ನಾಸಿಕ್ : ಟಿಸಿಎಸ್ ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಹಾಗೂ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಿದಾ ಖಾನ್ ಅವರ ಪೋಷಕರು ತಮ್ಮ ಮಗಳ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಹಾಗೂ ನಕಲಿ ಪ್ರಕರಣವಾಗಿದ್ದು, ಪ್ರಭಾವಿಗಳನ್ನು ರಕ್ಷಿಸಲು ಹೆಣೆದ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.
ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ನಿದಾ ಖಾನ್ ಅವರ ತಂದೆ ಮತ್ತು ಚಿಕ್ಕಪ್ಪ, ತಮ್ಮ ಮಗಳ ವಿರುದ್ಧ ಕೇಳಿಬಂದಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದಿದ್ದಾರೆ. ಇತ್ತೀಚೆಗಷ್ಟೇ ಅತ್ಯಾಚಾರದ ಆರೋಪದ ಮೇಲೆ ಬಂಧಿತನಾಗಿರುವ ನಾಸಿಕ್ನ ಸ್ವಯಂಘೋಷಿತ ದೇವಮಾನವ ಅಶೋಕ್ ಖರಾಟ್ಗೆ ಸಂಬಂಧಿಸಿದ ವಿವಾದಗಳನ್ನು ಮುಚ್ಚಿಹಾಕಲು ಮತ್ತು ಆತನನ್ನು ರಕ್ಷಿಸಲು ಉದ್ದೇಶಪೂರ್ವಕವಾಗಿ ಈ ಮತಾಂತರ ಪ್ರಕರಣವನ್ನು ಸೃಷ್ಟಿಸಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ದೂರುದಾರರು ಮತ್ತು ನಿದಾ ಖಾನ್ ನಡುವೆ ಯಾವುದೇ ಮಾತುಕತೆ ನಡೆದೇ ಇಲ್ಲ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.
‘ಆಕೆ ಗರ್ಭಿಣಿ, ಯಾವುದೇ ತಪ್ಪು ಮಾಡಿಲ್ಲ’
ಪ್ರಸ್ತುತ ನಿದಾ ಖಾನ್ ಭಿವಂಡಿಯಲ್ಲಿರುವ ತನ್ನ ಅತ್ತೆಯ ಮನೆಯಲ್ಲಿದ್ದಾಳೆ. ಆಕೆ ಗರ್ಭಿಣಿಯಾಗಿದ್ದು, ಈ ಸುಳ್ಳು ಆರೋಪಗಳಿಂದ ಇಡೀ ಕುಟುಂಬ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ನಮ್ಮ ಕುಟುಂಬ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತದೆ. ನಿದಾ ಎಂದಿಗೂ ಇತರರ ದೇವರ ಬಗ್ಗೆ ಕೀಳಾಗಿ ಮಾತನಾಡಿಲ್ಲ ಅಥವಾ ಯಾರನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪತಿಯ ವಿಚಾರಣೆ ಮುಂದುವರಿಕೆ
ಈ ನಡುವೆ ನಾಸಿಕ್ ಪೊಲೀಸರು ನಿದಾ ಖಾನ್ ಅವರ ಪತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಈ ದಂಪತಿ ಮುಂಬ್ರಾದಲ್ಲಿ ವಾಸಿಸುತ್ತಿದ್ದರು. ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿರುವ ಆಕೆಯ ಪತಿ, ನಿದಾ ಖಾನ್ ಅವರ ಚಟುವಟಿಕೆಗಳ ಬಗ್ಗೆ ತನಗೆ ಹೆಚ್ಚಿನ ಮಾಹಿತಿಯಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಟಿಸಿಎಸ್ ನಾಸಿಕ್ ಘಟಕದಲ್ಲಿ 18 ರಿಂದ 25 ವರ್ಷ ವಯಸ್ಸಿನ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಒಂದು ಗುಂಪು ಕಿರುಕುಳ ನೀಡುತ್ತಿತ್ತು ಎಂಬ ಆರೋಪಗಳು ದೇಶಾದ್ಯಂತ ಸಂಚಲನ ಸೃಷ್ಟಿಸಿವೆ. ಹಿಂದೂ ದೇವತೆಗಳನ್ನು ನಿಂದಿಸುವುದು, ಬಲವಂತವಾಗಿ ಮಾಂಸಾಹಾರ ತಿನ್ನಿಸುವುದು ಹಾಗೂ ಧಾರ್ಮಿಕ ಆಚರಣೆಗಳನ್ನು ಪಾಲಿಸುವಂತೆ ಒತ್ತಾಯಿಸುತ್ತಿದ್ದ ಬಗ್ಗೆ ಪುರುಷ ಉದ್ಯೋಗಿಯೊಬ್ಬರದ್ದು ಸೇರಿದಂತೆ ಒಟ್ಟು 9 ಎಫ್ಐಆರ್ಗಳು ದಾಖಲಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನಿಶ್ ಶೇಖ್, ತೌಸಿಫ್ ಅತ್ತಾರ್ ಸೇರಿದಂತೆ ಏಳು ಮಂದಿ ಪುರುಷರು ಹಾಗೂ ಓರ್ವ ಮಹಿಳೆಯನ್ನು ಈಗಾಗಲೇ ಬಂಧಿಸಲಾಗಿದೆ. ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಲು ಮುಂದಾದಾಗ, ‘ಇದೆಲ್ಲಾ ಸಾಮಾನ್ಯ, ಇಂತಹ ಘಟನೆಗಳು ನಡೆಯುತ್ತಿರುತ್ತವೆ’ ಎಂದು ಹೇಳುವ ಮೂಲಕ ನಿದಾ ಖಾನ್ ದೂರು ನೀಡದಂತೆ ತಡೆಯಲು ಯತ್ನಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಗಂಭೀರ ಆರೋಪಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್, ಘಟನೆಯ ಸತ್ಯಾಸತ್ಯತೆಯನ್ನು ಅರಿಯಲು ಮತ್ತು ತಪ್ಪಿತಸ್ಥರನ್ನು ಪತ್ತೆಹಚ್ಚಲು ಟಿಸಿಎಸ್ ಸಿಒಒ ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ : 1 ಗಂಟೆಯಲ್ಲಿ 7 ಸುಳ್ಳು : ಟ್ರಂಪ್ ದಿಗ್ಬಂಧನ ಹೇಳಿಕೆಗೆ ಕೆರಳಿದ ಇರಾನ್, ಹೊರ್ಮುಜ್ ಜಲಸಂಧಿ ಮತ್ತೆ ಮುಚ್ಚುವ ಎಚ್ಚರಿಕೆ!



















