ಕೋಲಾರ : ಜಿಲ್ಲೆಯ ಮಾಲೂರು ನಗರದಲ್ಲಿ ಮನಕಲುಕುವ ಘಟನೆ ನಡೆದಿದೆ. ಆಟವಾಡುತ್ತಿದ್ದ ವೇಳೆ ಬೆಟ್ಟದ ನಲ್ಲಿಕಾಯಿ ನುಂಗಿದ್ದ 3 ವರ್ಷದ ಕಂದಮ್ಮ ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ರವಿ ಹಾಗೂ ಮಾಲಾ ದಂಪತಿಗಳ ಪುತ್ರ ವಿಜಯೇಂದ್ರ (03) ಮೃತ ದುರ್ದೈವಿ ಮಗುವಾಗಿದ್ದು, ಈ ಘಟನೆ ಕುಟುಂಬದವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಇಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಮಗು ವಿಜಯೇಂದ್ರ ಬೆಟ್ಟದ ನಲ್ಲಿಕಾಯಿ ನುಂಗಿದ್ದಾನೆ. ನಲ್ಲಿಕಾಯಿ ಮಗುವಿನ ಗಂಟಲಲ್ಲಿ ಸಿಲುಕಿದ ಪರಿಣಾಮ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಮಗು ಉಸಿರಾಟಕ್ಕೆ ಪರದಾಡುತ್ತಿರುವುದನ್ನು ಗಮನಿಸಿದ ಪೋಷಕರು ತಕ್ಷಣ ಆತಂಕಗೊಂಡಿದ್ದಾರೆ.
ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಪೋಷಕರು ತಕ್ಷಣ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವಿನ ಗಂಟಲಲ್ಲಿ ಸಿಲುಕಿದ್ದ ಬೆಟ್ಟದ ನಲ್ಲಿಕಾಯಿಯನ್ನು ಹೊರತೆಗೆದಿದ್ದಾರೆ. ಆದರೆ ಗಂಟಲಲ್ಲಿ ವಸ್ತು ಸಿಲುಕಿದ ಪರಿಣಾಮ ಉಸಿರಾಟದ ಸಮಸ್ಯೆ ಗಂಭೀರವಾಗಿದ್ದು, ಚಿಕಿತ್ಸೆ ನೀಡಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ ವಿಜಯೇಂದ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮುದ್ದು ಮಗುವಿನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಲೂರು ನಗರದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಬಳಿಕ ವೈದ್ಯರು ಪೋಷಕರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಮಕ್ಕಳ ಕೈಗೆಟುಕುವ ಸ್ಥಳದಲ್ಲಿ ಸಣ್ಣ ವಸ್ತುಗಳು, ಕಾಯಿ, ಗಟ್ಟಿಯಾದ ಆಹಾರ ಪದಾರ್ಥಗಳು ಅಥವಾ ಗಂಟಲಲ್ಲಿ ಸಿಲುಕುವ ಸಾಧ್ಯತೆಯಿರುವ ವಸ್ತುಗಳನ್ನು ಇಡಬಾರದು ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಚಿಕ್ಕ ಮಕ್ಕಳ ಮೇಲೆ ಪೋಷಕರು ಸದಾ ನಿಗಾ ಇರಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ದುಬಾರೆಯಲ್ಲಿ ಘೋರ ದುರಂತ ; 2 ಆನೆಗಳ ಕಾದಾಟದ ಮಧ್ಯೆ ಸಿಲುಕಿ ಮಹಿಳೆ ಸಾವು!



















