ನವದೆಹಲಿ: ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಹನಿಮೂನ್ ಕೊಲೆ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿ, ಕೊಲೆಯಾದ ರಾಜಾ ಅವರ ಪತ್ನಿ ಸೋನಮ್ ರಘುವಂಶಿ ತನ್ನ ಮದುವೆಗೆ ಮುನ್ನ 200ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದ ‘ಸಂಜಯ್ ವರ್ಮಾ’ ಎಂಬ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಇದೀಗ ತೆರೆ ಬಿದ್ದಿದೆ. ಆ ಸಂಜಯ್ ವರ್ಮಾ ಬೇರೆ ಯಾರೂ ಅಲ್ಲ, ಆಕೆಯ ಪ್ರಿಯಕರ ರಾಜ್ ಕುಶ್ವಾಹಾ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಎಸ್ಪಿ ವಿವೇಕ್ ಸಿಯಮ್, “ರಾಜಾ ರಘುವಂಶಿಯವರನ್ನು ಮದುವೆಯಾಗುವ ಮೊದಲು ಸೋನಮ್, ಸಂಜಯ್ ವರ್ಮಾ ಎಂಬ ವ್ಯಕ್ತಿಗೆ 234 ಬಾರಿ ಫೋನ್ ಕರೆಗಳನ್ನು ಮಾಡಿರುವುದು ತಿಳಿದುಬಂದಿತ್ತು.
ಮದುವೆಯ ನಂತರವೂ ಈ ಕರೆಗಳು ಮುಂದುವರಿದಿದ್ದವು” ಎಂದು ಬಹಿರಂಗಪಡಿಸಿದ್ದಾರೆ. ಸಂಜಯ್ ವರ್ಮಾ ಅವರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ, ಅವರನ್ನು ಪತ್ತೆಹಚ್ಚಲು ಇಂದೋರ್ನಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ನಂತರದ ತನಿಖೆಯಲ್ಲಿ, ಸಂಜಯ್ ವರ್ಮಾ ವಾಸ್ತವವಾಗಿ ಮೂರನೇ ವ್ಯಕ್ತಿಯಲ್ಲ, ಸೋನಮ್ನ ಗೆಳೆಯ ಹಾಗೂ ಈ ಕೊಲೆಯ ಮುಖ್ಯ ಸಂಚುಕೋರ ಎಂದು ಆರೋಪಿಸಲಾಗಿರುವ ರಾಜ್ ಕುಶ್ವಾಹಾ ಎಂಬುದು ತಿಳಿದುಬಂದಿದೆ.
ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಸೋನಮ್ ತನ್ನ ಮೊಬೈಲ್ ನಲ್ಲಿ ರಾಜ್ ಕುಶ್ವಾಹನ ಹೆಸರನ್ನು ಸಂಜಯ್ ವರ್ಮಾ ಎಂದು ಸೇವ್ ಮಾಡಿಟ್ಟುಕೊಂಡಿದ್ದಳು. ಪ್ರತಿ ದಿನವೂ 30-40 ನಿಮಿಷ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದರು. ಪ್ರಕರಣದಲ್ಲಿ ಸೋನಮ್ ಳನ್ನು ಬಂಧಿಸಿದ ಬಳಿಕ ಆಕೆಯ ಫೋನ್ ನಲ್ಲಿರುವ ಸಂಜಯ್ ವರ್ಮಾ ಯಾರು ಎಂಬ ಪ್ರಶ್ನೆಗೆ ಪೊಲೀಸರಿಗೆ ಉತ್ತರ ಸಿಕ್ಕಿರಲಿಲ್ಲ. ಈಗ ಈ ನಿಗೂಢತೆ ಬಯಲಾಗಿದೆ.
ಈ ಹಿಂದೆ ಸೋನಮ್ ರಘುವಂಶಿ ಅವರ ಸಹೋದರ ಗೋವಿಂದ್ ಕೂಡ ಸಂಜಯ್ ವರ್ಮಾ ಯಾರೆಂದು ತನಗೆ ಗೊತ್ತಿಲ್ಲ ಎಂದು ಹೇಳಿದ್ದರು. “ಸಂಜಯ್ ವರ್ಮಾ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅಂತಹ ವ್ಯಕ್ತಿಯ ಪರಿಚಯವೇ ಇಲ್ಲ” ಎಂದಿದ್ದರು.
ಹನಿಮೂನ್ ಹತ್ಯೆಯ ಹಾದಿ
ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರನ್ನು ಮೇ 23ರಂದು ಮೇಘಾಲಯದ ಸೋಹ್ರಾದಲ್ಲಿ ಅವರ ಹನಿಮೂನ್ ಸಮಯದಲ್ಲಿ ಬರ್ಬರವಾಗಿ ಕೊಲ್ಲಲಾಗಿತ್ತು. ಸೋನಮ್ ರಘುವಂಶಿ ಮತ್ತು ಆಕೆಯ ಗೆಳೆಯ ರಾಜ್ ಕುಶ್ವಾಹಾ ಈ ಕೊಲೆಗೆ ಸಂಚು ರೂಪಿಸಿದ್ದರು. ಕೊಲೆಗಾಗಿ ರಾಜ್ ಕುಶ್ವಾಹಾ ಮೂವರು ಸುಪಾರಿ ಹಂತಕರನ್ನು ನೇಮಿಸಿಕೊಂಡಿದ್ದ. ರಘುವಂಶಿ ಮತ್ತು ಸೋನಮ್ ಮೇ 11 ರಂದು ಇಂದೋರ್ನಲ್ಲಿ ವಿವಾಹವಾಗಿದ್ದರು. ಮೇ 20 ರಂದು ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದರು. ರಘುವಂಶಿ ಅವರ ಕೊಳೆತ ದೇಹವು ಜೂನ್ 2 ರಂದು ಪತ್ತೆಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಮ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ತನಿಖೆಯ ಭಾಗವಾಗಿ, ಪೊಲೀಸರು ಮಂಗಳವಾರ ಅಪರಾಧ ಸ್ಥಳವನ್ನು ಮರುಸೃಷ್ಟಿಸಿದ್ದಾರೆ. ಕೊಲೆಯಾದ ನಂತರ, ಸೋನಮ್ ರಾಜ್ಯದಿಂದ ಓಡಿಹೋಗಿ, ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದ ಮೂಲಕ ಪ್ರಯಾಣಿಸಿ ಇಂದೋರ್ ತಲುಪಿದ್ದಳು. ಸೋಹ್ರಾ ಹೋಮ್ಸ್ಟೇನಲ್ಲಿ ತನ್ನ ಮಂಗಳಸೂತ್ರ ಮತ್ತು ಉಂಗುರವನ್ನು ಟ್ರಾಲಿ ಬ್ಯಾಗ್ನಲ್ಲಿ ಬಿಟ್ಟು ಹೋಗಿದ್ದು, ಇದು ಆಕೆಯ ಪಾತ್ರದ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿಸಿತ್ತು.
ಪೂರ್ವ ಖಾಸಿ ಹಿಲ್ಸ್ ಎಸ್ಪಿ ರಿತುರಾಜ್ ರವಿ ಪ್ರಕಾರ, ಹಂತಕರು ಮೂರು ವಿಫಲ ಪ್ರಯತ್ನಗಳ ನಂತರ ರಘುವಂಶಿಯನ್ನು ಕೊಲ್ಲುವಲ್ಲಿ ಯಶಸ್ವಿಯಾದರು. ಹಿಂದಿನ ಪ್ರಯತ್ನಗಳನ್ನು ಗುವಾಹಟಿ, ನೊಂಗ್ರಿಯಾಟ್ ಮತ್ತು ವೈಸಾವ್ಡಾಂಗ್ ಫಾಲ್ಸ್ ಬಳಿ ಮಾಡಲಾಗಿತ್ತು ಎಂದು ಅವರು ಬಾಯಿಬಿಟ್ಟಿದ್ದಾರೆ. ರಾಜ್ ಕುಶ್ವಾಹಾ ಈ ಕೊಲೆಯ ಹಿಂದಿನ ಸೂತ್ರಧಾರ ಎಂದು ನಂಬಲಾಗಿದ್ದರೂ, ಅನುಮಾನ ಬರಬಾರದು ಎಂಬ ಕಾರಣಕ್ಕೆ ಆತ ಮೇಘಾಲಯಕ್ಕೆ ಪ್ರಯಾಣಿಸಿರಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.