ಲಕ್ನೋ : ಸಮಾಜವಾದಿ ಪಕ್ಷದ ಸಂಸ್ಥಾಪಕ, ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಕಿರಿಯ ಸಹೋದರ ಪ್ರತೀಕ್ ಯಾದವ್ (38) ಅವರು ಇಂದು (ಬುಧವಾರ) ಬೆಳಗ್ಗೆ ಲಕ್ನೋದಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಲಕ್ನೋದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆಗಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಯಿಂದ ಪ್ರತೀಕ್ ಯಾದವ್ ಬಳಲುತ್ತಿದ್ದರು. ಅವರ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದ (Blood Clot) ಪರಿಣಾಮವಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಸುಮಾರು 6.15ರ ಸುಮಾರಿಗೆ ಅವರ ಆರೋಗ್ಯ ಸ್ಥಿತಿ ದಿಢೀರ್ ಕ್ಷೀಣಿಸಿದ್ದು, ಕುಟುಂಬಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಸ್ಪತ್ರೆಗೆ ತರುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಲಿದೆ. ಆರಂಭಿಕ ತಪಾಸಣೆಯಲ್ಲಿ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ.
ರಾಜಕೀಯದಿಂದ ದೂರ ಉಳಿದಿದ್ದ ಪ್ರತೀಕ್
ಯುಕೆ ಮೂಲದ ಲೀಡ್ಸ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದ ಪ್ರತೀಕ್ ಯಾದವ್, ರಾಜಕೀಯದಿಂದ ಸದಾ ದೂರ ಉಳಿದಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು ಕಟ್ಟಾ ಫಿಟ್ನೆಸ್ ಪ್ರೇಮಿಯಾಗಿದ್ದರು. 2012ರಲ್ಲಿ ಅಂತಾರಾಷ್ಟ್ರೀಯ ಬಾಡಿಬಿಲ್ಡಿಂಗ್ ವೆಬ್ಸೈಟ್ ಒಂದರಲ್ಲಿ ಇವರ ದೈಹಿಕ ಬದಲಾವಣೆಯ ಸಾಧನೆಯನ್ನು ಶ್ಲಾಘಿಸಲಾಗಿತ್ತು. ಪ್ರಾಣಿ ಕಲ್ಯಾಣ ಚಟುವಟಿಕೆಗಳಲ್ಲಿಯೂ ಅವರು ಆಸಕ್ತಿ ಹೊಂದಿದ್ದರು. 2017ರಲ್ಲಿ ಸುಮಾರು 5 ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿ ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕಿದ್ದರು. ಸಮಾಜವಾದಿ ಕುಟುಂಬದ ಸದಸ್ಯರಾಗಿ ಇಷ್ಟು ದುಬಾರಿ ಕಾರು ಖರೀದಿಸಿದ್ದಕ್ಕೆ ಟೀಕೆಗಳು ವ್ಯಕ್ತವಾದಾಗ, “ನಾನು ಸಾಲ ಮಾಡಿ ಕಾರು ಕೊಂಡಿದ್ದೇನೆ ಮತ್ತು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದೇನೆ” ಎಂದು ಅವರು ಪ್ರತಿಕ್ರಿಯಿಸಿದ್ದರು.
ಕೌಟುಂಬಿಕ ಜೀವನ ಮತ್ತು ರಾಜಕೀಯ ವಿಮುಖತೆ
ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಅವರ ಪುತ್ರರಾದ ಪ್ರತೀಕ್, 2011ರಲ್ಲಿ ಅಪರ್ಣಾ ಯಾದವ್ ಅವರನ್ನು ವಿವಾಹವಾಗಿದ್ದರು. ಅಪರ್ಣಾ ಯಾದವ್ ಪ್ರಸ್ತುತ ಬಿಜೆಪಿ ನಾಯಕಿ. 8 ವರ್ಷಗಳ ಕಾಲ ಪ್ರೀತಿಸಿ ಹಸೆಮಣೆ ಏರಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ವರ್ಷದ ಜನವರಿಯಲ್ಲಿ ಪ್ರತೀಕ್ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ವಿಚ್ಛೇದನದ ಸುಳಿವು ನೀಡಿ ವೈಯಕ್ತಿಕ ಜೀವನದ ಬಿಕ್ಕಟ್ಟನ್ನು ಹೊರಹಾಕಿದ್ದರು, ಆದರೆ ನಂತರ ಆ ಪ್ರಕ್ರಿಯೆ ಮುಂದುವರಿದಿರಲಿಲ್ಲ.
ಯಾದವ್ ಕುಟುಂಬದ ಬಹುತೇಕ ಸದಸ್ಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ, ಪ್ರತೀಕ್ ಮಾತ್ರ ಎಂದೂ ಚುನಾವಣಾ ಅಖಾಡಕ್ಕೆ ಇಳಿದಿರಲಿಲ್ಲ. 2012ರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಅವರು ಅಜಂಗಢದಿಂದ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದರು ಮತ್ತು ತಾಯಿ ಸಾಧನಾ ಹಾಗೂ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಬೆಂಬಲ ನೀಡಿದ್ದರೂ, ಪ್ರತೀಕ್ ಮಾತ್ರ ಅಧಿಕೃತ ರಾಜಕೀಯ ಸ್ಥಾನಮಾನಗಳಿಂದ ದೂರವೇ ಉಳಿದಿದ್ದರು. ಇವರ ಅಕಾಲಿಕ ನಿಧನಕ್ಕೆ ಉತ್ತರ ಪ್ರದೇಶದ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ಮಿತವ್ಯಯ ಕರೆ ಬೆನ್ನಲ್ಲೇ ಮೋದಿ ಬೆಂಗಾವಲು ವಾಹನ ಶೇ.50ರಷ್ಟು ಕಡಿತ ; ಇವಿ ಬಳಕೆಗೆ ಒತ್ತು!



















