ನವದೆಹಲಿ : ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯ ರಕ್ಷಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಅಮೂಲ್ಯ ಲೋಹಗಳ ಆಮದಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಭಾರೀ ಪ್ರಮಾಣದಲ್ಲಿ ಅಂದರೆ ಶೇ.6 ರಿಂದ ಶೇ.15ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ವಿದೇಶಿ ವಸ್ತುಗಳ ಖರೀದಿಯನ್ನು ನಿಯಂತ್ರಿಸುವ ಹಾಗೂ ಆರ್ಥಿಕತೆಯ ಮೇಲಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಆದೇಶದ ಪ್ರಕಾರ, ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಆಮದಿನ ಮೇಲೆ ಶೇ.10ರಷ್ಟು ಮೂಲ ಕಸ್ಟಮ್ಸ್ ಸುಂಕ ಹಾಗೂ ಶೇ.5ರಷ್ಟು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಅನ್ನು ವಿಧಿಸಿದೆ. ಈ ಮೂಲಕ ಒಟ್ಟಾರೆ ಪರಿಣಾಮಕಾರಿ ಆಮದು ಸುಂಕವು ಶೇ.15ಕ್ಕೆ ಏರಿಕೆಯಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿರುವ ಭಾರತದಲ್ಲಿ, ಈ ಸುಂಕದ ಹೆಚ್ಚಳವು ಆಭರಣಗಳ ಬೇಡಿಕೆಯನ್ನು ತಗ್ಗಿಸುವ ನಿರೀಕ್ಷೆಯಿದೆ. ಜೊತೆಗೆ, ಇದು ದೇಶದ ವ್ಯಾಪಾರ ಕೊರತೆ ತಗ್ಗಿಸಲು ಮತ್ತು ಏಷ್ಯಾದಲ್ಲಿಯೇ ಕಳಪೆ ಸಾಧನೆ ತೋರುತ್ತಿರುವ ಭಾರತೀಯ ರೂಪಾಯಿಗೆ ಬೆಂಬಲ ನೀಡಲು ನೆರವಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಮತ್ತೆ ಕಳ್ಳಸಾಗಣೆ ಹೆಚ್ಚಾಗುವ ಆತಂಕ
ಸರ್ಕಾರದ ಈ ನಿರ್ಧಾರವು ಆರ್ಥಿಕತೆಯ ದೃಷ್ಟಿಯಿಂದ ಅನಿವಾರ್ಯವಾದರೂ, ಚಿನ್ನಾಭರಣ ಉದ್ಯಮದ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಆಮದು ಸುಂಕದ ಭಾರಿ ಏರಿಕೆಯಿಂದಾಗಿ ದೇಶದಲ್ಲಿ ಮತ್ತೆ ಚಿನ್ನದ ಕಳ್ಳಸಾಗಣೆ ಚಟುವಟಿಕೆಗಳು ಗರಿಗೆದರುವ ಅಪಾಯವಿದೆ ಎಂದು ಉದ್ಯಮದ ಪ್ರಮುಖರು ಎಚ್ಚರಿಸಿದ್ದಾರೆ. 2024ರ ಮಧ್ಯಭಾಗದಲ್ಲಿ ಸರ್ಕಾರ ಸುಂಕವನ್ನು ಇಳಿಸಿದಾಗ ಕಳ್ಳಸಾಗಣೆ ತಗ್ಗಿತ್ತು. “ಚಾಲ್ತಿ ಖಾತೆ ಕೊರತೆಯನ್ನು ನೀಗಿಸಲು ಸರ್ಕಾರ ಈ ಕ್ರಮ ಕೈಗೊಳ್ಳುವುದು ನಿರೀಕ್ಷಿತವೇ ಆಗಿತ್ತು. ಆದರೆ, ಈಗಾಗಲೇ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರಿರುವುದರಿಂದ ಇದು ಮಾರುಕಟ್ಟೆಯ ಬೇಡಿಕೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ” ಎಂದು ‘ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್’ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಬೆಲೆ ಏರಿಕೆಯ ಮಟ್ಟದಲ್ಲಿ ಕಳ್ಳಸಾಗಣೆದಾರರಿಗೆ ಭಾರಿ ಲಾಭಾಂಶ ಸಿಗಲಿದ್ದು, ‘ಗ್ರೇ ಮಾರ್ಕೆಟ್’ (ಕಳ್ಳಪೇಟೆ) ಮತ್ತೆ ಸಕ್ರಿಯವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮುಂಬೈ ಮೂಲದ ಖಾಸಗಿ ಬ್ಯಾಂಕ್ನ ಬುಲಿಯನ್ ಡೀಲರ್ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕರೆಯ ಬೆನ್ನಲ್ಲೇ ಮಹತ್ವದ ಬೆಳವಣಿಗೆ
ವಿದೇಶಿ ವಿನಿಮಯ ನಿಧಿಯ ರಕ್ಷಣೆಗಾಗಿ ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿಸದಂತೆ ಭಾನುವಾರವಷ್ಟೇ ಪ್ರಧಾನಿ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದರು. ಭಾರತವು ತನ್ನ ಬಳಕೆಯ ಬಹುಪಾಲು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆ ಮತ್ತು ಈಕ್ವಿಟಿ ಮಾರುಕಟ್ಟೆಯ ನಿರಾಶಾದಾಯಕ ವಹಿವಾಟುಗಳಿಂದಾಗಿ ಹೂಡಿಕೆದಾರರು ಚಿನ್ನದತ್ತ ಹೆಚ್ಚಿನ ಒಲವು ತೋರಿದ್ದರು. ಪರಿಣಾಮವಾಗಿ, ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಗೋಲ್ಡ್ ಇಟಿಎಫ್ (ETF) ಹೂಡಿಕೆಗಳು ಶೇ. 186 ರಷ್ಟು ಜಿಗಿತ ಕಂಡು ದಾಖಲೆಯ 20 ಮೆಟ್ರಿಕ್ ಟನ್ಗೆ ತಲುಪಿತ್ತು.
ಚಿನ್ನದ ಆಮದನ್ನು ನಿಯಂತ್ರಿಸಲು ಇತ್ತೀಚೆಗಷ್ಟೇ ಸರ್ಕಾರ ಶೇ.3ರಷ್ಟು ಐಜಿಎಸ್ಟಿ (IGST) ವಿಧಿಸಲು ಆರಂಭಿಸಿತ್ತು. ಇದರಿಂದಾಗಿ ಬ್ಯಾಂಕ್ಗಳು ಆಮದನ್ನು ಸ್ಥಗಿತಗೊಳಿಸಿ, ಏಪ್ರಿಲ್ನಲ್ಲಿ ಚಿನ್ನದ ಆಮದು 30 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಇದೀಗ ಬ್ಯಾಂಕ್ಗಳು ಮತ್ತೆ ಆಮದು ಪ್ರಕ್ರಿಯೆ ಶುರುಮಾಡಿದ್ದರೂ, ಆಮದು ಸುಂಕದ ಈ ಭಾರಿ ಏರಿಕೆಯಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನದ ಆಮದು ಪ್ರಮಾಣ ಮತ್ತೆ ಪಾತಾಳಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ : ಮಿತವ್ಯಯ ಕರೆ ಬೆನ್ನಲ್ಲೇ ಮೋದಿ ಬೆಂಗಾವಲು ವಾಹನ ಶೇ.50ರಷ್ಟು ಕಡಿತ ; ಇವಿ ಬಳಕೆಗೆ ಒತ್ತು



















