ಇಸ್ಲಾಮಾಬಾದ್: ಕಳೆದ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ನಾಲ್ಕು ದಿನಗಳ ಸಂಘರ್ಷದ (ಆಪರೇಷನ್ ಸಿಂದೂರ) ಸಂದರ್ಭದಲ್ಲಿ ತಮಗೆ ಬಂಕರ್ಗೆ ತೆರಳುವಂತೆ ಮಿಲಿಟರಿ ಕಾರ್ಯದರ್ಶಿ ಸಲಹೆ ನೀಡಿದ್ದರು ಎಂಬ ಸ್ಫೋಟಕ ಸತ್ಯವನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಬಹಿರಂಗಪಡಿಸಿದ್ದಾರೆ.
ಶನಿವಾರ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, “ಯುದ್ಧ ಆರಂಭವಾಗಿದೆ, ಬಂಕರ್ಗೆ ಹೋಗೋಣ ಎಂದು ಮಿಲಿಟರಿ ಕಾರ್ಯದರ್ಶಿ ಹೇಳಿದರು. ಆದರೆ ಸಾವು ಬರುವುದಿದ್ದರೆ ಇಲ್ಲೇ ಬರಲಿ, ನಾಯಕರು ಬಂಕರ್ನಲ್ಲಿ ಸಾಯುವುದಿಲ್ಲ, ಯುದ್ಧಭೂಮಿಯಲ್ಲಿ ಸಾಯುತ್ತಾರೆ ಎಂದು ನಾನು ನಿರಾಕರಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಯುದ್ಧದ ಬಗ್ಗೆ ತಮಗೆ ನಾಲ್ಕು ದಿನಗಳ ಮೊದಲೇ ಸುಳಿವಿತ್ತು ಎಂದೂ ಜರ್ದಾರಿ ಹೇಳಿಕೊಂಡಿದ್ದಾರೆ.
ಜರ್ದಾರಿ ಸುಳ್ಳನ್ನು ಬಯಲಿಗೆಳೆದ ನಿವೃತ್ತ ಲೆಫ್ಟಿನೆಂಟ್ ಜನರಲ್
ಜರ್ದಾರಿ ಅವರ ಈ ಹೇಳಿಕೆಗಳನ್ನು ಭಾರತದ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್ ತಳ್ಳಿಹಾಕಿದ್ದಾರೆ. “ಅಧ್ಯಕ್ಷ ಜರ್ದಾರಿ ಮಾತ್ರವಲ್ಲ, ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸೇರಿದಂತೆ ಇಡೀ ರಾಜಕೀಯ ಮತ್ತು ಮಿಲಿಟರಿ ನಾಯಕತ್ವ ಆ ಸಮಯದಲ್ಲಿ ಬಂಕರ್ನಲ್ಲಿ ಅಡಗಿ ಕುಳಿತಿತ್ತು. ಕೇವಲ ಸೈನಿಕರನ್ನು ಮಾತ್ರ ಯುದ್ಧಕ್ಕೆ ನೂಕಿ ಅವರು ಬಲಿಯಾಗುವಂತೆ ಮಾಡಿದ್ದರು” ಎಂದು ಅವರು ಹೇಳಿದ್ದಾರೆ.
ಜರ್ದಾರಿ ಅವರಿಗೆ ಯುದ್ಧದ ಬಗ್ಗೆ ಮುನ್ಸೂಚನೆ ಇತ್ತು ಎಂಬ ಹೇಳಿಕೆಯನ್ನು ಪ್ರಶ್ನಿಸಿದ ಅವರು, “ನಿಮಗೆ ಮೊದಲೇ ಮಾಹಿತಿ ಇತ್ತೆಂದಾದರೆ, ಭಾರತದ ಒಂದೇ ಒಂದು ಕ್ಷಿಪಣಿಯನ್ನೂ ತಡೆಯಲು ನಿಮ್ಮಿಂದ ಏಕೆ ಸಾಧ್ಯವಾಗಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಏನಿದು ಆಪರೇಷನ್ ಸಿಂದೂರ?
ಏಪ್ರಿಲ್ 26 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮತ್ತು ವಾಯುಪಡೆ ಮೇ 7 ರಂದು ‘ಆಪರೇಷನ್ ಸಿಂದೂರ’ ಹೆಸರಿನ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿ, ನೂರಕ್ಕೂ ಹೆಚ್ಚು ಉಗ್ರರನ್ನು ಮಟ್ಟಹಾಕಿತ್ತು.
ಮೇ 7 ರಂದು ಆರಂಭವಾದ ಈ ಸಂಘರ್ಷದಲ್ಲಿ ಪಾಕಿಸ್ತಾನವು ಭಾರತದ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿ ವಿಫಲವಾಗಿತ್ತು. ಭಾರತದ ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನದ ಕಮಾಂಡರ್ಗಳು ಅಂತಿಮವಾಗಿ ಕದನ ವಿರಾಮಕ್ಕೆ ವಿನಂತಿಸಿಕೊಂಡಿದ್ದರು. ಮೇ 10 ರಂದು ಈ ಸಂಘರ್ಷ ಕೊನೆಗೊಂಡಿತ್ತು.
ಇದನ್ನೂ ಓದಿ : ಹಾವೇರಿ | ಕಾಟಾವು ಮಾಡಿ ರಾಶಿ ಹಾಕಿದ್ದ ಮೆಕ್ಕೆಜೋಳ ಸುಟ್ಟು ಭಸ್ಮ



















