ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡವು ಪ್ರಮುಖ ಟೂರ್ನಿಗಳಲ್ಲಿ ಯಶಸ್ಸು ಸಾಧಿಸುತ್ತಿದ್ದರೂ, ಡ್ರೆಸ್ಸಿಂಗ್ ರೂಮ್ ಒಳಗೆ ಎಲ್ಲವೂ ಸರಿಯಿಲ್ಲ ಎಂಬ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ಹಾಗೂ ವರ್ತನೆಯ ಬಗ್ಗೆ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಗಂಭೀರ್ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ, ಆಟಗಾರರನ್ನು ಬೆದರಿಸುವ ಮೂಲಕ ತಂಡದೊಳಗೆ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಅತುಲ್ ವಾಸನ್ ಹೇಳಿಕೆ ನೀಡಿದ್ದು, ಈ ವಿಚಾರ ಇದೀಗ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಹಾಗೂ ಚರ್ಚೆಗೆ ಕಾರಣವಾಗಿದೆ.
ನನ್ನದೇ ದಾರಿ, ಇಲ್ಲವೇ ಹೊರನಡಿ ಎಂಬ ಮನಸ್ಥಿತಿ
ಗೌತಮ್ ಗಂಭೀರ್ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ ಈ ವರ್ಷದ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದೆ. ಆದರೆ, ಈ ಯಶಸ್ಸಿನ ಹಿಂದಿರುವ ಕಹಿಸತ್ಯಗಳನ್ನು ಅತುಲ್ ವಾಸನ್ ಬಿಚ್ಚಿಟ್ಟಿದ್ದಾರೆ. ದೆಹಲಿ ಕ್ರಿಕೆಟ್ ದಿನಗಳಿಂದಲೂ ಗಂಭೀರ್ ಅವರನ್ನು ಹತ್ತಿರದಿಂದ ಬಲ್ಲ ವಾಸನ್, ಗಂಭೀರ್ ಅವರದು ಮೊದಲಿನಿಂದಲೂ ಅತಿಯಾದ ಆಕ್ರಮಣಕಾರಿ ಸ್ವಭಾವ ಎಂದಿದ್ದಾರೆ. “ತಾನು ಹೇಳಿದ್ದೇ ನಡೆಯಬೇಕು, ಇಲ್ಲವಾದರೆ ಹೊರಹೋಗಬಹುದು ಎಂಬುದು ಗಂಭೀರ್ ಅವರ ನಿಲುವು. ಅವರ ಅಹಂಕಾರ ಬೇರೆಯದೇ ಮಟ್ಟದಲ್ಲಿದೆ, ಅವರು ಹಗಲನ್ನು ರಾತ್ರಿ ಎಂದರೆ ಉಳಿದವರೂ ಅದಕ್ಕೆ ಹೌದು ಎನ್ನಬೇಕು ಎಂಬ ಮನಸ್ಥಿತಿ ಅವರಲ್ಲಿದೆ” ಎಂದು ವಾಸನ್ ಟೀಕಿಸಿದ್ದಾರೆ. ಅವರ ಮಾತಿಗೆ ತಲೆಬಾಗದವರನ್ನು ತಮ್ಮ ‘ಹಿಟ್-ಲಿಸ್ಟ್’ನಲ್ಲಿ ಸೇರಿಸಿಕೊಳ್ಳುತ್ತಾರೆ ಎನ್ನುವ ಮೂಲಕ ತಂಡದಲ್ಲಿನ ಬಿಕ್ಕಟ್ಟನ್ನು ತೆರೆದಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಜೊತೆಗಿನ ಶೀತಲ ಸಮರ
ಗಂಭೀರ್ ಹಾಗೂ ಹಿರಿಯ ಆಟಗಾರ ವಿರಾಟ್ ಕೊಹ್ಲಿ ನಡುವಿನ ಸಂಬಂಧದ ಬಗ್ಗೆಯೂ ಅತುಲ್ ವಾಸನ್ ಸ್ಫೋಟಕ ಮಾಹಿತಿ ನೀಡಿದ್ದಾರೆ. ಗಂಭೀರ್ ಕೋಚ್ ಆದಾಗ ಇವರಿಬ್ಬರೂ ಹಳೆಯ ದ್ವೇಷ ಮರೆತು ಒಂದಾಗಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ, ಇಬ್ಬರ ನಡುವೆ ಈಗಲೂ ಶೀತಲ ಸಮರ ಮುಂದುವರಿದಿದೆ ಎನ್ನುತ್ತಾರೆ ವಾಸನ್. ಇಬ್ಬರೂ ದೆಹಲಿ ಮೂಲದವರಾಗಿದ್ದು, ಇಬ್ಬರಲ್ಲೂ ಅತಿಯಾದ ಆಕ್ರಮಣಕಾರಿ ಗುಣ ಹಾಗೂ ‘ಆಲ್ಫಾ-ಮೇಲ್’ ವ್ಯಕ್ತಿತ್ವ ಇರುವುದೇ ಈ ಸಂಘರ್ಷಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇದೇ ವೇಳೆ, 2025ರ ಐಪಿಎಲ್ ಮಧ್ಯದಲ್ಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದಿಢೀರನೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಘಟನೆಯ ಹಿಂದೆಯೂ ಡ್ರೆಸ್ಸಿಂಗ್ ರೂಮ್ನ ಈ ಉಸಿರುಗಟ್ಟುವ ವಾತಾವರಣವೇ ಕಾರಣವಾಗಿರಬಹುದು ಎಂಬ ಊಹಾಪೋಹಗಳಿಗೆ ವಾಸನ್ ಅವರ ಹೇಳಿಕೆ ಮತ್ತಷ್ಟು ಇಂಬು ನೀಡಿದೆ.
ಗೆಲುವು ಮುಚ್ಚಿಡುತ್ತಿರುವ ಕಹಿಸತ್ಯ: ಮುಳ್ಳಿನ ಮೇಲಿರುವ ಆಟಗಾರರು
ಯಾವುದೇ ತರಬೇತುದಾರನಿಗೆ ಆತನ ತಂಡ ಸತತವಾಗಿ ಸಾಧಿಸುತ್ತಿರುವ ಗೆಲುವುಗಳು ದೊಡ್ಡ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ. ಇದೇ ಸೂತ್ರ ಪ್ರಸ್ತುತ ಗಂಭೀರ್ ಅವರಿಗೂ ಅನ್ವಯಿಸುತ್ತಿದೆ. ತಂಡದೊಳಗೆ ಪ್ರೀತಿಗಿಂತ ಹೆಚ್ಚಾಗಿ ಕೋಲಿನ (ಬೆದರಿಕೆ) ಮೂಲಕ ಆಡಳಿತ ನಡೆಸುವ ಅವರ ಕಠಿಣ ನೀತಿಯಿಂದಾಗಿ ಕೆಲವು ಆಟಗಾರರು ಮುಳ್ಳಿನ ಮೇಲೆ ಮಲಗಿದಂತಹ (ಸ್ಲೀಪಿಂಗ್ ಆನ್ ನೀಡ್ಲ್ಸ್) ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ವಾಸನ್ ವಿವರಿಸಿದ್ದಾರೆ.
ಈಗ ತಂಡ ಗೆಲ್ಲುತ್ತಿರುವುದರಿಂದ ಗಂಭೀರ್ ಅವರ ವೈಯಕ್ತಿಕ ಇಷ್ಟ-ಕಷ್ಟಗಳು ಹಾಗೂ ಈ ಬೆದರಿಕೆ ತಂತ್ರಗಳು ಮುಚ್ಚಿಹೋಗಿವೆ. ಆದರೆ, ಒಂದೊಮ್ಮೆ ತಂಡ ಸೋಲಿನ ಸುಳಿಗೆ ಸಿಲುಕಿದರೆ ಆಗ ಈ ಎಲ್ಲಾ ವಿಚಾರಗಳು ಬಯಲಿಗೆ ಬಂದು, ಅವರು ತೀವ್ರ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ಅತುಲ್ ವಾಸನ್ ಎಚ್ಚರಿಸಿದ್ದಾರೆ. ತಂಡದ ಕೆಲವು ಆಟಗಾರರು ತೀವ್ರ ಅಸಮಾಧಾನಗೊಂಡಿದ್ದು, ಬಹಿರಂಗವಾಗಿ ಯಾರೂ ಮಾತನಾಡದಿದ್ದರೂ ಡ್ರೆಸ್ಸಿಂಗ್ ರೂಮ್ ಒಳಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಎಲ್ಲರಿಗೂ ಸ್ಪಷ್ಟ ಅರಿವಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪಡಿತರ ಅಕ್ಕಿ ಕಳ್ಳ ಸಾಗಾಣೆದಾರರಿಂದ 3 ಲಕ್ಷ ರೂ. ವಸೂಲಿ – ಬಳ್ಳಾರಿ ಎಸ್ಪಿ ಗನ್ಮ್ಯಾನ್ ಅರೆಸ್ಟ್!


















