ಮನಿ ಕೊಟ್ರೆ ಮನೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿಕೆ ಬೆನ್ನಲ್ಲೇ ಮುಜುಗರಕ್ಕೊಳಗಾಗಿರುವ ಸಿದ್ದರಾಮಯ್ಯ ಇದೀಗ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.
ಶಾಸಕ ಬಿ ಆರ್ ಪಾಟೀಲ್ ಗೆ ಕರೆ ಮಾಡಿದ್ದ ಸಿಎಂ, ಹೇಗಿದ್ದೀಯಪ್ಪಾ ಪಾಟೀಲ ಅಂತಾ ಚರ್ಚಿಸಿದ್ದಾರೆ. ಅಷ್ಟೇ ಅಲ್ಲಾ, ಏನೇ ಸಮಸ್ಯೆ ಇದ್ದರೂ ಚರ್ಚೆ ಮಾಡೋಣ ಬಾ ಅಂತಾ ಬುಲಾವ್ ನೀಡಿದ್ದಾರೆ. ಇಂದು ರಾಯಚೂರಿನಲ್ಲಿ ಕಾರ್ಯಕ್ರಮವಿದೆ, ಅಲ್ಲಿಗೇ ಬಾ ಅಂತಾ ಕರೆದಿದ್ದಾರೆ.
ಆದರೆ, ನನಗೆ ಆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ ನಾನಲ್ಲಿಗೆ ಬರುವುದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ. ಇದಕ್ಕುತ್ತರವಾಗಿ ನಾನು ಸೋಮವಾರ ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ನೀನು ಒಂದು ಕೆಲಸಾ ಮಾಡು, ಬುಧವಾರ ಮುಂಜಾನೆ ಬೆಂಗಳೂರಿನ ಕಾವೇರಿ ನಿವಾಸಕ್ಕೇ ಬಂದು ಬಿಡು. ಏನೇ ಸಮಸ್ಯೆ ಆಗಿದ್ದರೂ ಕುಳಿತು ಮಾತನಾಡೋಣ ಎಂದಿದ್ದಾರೆ. ಈ ಮೂಲಕ ಎದುರಾಗಿರುವ ಸಮಸ್ಯೆಯ ಡ್ಯಾಮೇಜ್ ಕಂಟ್ರೋಲ್ ಗೆ ಸಿದ್ದು ಖುದ್ದು ರಂಗಪ್ರವೇಶಿಸಿದ್ದಾರೆ.