ವಾಷಿಂಗ್ಟನ್: ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂದೂರ ಕಾರ್ಯಾಚರಣೆ, ಭಯೋತ್ಪಾದಕರ ವಿರುದ್ಧ ಭಾರತದ ಹೋರಾಟ ಮುಂತಾದ ವಿಚಾರಗಳನ್ನು ವಿದೇಶಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅಮೆರಿಕಕ್ಕೆ ತೆರಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಂಸದರ ನಿಯೋಗ ಅಲ್ಲಿನ ಅಧಿಕಾರಿಗಳು, ಸಂಸತ್ ಸದಸ್ಯರು, ತಜ್ಞರು, ಚಿಂತಕರೊಂದಿಗೆ ಮಾತುಕತೆ ನಡೆಸಿದೆ. ಈ ನಿಯೋಗದ ಭಾಗವಾಗಿದ್ದ ರಾಜ್ಯದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಅಮೆರಿಕದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಿರುದ್ಧ ತೀವ್ರ ವಾಕ್ ಪ್ರಹಾರ ನಡೆಸಿದ್ದಾರೆ. ಪಾಕಿಸ್ತಾನದ ಜಾಗತಿಕ “ಖ್ಯಾತಿಯ” ಬಗ್ಗೆ ಪ್ರಸ್ತಾಪಿಸಿ ಕಾಲೆಳೆದಿರುವ ಅವರು, ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ದಿಗ್ಗಜರನ್ನು ನೀಡುತ್ತಿದ್ದರೆ, ಪಾಕಿಸ್ತಾನವು ಭಯೋತ್ಪಾದಕರನ್ನು ಉತ್ಪಾದಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಭಾರತವು ಜಾಗತಿಕವಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಿರುವಾಗ, ಪಾಕಿಸ್ತಾನವು ಚೀನಾದಿಂದ ಕಳಪೆ ಗುಣಮಟ್ಟದ ಆಯುಧಗಳನ್ನು ಆಮದು ಮಾಡಿಕೊಂಡು, ಯುದ್ಧಭೂಮಿಯಲ್ಲಿ ವಿಫಲವಾಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ. “ಪಾಕಿಸ್ತಾನವು ತನ್ನನ್ನು ಶಾಂತಿಪ್ರಿಯ ರಾಷ್ಟ್ರವೆಂದು ಚಿತ್ರಿಸಲು ಪ್ರಯತ್ನಿಸುವುದು, ರಾಕ್ಷಸನೇ ಧರ್ಮಗ್ರಂಥಗಳನ್ನು ಉಲ್ಲೇಖಿಸಿದಂತಿದೆ,” ಎಂದು ತೇಜಸ್ವಿ ವ್ಯಂಗ್ಯವಾಡಿದ್ದಾರೆ. ಭಾರತವು ತನ್ನ ಏಕತೆ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಒಂದೇ ಧ್ವನಿಯಲ್ಲಿ ಮಾತನಾಡುತ್ತದೆ ಎಂದು ಒತ್ತಿಹೇಳಿದ ಅವರು, ಭಾರತವು ಆರ್ಥಿಕ ಪ್ರಗತಿಯ ಜೊತೆಗೆ ಜಾಗತಿಕ ಬೆಂಬಲವನ್ನೂ ಗಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಭಾರತದ ನಿಯೋಗಗಳ ವಿದೇಶ ಭೇಟಿಗೆ ಪ್ರತಿಯಾಗಿ ಬಿಲಾವಲ್ ಭುಟ್ಟೋ ನೇತೃತ್ವದ ಪಾಕ್ ನಿಯೋಗವೂ ವಿವಿಧ ದೇಶಗಳಿಗೆ ಭೇಟಿ ಆರಂಭಿಸಿರುವಂತೆಯೇ ತೇಜಸ್ವಿ ಸೂರ್ಯ ಅವರ ಈ ಹೇಳಿಕೆ ಮಹತ್ವ ಪಡೆದಿದೆ.