ಬೀದರ್ : ಬೀದರ್ ಜಿಲ್ಲೆಯ ಹುಲಸೂರ್ ತಾಲ್ಲೂಕಿನ ಗಬೀಡಿಗೌಡಗಾಂವ ಗ್ರಾಮದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಸರಬರಾಜು ಪುನಃ ಸ್ಥಾಪಿಸುವ ವೇಳೆ ಲೈನ್ಮನ್ ರಾಜಪ್ಪ ಪಾಂಚಾಳ ಅವರಿಗೆ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸದ್ಯ ಇದೀಗ ಗಾಯಾಳುವನ್ನು ಚಿಕಿತ್ಸೆಗಾಗಿ ಸೋಲಾಪುರ ಆಸ್ಪತ್ರೆಗೆ ದಾಖಲಿಸಿದ್ದು, ಕಾಲುಗಳಿಗೆ ತೀವ್ರ ಗಾಯವಾಗಿದ್ದು, ಬಲಗೈ ಕತ್ತರಿಸಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಸಂಜೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು, ಗ್ರಾಮಸ್ಥರು ಜೆಸ್ಕಾಂ ಉಪ ವಿಭಾಗದ ಜೆಇ ಅವರಿಗೆ ಕರೆ ಮಾಡಿ, ತಕ್ಷಣವೇ ವಿದ್ಯುತ್ ಸರಬರಾಜು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಬಳಿಕ ಜೆಇ ಅವರು, ಲೈನ್ಮನ್ ರಾಜಪ್ಪ ಪಾಂಚಾಳ ಅವರಿಗೆ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯ ನಡೆಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ನಿಯಮಾನುಸಾರ ಎಲ್.ಸಿ. ಪಡೆದು ಕಾರ್ಯಾಚರಣೆ ನಡೆಸಬೇಕು. ಆದರೆ ಎಲ್ಸಿ ಪಡೆದಿದ್ದಾರೋ ಇಲ್ಲವೋ ಎಂಬ ಗೊಂದಲದ ನಡುವೆ ರಾಜಪ್ಪ ಪಾಂಚಾಳ ಅವರು ಕಂಬ ಹತ್ತಿ ಕೆಲಸ ಆರಂಭಿಸಿದಾಗ ವಿದ್ಯುತ್ ತಗುಲಿದೆ. ಇದರಿಂದಾಗಿ ಬಲಗೈ ಸುಟ್ಟುಹೋಗಿದ್ದು, ಕೆಳಗೆ ಬಿದ್ದಿದ್ದರಿಂದ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಸ್ಥಳೀಯರು ತಕ್ಷಣ ಜೆಇ ಅವರಿಗೆ ಮಾಹಿತಿ ನೀಡಿದರೂ, ಅವರು ತಡವಾಗಿ ಸ್ಥಳಕ್ಕೆ ಧಾವಿಸಿದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಜೆಇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಲಸೂರ ಜೆಸ್ಕಾಂ ಉಪ ವಿಭಾಗದ ಲೈನ್ಮನ್ ರಾಜಪ್ಪ ಪಾಂಚಾಳ ಕರೆದೊಯ್ದು ಹುಲಸೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇಲಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಬಸವಕಲ್ಯಾಣ ಜೆಸ್ಕಾಂ ಸಹಾಯಕ ನಿರ್ದೇಶಕ ಗಣಪತಿ ಮೈನಾಳೆ ಪ್ರತಿಕ್ರಿಯಿಸಿ, ‘ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ಜೆಇ ಹೇಳಿಕೆ ಪ್ರಕಾರ ಎಲ್.ಸಿ ಪಡೆಯಲಾಗಿಲ್ಲ ಎನ್ನಲಾಗಿದೆ. ಲೈನ್ಮನ್ ಪಡೆದಿದ್ದಾಗಿ ಹೇಳುತ್ತಿದ್ದು, ವಾಸ್ತವಾಂಶ ಪರಿಶೀಲನೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.
ಗಡಿಗೌಡಗಾಂವ ಗ್ರಾಮದಲ್ಲಿ ಹಲವು ವರ್ಷಗಳಿಂದ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಮಸ್ಯೆ ಪರಿಹಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ. ವಿದ್ಯುತ್ ಸಹಾಯವಾಣಿ 191 2ಗೆ ಕರೆ ಮಾಡಿದರೆ, ಸಿಬ್ಬಂದಿ ತಡವಾಗಿ ಬರುತ್ತಾರೆ’ ಎಂದು ಆರೋಪಿಸಿದರು.
ಈ ಬಗ್ಗೆ ಗ್ರಾಮಸ್ಥರಾದ ಕಾಶೆಪ್ಪ ಬಸಪ್ಪ ರಾಚೋಟಿ, ಮಹೇಶ ಪಾಟೀಲ, ಬಿಪಿನ್, ಮಹದೇವ ರೆಡ್ಡಿ, ಗೋವಿಂದ ವಗ್ಗೆ, ಪ್ರಶಾಂತ್, ಅಭಿಷೇಕ, ಶ್ರೀಧರ, ನಾಮದೇವ, ಆಸೀಫ್ ಸೇರಿದಂತೆ ಇತರರು ಹುಲಸೂರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಗಾಳಿ ಇಲ್ಲ.. ಮಳೆ ಇಲ್ಲ.. ಯಶವಂತಪುರದಲ್ಲಿ ಧರೆಗುರುಳಿದ ಬೃಹತ್ ಮರ



















