ತಿರುವನಂತಪುರಂ : ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ (ED) ದೊಡ್ಡಮಟ್ಟದ ಶಾಕ್ ನೀಡಿದೆ. ಕೊಚ್ಚಿನ್ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್ (CMRL) ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ಕೇರಳದಾದ್ಯಂತ ಒಟ್ಟು 10 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಇಂದು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಪಿಣರಾಯಿ ವಿಜಯನ್ ಅವರ ಮಗಳು ಟಿ. ವೀಣಾ ಮಾಲೀಕತ್ವದ ಕಂಪನಿಯು ನಡೆಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತನಿಖೆ ಕೈಗೊಳ್ಳಲಾಗಿದೆ. ಈ ಪ್ರಕರಣದ ತನಿಖೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ಹಠಾತ್ ದಾಳಿ ನಡೆದಿದೆ.
ಅಳಿಯನ ಮನೆಗೂ ವಿಸ್ತರಿಸಿದ ತನಿಖೆ
ಮಾಜಿ ಸಿಎಂ ನಿವಾಸದ ಜೊತೆಗೆ ಅವರ ಅಳಿಯ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪಿ.ಎ. ಮುಹಮ್ಮದ್ ರಿಯಾಸ್ ಅವರ ಕೋಝಿಕ್ಕೋಡ್ನಲ್ಲಿರುವ ನಿವಾಸದ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೈಗಾರಿಕಾ ರಾಸಾಯನಿಕಗಳನ್ನು ತಯಾರಿಸುವ ಸಿಎಂಆರ್ಎಲ್ ಕಂಪನಿಯು ರಾಜಕಾರಣಿಗಳಿಗೆ ಲಂಚ ನೀಡಿದ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿದೆ. ಪಿಣರಾಯಿ ವಿಜಯನ್ ಅವರ ಮಗಳು ಟಿ. ವೀಣಾ ಅವರ ಒಡೆತನದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಕಂಪನಿಯು ಸಿಎಂಆರ್ಎಲ್ನಿಂದ ಯಾವುದೇ ಸೇವೆಯನ್ನು ನೀಡದೆಯೇ ಭಾರಿ ಪ್ರಮಾಣದ ಹಣವನ್ನು ಪಡೆದಿದೆ ಎನ್ನುವುದು ಇಲ್ಲಿನ ಪ್ರಮುಖ ಆರೋಪವಾಗಿದೆ. ಈ ಪ್ರಕರಣದಲ್ಲಿ ವಿಜಯನ್ ಅವರ ಹೆಸರು ನೇರವಾಗಿ ಇಲ್ಲದಿದ್ದರೂ, ಇದು ಕೇರಳ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕೋಟಿ ಕೋಟಿ ಹಣದ ವಹಿವಾಟು
ಇದು 2023ರ ಆಗಸ್ಟ್ನಲ್ಲಿ ಬೆಳಕಿಗೆ ಬಂದ ಹಗರಣವಾಗಿದೆ. ಸಿಎಂಆರ್ಎಲ್ ಕಂಪನಿಯಿಂದ ವೀಣಾ ಅವರ ಎಕ್ಸಾಲಾಜಿಕ್ ಸಂಸ್ಥೆಯು 2017 ಮತ್ತು 2020ರ ನಡುವೆ ಯಾವುದೇ ಸೇವೆ ಒದಗಿಸದೇ 1.72 ಕೋಟಿ ರೂಪಾಯಿ ಪಡೆದಿದೆ ಎಂದು ಆದಾಯ ತೆರಿಗೆ ಇಲಾಖೆಯ ವರದಿ ತಿಳಿಸಿತ್ತು. ತದನಂತರ ಗಂಭೀರ ವಂಚನೆ ತನಿಖಾ ಕಚೇರಿ (SFIO) ನಡೆಸಿದ ವಿಸ್ತೃತ ತನಿಖೆಯಲ್ಲಿ ಈ ಮೊತ್ತ 2.70 ಕೋಟಿ ರೂ. ಎಂದು ತಿಳಿದುಬಂದಿದೆ. ಎಸ್ಎಫ್ಐಒ ಸಲ್ಲಿಸಿರುವ 160 ಪುಟಗಳ ದೂರಿನಲ್ಲಿ ಟಿ. ವೀಣಾ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ವೀಣಾ ವಿರುದ್ಧ ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 447 ರ ಅಡಿಯಲ್ಲಿ ಸಾಂಸ್ಥಿಕ ವಂಚನೆ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆಗೆ ಅನುಮೋದನೆ ನೀಡಿದೆ. ಈ ಅಪರಾಧ ಸಾಬೀತಾದರೆ 6 ತಿಂಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ರಾಜಕೀಯ ಪ್ರೇರಿತ ದಾಳಿ ಎಂದ ಸಿಪಿಎಂ
ಇ.ಡಿ. ನಡೆಸಿರುವ ಈ ದಾಳಿಯನ್ನು ಸಿಪಿಎಂ ತೀವ್ರವಾಗಿ ಖಂಡಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಈ ಕ್ರಮವನ್ನು “ರಾಜಕೀಯ ಪ್ರೇರಿತ ಮತ್ತು ಹೇಯ ದಾಳಿ” ಎಂದು ಕರೆದಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ-ಆರೆಸ್ಸೆಸ್ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಇ.ಡಿ.ಯನ್ನು ತನ್ನ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ವಿರುದ್ಧವೂ ಇಂತಹುದೇ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು, ಆದರೆ ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಕ್ಕಿದೆ ಎಂದು ನೆನಪಿಸಿರುವ ಅವರು, ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಕೇರಳ ಸರ್ಕಾರದ ಸಚಿವರೂ ಸಿಎಂಆರ್ಎಲ್ನಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ‘ಬೈಜೂಸ್’ ಸಾಮ್ರಾಜ್ಯ ಪತನ : ಸಂಸ್ಥಾಪಕ ರವೀಂದ್ರನ್ಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ ಕೋರ್ಟ್!



















