ನವದೆಹಲಿ: ಲೋಕಸಭೆ ಚುನಾವಣೆ ನಡೆದ 2 ಆರ್ಥಿಕ ವರ್ಷದಲ್ಲಿ (2024-25) ಆಡಳಿತಾರೂಢ ಬಿಜೆಪಿ ಬರೋಬ್ಬರಿ 6,654.93 ಕೋಟಿ ರೂ. ದೇಣಿಗೆ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿಜೆಪಿ ದೇಣಿಗೆಯಲ್ಲಿ ಶೇ. 68ರಷ್ಟು ಭಾರಿ ಏರಿಕೆ ಕಂಡುಬಂದಿದ್ದರೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ನ ದೇಣಿಗೆಯಲ್ಲಿ ಭಾರಿ ಕುಸಿತವಾಗಿದೆ.
ಬಿಜೆಪಿಗೆ ಹರಿದುಬಂದ ಹಣವೆಷ್ಟು?
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿ, ಚುನಾವಣಾ ಆಯೋಗಕ್ಕೆ ತನ್ನ ವಾರ್ಷಿಕ ದೇಣಿಗೆ ವರದಿಯನ್ನು ಸಲ್ಲಿಸಿದೆ. ಏಪ್ರಿಲ್ 1, 2024 ರಿಂದ ಮಾರ್ಚ್ 30, 2025ರವರೆಗಿನ ಅವಧಿಯಲ್ಲಿ, ಅಂದರೆ ಲೋಕಸಭೆ ಹಾಗೂ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದ ಸಂದರ್ಭದಲ್ಲಿ ಈ ದೇಣಿಗೆ ಹರಿದುಬಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 3,967 ಕೋಟಿ ರೂ. ಸಂಗ್ರಹಿಸಿದ್ದ ಬಿಜೆಪಿ, ಈ ಬಾರಿ ತನ್ನ ಗಳಿಕೆಯನ್ನು ಐದು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಸಿಕೊಂಡಿದೆ. 20,000 ರೂ.ಗಿಂತ ಹೆಚ್ಚಿನ ದೇಣಿಗೆಗಳ ವಿವರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ.
ಕಾಂಗ್ರೆಸ್ಗೆ ಹಿನ್ನಡೆ
ಒಂದೆಡೆ ಬಿಜೆಪಿ ದೇಣಿಗೆಯಲ್ಲಿ ಏರಿಕೆ ಕಂಡಿದ್ದರೆ, ಕಾಂಗ್ರೆಸ್ ಪಕ್ಷದ ದೇಣಿಗೆ ಸಂಗ್ರಹದಲ್ಲಿ ಶೇ. 43ರಷ್ಟು ಕುಸಿತವಾಗಿದೆ. 2023-24ರಲ್ಲಿ 1,129 ಕೋಟಿ ರೂ. ದೇಣಿಗೆ ಪಡೆದಿದ್ದ ಕಾಂಗ್ರೆಸ್, ಈ ಬಾರಿ ಕೇವಲ 522.13 ಕೋಟಿ ರೂ. ಸಂಗ್ರಹಿಸಲು ಶಕ್ತವಾಗಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ದೇಣಿಗೆ 618 ಕೋಟಿಯಿಂದ 184 ಕೋಟಿಗೆ ಮತ್ತು ಬಿಆರ್ಎಸ್ ಪಕ್ಷದ ದೇಣಿಗೆ 580 ಕೋಟಿಯಿಂದ ಕೇವಲ 15 ಕೋಟಿಗೆ ಕುಸಿದಿದೆ. ಆದರೆ, ಆಮ್ ಆದ್ಮಿ ಪಕ್ಷದ (ಎಎಪಿ) ದೇಣಿಗೆಯಲ್ಲಿ ಅಲ್ಪ ಏರಿಕೆಯಾಗಿದ್ದು, 22 ಕೋಟಿಯಿಂದ 39.2 ಕೋಟಿ ರೂ.ಗೆ ತಲುಪಿದೆ.
ಪ್ರಮುಖ ದಾನಿಗಳು ಯಾರು?
ಬಿಜೆಪಿಗೆ ಬಂದಿರುವ ಒಟ್ಟು ದೇಣಿಗೆಯಲ್ಲಿ ಶೇ. 40ರಷ್ಟು ಪಾಲು ‘ಎಲೆಕ್ಟೋರಲ್ ಟ್ರಸ್ಟ್’ಗಳ ಮೂಲಕ ಬಂದಿದೆ.
ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್: 2,180 ಕೋಟಿ ರೂ.
ಪ್ರೋಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್: 757 ಕೋಟಿ ರೂ.
ಕಾರ್ಪೊರೇಟ್ ವಲಯದ ಪ್ರಮುಖ ದಾನಿಗಳು:
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ: 100 ಕೋಟಿ ರೂ.
ರುಂಗ್ಟಾ ಸನ್ಸ್ ಪ್ರೈವೇಟ್ ಲಿಮಿಟೆಡ್: 95 ಕೋಟಿ ರೂ.
ವೇದಾಂತ: 67 ಕೋಟಿ ರೂ.
ಬಜಾಜ್ ಸಮೂಹದ ಕಂಪನಿಗಳು: 65 ಕೋಟಿ ರೂ.
ಐಟಿಸಿ ಲಿಮಿಟೆಡ್: 35 ಕೋಟಿ ರೂ.
ಹೀರೋ ಗ್ರೂಪ್: 23.65 ಕೋಟಿ ರೂ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವು ಬಿಜೆಪಿ ನಾಯಕರು ವೈಯಕ್ತಿಕವಾಗಿಯೂ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ.
ಎಲೆಕ್ಟೋರಲ್ ಬಾಂಡ್ ರದ್ದತಿಯ ನಂತರದ ಸ್ಥಿತಿ
ಸುಪ್ರೀಂ ಕೋರ್ಟ್ ಎಲೆಕ್ಟೋರಲ್ ಬಾಂಡ್ (ಚುನಾವಣಾ ಬಾಂಡ್) ಯೋಜನೆಯನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದ ನಂತರದ ಮೊದಲ ಆರ್ಥಿಕ ವರ್ಷ ಇದಾಗಿದೆ. ಈ ಹಿಂದೆ ಬಾಂಡ್ಗಳ ಮೂಲಕ ಅನಾಮಧೇಯವಾಗಿ ಸಾವಿರಾರು ಕೋಟಿ ದೇಣಿಗೆ ಹರಿದುಬರುತ್ತಿತ್ತು. ಬಾಂಡ್ಗಳಿಲ್ಲದೆಯೂ ಬಿಜೆಪಿ ದಾಖಲೆ ಪ್ರಮಾಣದ ದೇಣಿಗೆ ಸಂಗ್ರಹಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ದೆಹಲಿ ಬಾಂಬ್ ಸ್ಪೋಟದ ಹೆಸರಲ್ಲಿ ಡಿಜಿಟಲ್ ಅರೆಸ್ಟ್ | ಲಕ್ಷಾಂತರ ರೂ. ಕಳೆದುಕೊಂಡ ಸುದೀಪ್ ಅಭಿಮಾನಿ



















