ನವದೆಹಲಿ : ಒಂದು ಕಾಲದಲ್ಲಿ ಭಾರತದ ಅತ್ಯಂತ ಯಶಸ್ವಿ ಸ್ಟಾರ್ಟ್ಅಪ್ ಎನಿಸಿಕೊಂಡಿದ್ದ ಎಡ್ ಟೆಕ್ ದೈತ್ಯ ‘ಬೈಜೂಸ್‘ (Byju’s) ಸಾಮ್ರಾಜ್ಯ ಈಗ ಪತನಗೊಂಡಿದೆ. ಆಸ್ತಿ ಬಹಿರಂಗಪಡಿಸುವಿಕೆಗೆ ಸಂಬಂಧಿಸಿ ನ್ಯಾಯಾಲಯ ನೀಡಿದ್ದ ಆದೇಶಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಭಾರತೀಯ ಕ್ರಿಕೆಟ್ ತಂಡದ ಜರ್ಸಿಯ ಮೇಲೇರಿ, ಜಾಗತಿಕ ಹೂಡಿಕೆದಾರರನ್ನು ಸೆಳೆದು, ಒಂದು ಕಾಲದಲ್ಲಿ 22 ಬಿಲಿಯನ್ ಡಾಲರ್ (ಸುಮಾರು ರೂ. 1.8 ಲಕ್ಷ ಕೋಟಿ) ಮೌಲ್ಯ ಹೊಂದಿದ್ದ ಕಂಪನಿಯೊಂದು ಇಂದು ದಿವಾಳಿತನದ ಅಂಚಿಗೆ ಬಂದು ನಿಂತಿರುವುದಕ್ಕೆ ಈ ತೀರ್ಪು ಸಾಕ್ಷಿ.
ಸಾಂಕ್ರಾಮಿಕದ ಅವಧಿಯ ಭರ್ಜರಿ ಬೆಳವಣಿಗೆ, ನಂತರದಲ್ಲಿ ಸಾಲದ ಸುಳಿ
2011ರಲ್ಲಿ ‘ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ಆರಂಭವಾದ ಬೈಜೂಸ್, ದೇಶದ ಸ್ಪರ್ಧಾತ್ಮಕ ಪರೀಕ್ಷೆಗಳ ಕ್ರೇಜ್ ಅನ್ನು ಬಳಸಿಕೊಂಡು ವೇಗವಾಗಿ ಬೆಳೆಯಿತು. ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಶಾಲೆಗಳೆಲ್ಲ ಮುಚ್ಚಿ, ಆನ್ಲೈನ್ ತರಗತಿಗಳು ಆರಂಭವಾದಾಗ ಆನ್ಲೈನ್ ಶಿಕ್ಷಣಕ್ಕೆ ಭಾರಿ ಬೇಡಿಕೆ ಬಂದಿದ್ದರಿಂದ ಜಾಗತಿಕ ಹೂಡಿಕೆದಾರರು ಮುಗಿಬಿದ್ದು ಈ ಸಂಸ್ಥೆಯಲ್ಲಿ ಹಣ ಹೂಡಿದರು.
ಆಕಾಶ್ ಎಜುಕೇಶನಲ್ ಸರ್ವಿಸಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳನ್ನು ಸುಮಾರು 3 ಬಿಲಿಯನ್ ಡಾಲರ್ ವೆಚ್ಚದಲ್ಲಿ ಬೈಜೂಸ್ ಖರೀದಿಸಿತು. ಆದರೆ, 2021ರಲ್ಲಿ ವಿದೇಶಿ ಸಾಲದಾತರಿಂದ ಪಡೆದ 1.2 ಬಿಲಿಯನ್ ಡಾಲರ್ ಬೃಹತ್ ಸಾಲವೇ ಕಂಪನಿಯ ಪತನಕ್ಕೆ ಮುನ್ನುಡಿ ಬರೆಯಿತು. ಆಡಿಟಿಂಗ್ ವಿಳಂಬ, ತಡವಾಗಿ ಹೊರಬಿದ್ದ ಹಣಕಾಸು ವರದಿಯಲ್ಲಿ ದಾಖಲಾದ 4,588 ಕೋಟಿ ರೂಪಾಯಿಗಳ ಭಾರಿ ನಷ್ಟ ಮತ್ತು ಡೆಲಾಯ್ಟ್ನಂತಹ ಪ್ರಮುಖ ಆಡಿಟಿಂಗ್ ಸಂಸ್ಥೆಗಳು ರಾಜೀನಾಮೆ ನೀಡಿದ್ದು ಕಂಪನಿಯ ವಿಶ್ವಾಸಾರ್ಹತೆಗೆ ದೊಡ್ಡ ಪೆಟ್ಟು ನೀಡಿತು.
ಅಂತಾರಾಷ್ಟ್ರೀಯ ಕಾನೂನು ಸಮರ
ನಂತರದಲ್ಲಿ ಬೈಜೂಸ್ ಮತ್ತು ಅದರ ಸಾಲದಾತರ ನಡುವಿನ ಸಂಬಂಧವು ಹದಗೆಟ್ಟಿತು. ಸಾಲದ ಹಣದಲ್ಲಿ ಸುಮಾರು 533 ಮಿಲಿಯನ್ ಡಾಲರ್ ಅನ್ನು ಕಂಪನಿಯು ಸೂಕ್ತ ಮಾಹಿತಿಯಿಲ್ಲದೆ ಬೇರೆಡೆಗೆ ವರ್ಗಾಯಿಸಿದೆ ಎಂದು ಸಾಲದಾತರು ಗಂಭೀರ ಆರೋಪ ಮಾಡಿದರು. ಈ ಕಾನೂನು ಸಮರ ಅಮೆರಿಕದ ಡೆಲವೇರ್ ಮತ್ತು ನ್ಯೂಯಾರ್ಕ್ ನ್ಯಾಯಾಲಯಗಳ ಮೆಟ್ಟಿಲೇರಿತು. ಇದೇ ವೇಳೆ, ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿಯ ಅಂಗಸಂಸ್ಥೆಯು ಆಕಾಶ್ ಕಂಪನಿಯ ಷೇರುಗಳ ಖರೀದಿಗೆ ಸಂಬಂಧಿಸಿದ ಆಸ್ತಿ ವಿವರಗಳನ್ನು ಕೋರಿ ಸಿಂಗಾಪುರ ನ್ಯಾಯಾಲಯದ ಮೆಟ್ಟಿಲೇರಿತು. ಈ ಪ್ರಕರಣದಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ಬೈಜು ರವೀಂದ್ರನ್ ವಿಫಲರಾದ ಹಿನ್ನೆಲೆಯಲ್ಲಿ ಅವರಿಗೆ ಈಗ ನ್ಯಾಯಾಂಗ ನಿಂದನೆಗಾಗಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ತೀವ್ರ ಕಾನೂನು ಹೋರಾಟ ನಡೆಯುತ್ತಿರುವಾಗಲೇ, ಬೈಜೂಸ್ಗೆ ಸ್ವದೇಶದಲ್ಲೂ ದೊಡ್ಡ ಆಘಾತ ಎದುರಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ನೀಡಬೇಕಾಗಿದ್ದ 158 ಕೋಟಿ ರೂ.ಗಳ ಪ್ರಾಯೋಜಕತ್ವದ ಬಾಕಿಯನ್ನು ಪಾವತಿಸದ ಕಾರಣ, 2024ರ ಜುಲೈನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣವು (NCLT) ಬೈಜೂಸ್ ವಿರುದ್ಧ ದಿವಾಳಿತನದ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಯಾವ ಕ್ರಿಕೆಟ್ ಪ್ರಾಯೋಜಕತ್ವ ಬೈಜೂಸ್ನ ಹೆಮ್ಮೆಯ ಸಂಕೇತವಾಗಿತ್ತೋ, ಅದೇ ಒಪ್ಪಂದವು ಕಂಪನಿಯನ್ನು ದಿವಾಳಿತನದ ಸುಳಿಗೆ ದೂಡಿತು. ಇದರ ಬೆನ್ನಲ್ಲೇ ಕಂಪನಿಯ ಪ್ರಮುಖ ಆಸ್ತಿಯಾಗಿದ್ದ ‘ಆಕಾಶ್’ ಸಂಸ್ಥೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಭೀತಿಯೂ ಬೈಜೂಸ್ಗೆ ಎದುರಾಗಿದೆ.
ಶೂನ್ಯಕ್ಕೆ ಕುಸಿದ ಸಂಪತ್ತು; ಸಂಸ್ಥಾಪಕರ ಸಮರ್ಥನೆ
ಒಂದೆಡೆ ನ್ಯಾಯಾಲಯದ ಕೇಸ್ಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ನೌಕರರಿಗೆ ಸಂಬಳ ನೀಡಲಾಗದೆ ಸಾಮೂಹಿಕ ವಜಾ ಪ್ರಕ್ರಿಯೆಗಳು ನಡೆದವು. ಹೂಡಿಕೆದಾರರು ಆಡಳಿತ ಮಂಡಳಿಯ ವಿರುದ್ಧ ತಿರುಗಿಬಿದ್ದರು. ಇದರ ಪರಿಣಾಮವಾಗಿ ಬೈಜೂಸ್ ಮೌಲ್ಯವು 1 ಬಿಲಿಯನ್ ಡಾಲರ್ಗಿಂತಲೂ ಕೆಳಕ್ಕೆ ಕುಸಿಯಿತು ಮತ್ತು ಫೋರ್ಬ್ಸ್ ಸಂಸ್ಥೆಯು ಬೈಜು ರವೀಂದ್ರನ್ ಅವರ ಆಸ್ತಿ ಮೌಲ್ಯವನ್ನು (Net worth) ಅಧಿಕೃತವಾಗಿ ‘ಶೂನ್ಯ’ ಎಂದು ಘೋಷಿಸಿತು. ಆದರೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಬೈಜು ರವೀಂದ್ರನ್, ತಾವಾಗಲಿ ಅಥವಾ ಇತರ ಸಂಸ್ಥಾಪಕರಾಗಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಸಾಲದಾತರೊಂದಿಗೆ ಈಗಾಗಲೇ ರಾಜಿ ಸಂಧಾನ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಅತಿಯಾದ ಸಾಲ ಮತ್ತು ಕಳಪೆ ಆಡಳಿತದಿಂದಾಗಿ ದೇಶದ ನಂಬರ್ ಒನ್ ಎಡ್ಟೆಕ್ ಸಂಸ್ಥೆ ಪತನಗೊಂಡಿರುವುದು ಭಾರತೀಯ ನವೋದ್ಯಮ ವಲಯಕ್ಕೆ ದೊಡ್ಡ ಪಾಠ ಎಂದು ವಿಶ್ಲೇಷಿಸಲಾಗುತ್ತಿದೆ
ಇದನ್ನೂ ಓದಿ : ಸತತ 4 ಆವೃತ್ತಿಗಳಲ್ಲಿ 600+ ರನ್.. ‘ಕಿಂಗ್’ ಕೊಹ್ಲಿ ಮುಡಿಗೇರಿದ ಮತ್ತೊಂದು ಐತಿಹಾಸಿಕ ದಾಖಲೆ!


















