ಬೆಂಗಳೂರು : ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮತ್ತೋರ್ವ ಮಹಿಳೆ ಬಲಿಯಾಗಿರುವ ದುರ್ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, 31 ವರ್ಷದ ಮೈಮೋನಿಸ ಎಂಬ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ ಬಳಿಕ ಗಂಡ ಹಾಗೂ ಮಾವ ನಿರಂತರವಾಗಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗಂಡ ಜುನೈದ್ ಅವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಮೈಮೋನಿಸ ಅವರ ಕುಟುಂಬ ಮದುವೆ ವೇಳೆ 45 ಗ್ರಾಂ ಚಿನ್ನ ಹಾಗೂ ಒಂದು ಬೈಕ್ ಅನ್ನು ವರದಕ್ಷಿಣೆಯಾಗಿ ನೀಡಿತ್ತು. ಆದರೆ ಅಷ್ಟರಿಂದ ತೃಪ್ತರಾಗದ ಗಂಡ ಜುನೈದ್ ಹಾಗೂ ಮಾವ ನಜೀರ್ ಅಹಮದ್, “ಇನ್ನೂ ಚಿನ್ನ ತಗೊಂಡು ಬಾ, ಹಣ ತಗೊಂಡು ಬಾ” ಎಂದು ಪ್ರತಿದಿನ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಹೆಚ್ಚುವರಿ ವರದಕ್ಷಿಣೆ ತರುವಂತೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.
ಕುಟುಂಬದವರ ಆರೋಪದ ಪ್ರಕಾರ, ಮಾವ ನಜೀರ್ ಅಹಮದ್ ಮೈಮೋನಿಸ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಮಗನ ಜೊತೆ ಸೇರಿ ವರದಕ್ಷಿಣೆ ಕಿರುಕುಳ ನೀಡಲು ಸಾಥ್ ನೀಡುತ್ತಿದ್ದ ಎನ್ನಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕಿರುಕುಳದಿಂದ ಮೈಮೋನಿಸ ತೀವ್ರ ಮಾನಸಿಕವಾಗಿ ನೊಂದಿದ್ದರು. ನಿರಂತರ ಅವಮಾನ, ನಿಂದನೆ ಮತ್ತು ವರದಕ್ಷಿಣೆ ಬೇಡಿಕೆಯ ಕಾಟವನ್ನು ಸಹಿಸಲಾಗದೆ ಮೈಮೋನಿಸ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಗಂಡ ಜುನೈದ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಾವ ನಜೀರ್ ಅಹಮದ್ ಸೇರಿದಂತೆ ಇತರರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ‘ನನ್ನ ದೇವರನ್ನೇ ಕಳೆದುಕೊಂಡೆ’ ; ಬಿಕ್ಕಿಬಿಕ್ಕಿ ಅತ್ತ ರೇವಣ್ಣ!



















