ಬೆಂಗಳೂರು : ನಗರದ ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಉದಯ್ ಕುಮಾರ್ ಕೊಲೆಯಾದ ಯುವಕನಾಗಿದ್ದು, ನಿನ್ನೆ ರಾತ್ರಿ ಸುಮಾರು 8.30ರ ವೇಳೆಗೆ ಬಾರ್ ಒಂದರ ಮುಂಭಾಗ ಈ ಕೃತ್ಯ ನಡೆದಿದೆ.
ಚಾಕು ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಬಾರ್ನಲ್ಲಿ ಉದಯ್ ಕುಮಾರ್ ಗುರಾಯಿಸಿದ ಎನ್ನುವ ಕಾರಣಕ್ಕೆ ಗಲಾಟೆ ಆರಂಭವಾಗಿದೆ. ಮೃತ ಉದಯ್ ಹಾಗೂ ಆರೋಪಿಗಳಾದ ಚೆಲುವ ಮತ್ತು ತೇಜ ಅವರಿಗೆ ಯಾವುದೇ ಪರಿಚಯ ಇರಲಿಲ್ಲ ಎನ್ನಲಾಗಿದೆ. ಗಲಾಟೆಯ ಬಳಿಕ ಉದಯ್ ಬಾರ್ನಿಂದ ಹೊರ ಬಂದಿದ್ದು, ಅದೇ ವೇಳೆ ಅಲ್ಲಿಗೆ ನಡೆದುಕೊಂಡು ಬಂದಿದ್ದ ಆರೋಪಿಗಳು ಮತ್ತೆ ಜಗಳ ತೆಗೆದಿದ್ದಾರೆ.
ಬಳಿಕ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ಒಡೆದ ಬಾಟಲಿಯಿಂದ ಎಡಭಾಗದ ಎದೆಗೆ ಚುಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡ ಉದಯ್ ಸ್ವಲ್ಪ ದೂರ ನಡೆದು ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಹುಚ್ಚಾಟ ; ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳ ರೋಚಕ ರಕ್ಷಣೆ!


















