ಬೆಂಗಳೂರು: ಬ್ಯಾಂಕ್ ಸಂಬಂಧಿತ ವ್ಯವಹಾರಗಳಿದ್ದರೆ ಗ್ರಾಹಕರು ಇಂದೇ ಮುಗಿಸಿಕೊಳ್ಳುವುದು ಒಳಿತು. ನಾಳೆಯಿಂದ ವಾರಾಂತ್ಯದಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳಲಿದೆ. ವಾರಾಂತ್ಯದ ರಜೆಗಳ ಜೊತೆಗೆ ಬ್ಯಾಂಕ್ ಸಿಬ್ಬಂದಿಗಳ ಮುಷ್ಕರ ಕರೆ ಕೊಟ್ಟಿದ್ದಾರೆ.
ವಾರದಲ್ಲಿ ಐದು ದಿನ ಮಾತ್ರ ಕೆಲಸದ ಅವಧಿ ನಿಗದಿ ಮಾಡುವಂತೆ ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆರು ದಿನಗಳ ಕೆಲಸದ ಬದಲು ಐದು ದಿನಗಳ ಕೆಲಸದ ಅವಧಿಯನ್ನು ಫಿಕ್ಸ್ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಪ್ರಮುಖ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 27ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಇದಕ್ಕೂ ಮೊದಲು ಜನವರಿ 24ರಂದು ನಾಲ್ಕನೇ ಶನಿವಾರ, 25ರಂದು ಭಾನುವಾರ ಹಾಗೂ 26ರಂದು ಗಣರಾಜ್ಯೋತ್ಸವದ ಸರ್ಕಾರಿ ರಜೆ ಇರುವುದರಿಂದ, ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ. ಹೀಗಾಗಿ ವಾರಾಂತ್ಯದಲ್ಲಿ ಗ್ರಾಹಕರಿಗೆ ನೇರ ಬ್ಯಾಂಕ್ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.
ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಆದರೆ ನಗದು ವಿತ್ಡ್ರಾ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ ಸೇರಿದಂತೆ ಶಾಖೆ ಆಧಾರಿತ ಬ್ಯಾಂಕ್ ವ್ಯವಹಾರಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕಾರಣದಿಂದ ಗ್ರಾಹಕರು ತೊಂದರೆಯಿಂದ ತಪ್ಪಿಸಿಕೊಳ್ಳಲು ಇಂದೇ ಅಗತ್ಯ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಇದನ್ನೂ ಓದಿ : ಸಾಲು ಸಾಲು ರಜೆ | ಖಾಸಗಿ ಬಸ್ ಟಿಕೆಟ್ ದರ ಕೇಳಿ ಪ್ರಯಾಣಿಕರು ಶಾಕ್..!



















