ಬೆಂಗಳೂರು : ನಗರದಲ್ಲಿ ಬೀದಿ ನಾಯಿಗಳ ಸಂರಕ್ಷಣೆ, ಆರೈಕೆ ಮತ್ತು ಪೋಷಣೆಗೆ ಮಹಿಳೆಯೊಬ್ಬರು ಮುಂದಾಗಿದ್ದಾರೆ. ಬೆಂಗಳೂರಿನ ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ, ಶ್ರೀಮತಿ ಸುಜಯ ಜಗದೀಶ್ ಅವರು ಒಟ್ಟು 20 ಬೀದಿ ನಾಯಿಗಳನ್ನು ದತ್ತು ಪಡೆದು ಮಾನವೀಯತೆಯಿಂದ ನಿರ್ವಹಣೆ ಮಾಡಲು ಮುಂದಾಗಿದ್ದಾರೆ.
ನಗರದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳು ಇದ್ದು, ಅವುಗಳ ರಕ್ಷಣೆ ಹಾಗೂ ಆರೈಕೆಗೆ ಸುಪ್ರೀಂ ಕೋರ್ಟ್ ಕೂಡ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಸೂಚನೆ ಅನುಸಾರ ಬೆಂಗಳೂರು ನಗರ ಪಾಲಿಕೆ (ಜಿಬಿಎ) ಕೆಲವು ಸ್ಥಳಗಳಲ್ಲಿ ಶೆಡ್ ನಿರ್ಮಿಸಿ, ಊಟ, ವಸತಿ ಮತ್ತು ವೈದ್ಯಕೀಯ ಆರೈಕೆ ವ್ಯವಸ್ಥೆ ಮಾಡಿತ್ತು.
ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ದತ್ತು ಪಡೆಯುವ ಪ್ರಕ್ರಿಯೆಯನ್ನು ಮಾನವೀಯ ನಿಯಮದಂತೆ ಪೂರ್ಣಗೊಳಿಸಿದ್ದರು. ದತ್ತು ಪಡೆದ ಎಲ್ಲಾ ನಾಯಿಗಳಿಗೆ ಅಗತ್ಯ ಲಸಿಕೆ , ಸಂತಾನ ಹರಣ ಶಸ್ತ್ರ ಚಿಕಿತ್ಸೆ (ABC), ಆರೋಗ್ಯ ಪರಿಶೀಲನೆ ಮತ್ತು ಗುರುತು ಗುರುತಿಸುವಿಕೆ (Tagging) ಕಾರ್ಯಕ್ರಮಗಳನ್ನು ಪಾಲಿಕೆ ಪೂರ್ಣಗೊಳಿಸಿದೆ.
ಈ ಸಂದರ್ಭ, ನಗರ ಪಾಲಿಕೆಯ ಪಶುಪಾಲನೆ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಶ್ರೀಮತಿ ಸುಜಯ ಜಗದೀಶ್ ಅವರು ನಾಯಿಗಳಿಗೆ ಸಮರ್ಪಕ ಆಹಾರ, ಆಶ್ರಯ, ವೈದ್ಯಕೀಯ ಆರೈಕೆ ಹಾಗೂ ಮಾನವೀಯ ಸಂರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ನಗರ ಪಾಲಿಕೆ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳ ದತ್ತು, ABC & ARV ಕಾರ್ಯಕ್ರಮಗಳು ಮತ್ತು ಪ್ರಾಣಿ ಕಲ್ಯಾಣ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಿದೆ. ಆಸಕ್ತ ನಾಗರಿಕರು ಪಾಲಿಕೆಯ ಪಶುಪಾಲನಾ ವಿಭಾಗವನ್ನು ಸಂಪರ್ಕಿಸಿ ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ ಪಡೆಯಬಹುದು.
ಇದನ್ನೂ ಓದಿ : ದರ್ಶನ್ ಹುಟ್ಟುಹಬ್ಬ | ಬಿಕೋ ಎನ್ನುತ್ತಿರೋ ಫಾರಂ ಹೌಸ್..!



















