯಾಂಕರ್ಗಳ ಬುಕ್ಕಿಂಗ್ ಗಗನಕ್ಕೇರಿದ್ದು, ಜಲಮಂಡಳಿಯ ಮೂಲಸೌಕರ್ಯಗಳ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿದೆ. ಈ ಬಿಕ್ಕಟ್ಟು ಈಗ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಹೈದರಾಬಾದ್ ಮಹಾನಗರ ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕೆ. ಅಶೋಕ್ ರೆಡ್ಡಿ ಅವರ ಪ್ರಕಾರ, ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ನೀರು ನೀಡುತ್ತಿದ್ದ ಬೋರ್ವೆಲ್ಗಳು ಕೂಡ ಈ ಬಾರಿ ಸಂಪೂರ್ಣವಾಗಿ ಬತ್ತಿ ಹೋಗಿರುವುದು ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಪ್ರಮುಖ ಕಾರಣ. ಸಾಮಾನ್ಯವಾಗಿ ಜನವರಿಯಿಂದ ಟ್ಯಾಂಕರ್ ಬೇಡಿಕೆ ಹೆಚ್ಚಾಗುತ್ತಿತ್ತು ಮತ್ತು ದಿನಕ್ಕೆ ಸರಾಸರಿ 1500 ರಿಂದ 2000 ಬುಕ್ಕಿಂಗ್ಗಳು ಬರುತ್ತಿದ್ದವು. ಆದರೆ ಈ ವರ್ಷ ಮೇ ಕೊನೆಯ ವಾರದಲ್ಲೇ ದೈನಂದಿನ ಬುಕ್ಕಿಂಗ್ ಸಂಖ್ಯೆ 15000ದ ಗಡಿ ದಾಟಿದ್ದು, ಸದ್ಯ ಇದು ದಿನಕ್ಕೆ 20,000 ಟ್ಯಾಂಕರ್ಗಳ ಬೇಡಿಕೆಗೆ ಬಂದು ತಲುಪಿದೆ. ಬೇಡಿಕೆಯನ್ನು ನಿಭಾಯಿಸಲು ಜಲಮಂಡಳಿಯು ಮೂರು ಶಿಫ್ಟ್ಗಳಲ್ಲಿ ರಾತ್ರಿ ವೇಳೆಯೂ ಟ್ಯಾಂಕರ್ ಸರಬರಾಜು ಪ್ರಕ್ರಿಯೆಯನ್ನು ನಡೆಸುತ್ತಿದೆ. ಆದಾಗ್ಯೂ, ನಗರದ ಪಶ್ಚಿಮ ಭಾಗಗಳಲ್ಲಿ ನೀರಿನ ವಿತರಣೆ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
4-5 ದಿನಗಳಿಗೊಮ್ಮೆ ನೀರು; ಕಲುಷಿತ ನೀರ ಸರಬರಾಜಿನ ಆತಂಕ
ನಗರದ ಮುಶೀರಾಬಾದ್ ಸೇರಿದಂತೆ ಹಲವು ಬಡಾವಣೆಗಳ ನಿವಾಸಿಗಳು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಮುನ್ಸಿಪಾಲಿಟಿ ನೀರು ನಾಲ್ಕರಿಂದ ಐದು ದಿನಗಳಿಗೊಮ್ಮೆ ಮಾತ್ರ ಬರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ರಸೂಲ್ಪುರ ಭಾಗದ ನಿವಾಸಿಗಳು ಕೇವಲ ನೀರಿನ ಅಭಾವ ಮಾತ್ರವಲ್ಲದೆ, ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿರುವುದಾಗಿ ಆರೋಪಿಸಿದ್ದಾರೆ. ಪದೇ ಪದೇ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಪ್ರಸ್ತುತ ಹೈದರಾಬಾದ್ಗೆ ಪ್ರತಿದಿನ 700 ರಿಂದ 850 ಮಿಲಿಯನ್ ಗ್ಯಾಲನ್ ಕುಡಿಯುವ ನೀರಿನ ಅಗತ್ಯವಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಆರ್ಎಸ್, ಬಿಜೆಪಿ ಆಕ್ರೋಶ
ನಗರದ ಈ ದುಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿರುವ ವಿರೋಧ ಪಕ್ಷಗಳು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಮಾತನಾಡಿ, “ಕೆಸಿಆರ್ ಅಧಿಕಾರದಲ್ಲಿದ್ದಾಗ ನಗರದಲ್ಲಿ ನೀರು ಅಥವಾ ವಿದ್ಯುತ್ ಅಭಾವ ಇರಲಿಲ್ಲ. ರೇವಂತ್ ರೆಡ್ಡಿ ಹಳೆಯ ದಿನಗಳನ್ನು ಮರಳಿ ತರುವುದಾಗಿ ಹೇಳಿದ್ದರು, ಅದರಂತೆಯೇ 2014ಕ್ಕೂ ಮುಂಚಿನ ಕಾಂಗ್ರೆಸ್ ಆಡಳಿತದ ಕರಾಳ ದಿನಗಳನ್ನು ತಂದಿದ್ದಾರೆ,” ಎಂದು ಲೇವಡಿ ಮಾಡಿದ್ದಾರೆ.
ಮತ್ತೊಂದೆಡೆ, ಬಿಜೆಪಿಯ ತೆಲಂಗಾಣ ಅಧ್ಯಕ್ಷ ರಾಮಚಂದ್ರ ರಾವ್ ಅವರು, ಕಾಂಗ್ರೆಸ್ ಸರ್ಕಾರವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದು, ಜಲಕ್ಷಾಮದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ತಕ್ಷಣವೇ ಕೃಷ್ಣಾ ಮತ್ತು ಮಂಜೀರಾ ಯೋಜನೆಗಳ ಮೂಲಗಳಿಂದ ನೀರನ್ನು ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಮುಂದಿನ ವರ್ಷದ ವೇಳೆಗೆ ಗೋದಾವರಿ ಹಂತ-2 ಮತ್ತು ಹಂತ-3 ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡು ನಗರಕ್ಕೆ ಹೆಚ್ಚುವರಿಯಾಗಿ 300 ಎಂಡಿಜಿ ನೀರು ಸಿಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೈದರಾಬಾದ್ನ ಬಾಯಾರಿಕೆ ನೀಗಲು ಮುಂಗಾರು ಮಳೆಯೊಂದೇ ಏಕೈಕ ಆಸರೆಯಾಗಿದೆ. ಅಲ್ಲಿಯವರೆಗೆ ನಗರದ ಜನತೆ ಟ್ಯಾಂಕರ್ ನೀರನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ ; ಟೀಮ್ ಇಂಡಿಯಾ ಟೆಸ್ಟ್ ತಂಡದ ಬದಲಾವಣೆ : ನೆಪ ಹೇಳುವುದನ್ನು ಬಿಡಿ ಎಂದ ಗವಾಸ್ಕರ್!



















