ಬೆಂಗಳೂರು : ಆರ್ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕದ್ದ ಚಿನ್ನಾಭರಣ ಖರೀದಿ ಮಾಡಿ ಐನಾತಿ ಕೆಲಸ ಮಾಡುತ್ತಿದ್ದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ತಬಸ್ಸುಂ ಮತ್ತು ಮುದಾಸೀರ್ ಎಂಬ ಇಬ್ಬರನ್ನು ಆರ್ಟಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಮುದಾಸೀರ್ ಕಳ್ಳತನ ಮಾಡುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳ್ಳತನ ಮಾಡಿದ ಚಿನ್ನಾಭರಣವನ್ನು ಆತ ತಬಸ್ಸುಂಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಳ್ಳರಿಂದ ಅಸಲಿ ಚಿನ್ನಾಭರಣ ಖರೀದಿ ಮಾಡುತ್ತಿದ್ದ ತಬಸ್ಸುಂ, ಅದೇ ಮಾದರಿಯಲ್ಲಿ ರೋಲ್ಡ್ ಗೋಲ್ಡ್ ಒಡವೆ ಮಾಡಿಸಿ ಅಸಲಿ ಒಡವೆಗಳನ್ನು ಮಾರಾಟ ಮಾಡಿ ಹಣ ಮಾಡುತ್ತಿದ್ದಳು ಎನ್ನಲಾಗಿದೆ.
ಇನ್ನು ಪೊಲೀಸರು ಬಂಧಿಸಲು ಮನೆಗೆ ಬಂದಾಗ ತಬಸ್ಸುಂ ರೋಲ್ಡ್ ಗೋಲ್ಡ್ ಒಡವೆಗಳನ್ನು ತೋರಿಸಿ ಇದೇ ಕಳ್ಳ ಕೊಟ್ಟದ್ದೆಂದು ಕಥೆ ಕಟ್ಟಲು ಯತ್ನಿಸಿದ್ದಳು. ಆದರೆ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ಅಸಲಿ ಸತ್ಯ ಗೊತ್ತಾಗಿದೆ.
ಪ್ರಕರಣ ಸಂಬಂಧ ಆರ್ಟಿ ನಗರ ಪೊಲೀಸರು ಆರೋಪಿಗಳಿಂದ ಸುಮಾರು 10.55 ಲಕ್ಷ ರೂಪಾಯಿ ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಬೀಗ ಒಡೆದು ಮನೆ ಕಳ್ಳತನ ಮಾಡಿದ ಪ್ರಕರಣದಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.
ಇದನ್ನೂ ಓದಿ : ಅಮೆರಿಕ-ಇರಾನ್ ನಡುವೆ ಮತ್ತೆ ಶಾಂತಿ ಮಾತುಕತೆ ; ಎಲ್ಲಿ ನಡೆಯಲಿದೆ ಈ ಸಂಧಾನ?



















