ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವೇನಾದರೂ(India-Pak War) ಸಂಭವಿಸಿದರೆ ಗಡಿಗೆ ಹೋಗಿ ದೇಶಕ್ಕಾಗಿ ಹೋರಾಡಲು ಸಿದ್ಧ ಎಂದು ಹೇಳುವ ಮೂಲಕ ದೇಶಭಕ್ತಿಯನ್ನು ಮೆರೆದವರನ್ನು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಜನಪ್ರತಿನಿಧಿ ಎನಿಸಿಕೊಂಡವರು ಯುದ್ಧವೇನಾದರೂ ನಡೆದರೆ ನಾನಂತೂ ಮೊದಲು ದೇಶದಿಂದ ಕಾಲ್ಕಿತ್ತು ಲಂಡನ್ಗೆ ಹೋಗಿ ನೆಲೆಸುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ಇಂಥ ಹೇಳಿಕೆ ನೀಡಿರುವವರು ಯಾರು ಗೊತ್ತಾ? ಪಾಕಿಸ್ತಾನದ ಸಂಸದ ಶೇರ್ ಅಫ್ಜಲ್ ಖಾನ್ ಮರ್ವಾತ್. ಭಾರತದೊಂದಿಗೆ ಯುದ್ಧ ಆರಂಭವಾದರೆ ನೀವೂ ಗನ್ ಹಿಡಿದುಕೊಂಡು ಗಡಿಗೆ ತೆರಳಲು ಸಿದ್ಧರಿದ್ದೀರಾ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾಗಿರುವ “ಶೇರ್” ಅಫ್ಜಲ್ ಖಾನ್, “ಯುದ್ಧ ಆರಂಭವಾದರೆ ನಾನು ಇಂಗ್ಲೆಂಡ್ಗೆ ಪರಾರಿಯಾಗುತ್ತೇನೆ” ಎಂದಿದ್ದಾರೆ.

ಇದೇ ವೇಳೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದು ಯೋಚಿಸುತ್ತೀರಾ ಎಂದು ಪ್ರಶ್ನಿಸಿದಾಗ, “ನಾನು ಹಾಗೆ ಹೇಳಿದ ಮಾತ್ರಕ್ಕೆ ಮೋದಿ ಹಿಂದೆ ಸರಿಯುತ್ತಾರಾ? ಅವರೇನು ನನ್ನ ಚಿಕ್ಕಮ್ಮನ ಮಗನಾ?” ಎಂದು ಮರ್ವಾತ್ ವ್ಯಂಗ್ಯವಾಗಿ ಮರು ಪ್ರಶ್ನೆ ಹಾಕಿದ್ದಾರೆ.
ಇವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಪಾಕಿಸ್ತಾನದ ರಾಜಕಾರಣಿಗಳು ಸಹ ತಮ್ಮ ಸೈನ್ಯವನ್ನು ನಂಬುವುದಿಲ್ಲ” ಎಂದು ಅನೇಕರು ವ್ಯಂಗ್ಯವಾಡಿದ್ದಾರೆ.
ಮರ್ವಾತ್ ಈ ಹಿಂದೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸದಸ್ಯರಾಗಿದ್ದರು. ಆದಾಗ್ಯೂ, ಅವರು ಸ್ವಪಕ್ಷ ಮತ್ತು ಅದರ ನಾಯಕತ್ವದ ವಿರುದ್ಧ ನಿರಂತರವಾಗಿ ಟೀಕಿಸುತ್ತಿದ್ದ ಕಾರಣ ಇಮ್ರಾನ್ ಖಾನ್ ಅವರು ಮರ್ವಾತ್ರನ್ನು ತಮ್ಮ ಪಕ್ಷದ ಪ್ರಮುಖ ಹುದ್ದೆಗಳಿಂದ ವಜಾ ಮಾಡಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳದರ್ಜೆಗೆ ಇಳಿಸುವ, ಪ್ರಮುಖ ಗಡಿ ಮಾರ್ಗಗಳನ್ನು ಮುಚ್ಚುವ, ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಸರಕುಗಳ ರಫ್ತು ನಿರ್ಬಂಧಿಸುವ, ವೀಸಾಗಳನ್ನು ರದ್ದು ಮಾಡುವ ಸೇರಿದಂತೆ ಪಾಕಿಸ್ತಾನದ ವಿರುದ್ಧ ವ್ಯಾಪಕ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಪ್ರತಿಕ್ರಮಗಳನ್ನು ಕೈಗೊಂಡಿದೆ. ಜೊತೆಗೆ, ಗಡಿಯಲ್ಲಿ ಉದ್ವಿಗ್ನತೆಯೂ ಹೆಚ್ಚುತ್ತಿದ್ದು, ಯುದ್ಧದ ಕಾರ್ಮೋಡವೂ ಆವರಿಸಿದೆ. ಇದರ ನಡುವೆಯೇ ಪಾಕ್ ಸಂಸದ ನೀಡಿರುವ ಈ ಹೇಳಿಕೆ ಜಾಲತಾಣಗಳಲ್ಲಿ ಭಾರೀ ಮೀಮ್ ಗಳನ್ನು ಹುಟ್ಟುಹಾಕಿದೆ.