ಬೆಂಗಳೂರು: ಅಣ್ಣನ ಜೊತೆ ಹೊರಟಿದ್ದ ಸಹೋದರಿ ಮೇಲೆ ಅತ್ಯಾಚಾರ ನಡೆಸಿರುವ ಭಯಾನಕ ಘಟನೆಯೊಂದು ವರದಿಯಾಗಿದೆ.
ಇಲ್ಲಿನ ಕೆಆರ್ಪುರಂ ರೈಲ್ವೇ ನಿಲ್ದಾಣದಲ್ಲಿ (KR Puram Railway Station) ಅಣ್ಣನ ಜೊತೆ ಹೊರಟಿದ್ದ ತಂಗಿಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿರುವ ಪೈಶಾಚಿಕ ಕೃತ್ಯ ನಡೆದಿದೆ. ಸಂತ್ರಸ್ತೆಯನ್ನು ಬಿಹಾರ (Bihar) ಮೂಲದವರು ಎನ್ನಲಾಗಿದೆ.
ಸಂತ್ರಸ್ತೆ ತನ್ನ ಅಕ್ಕ-ಬಾವನ ಜೊತೆಗೆ ಕೆಲಸಕ್ಕೆಂದು ಕೇರಳಕ್ಕೆ ಹೋಗಿದ್ದರು. ಕೆಲಸ ಮಾಡಲು ಇಷ್ಟವಿಲ್ಲದೇ ಬುಧವಾರ ಎರ್ನಾಕುಲಂನಿಂದ (Ernakulam) ಬೆಂಗಳೂರಿಗೆ (Bengaluru) ಬಂದು ಊರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ಹೇಳಿದ್ದು, ಆಗ ಅವರು ಕೆಆರ್ಪುರ ರೈಲು ನಿಲ್ದಾಣದಲ್ಲಿ ಇಳಿಯುವಂತೆ ಸೂಚಿಸಿದ್ದರು. ಅದರಂತೆ ಸಂತ್ರಸ್ತೆ ಬುಧವಾರ ತಡರಾತ್ರಿ 1:13ಕ್ಕೆ ಕೆಆರ್ಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ.

ರೈಲು ನಿಲ್ದಾಣಕ್ಕೆ ಬಂದಿದ್ದ ಅಣ್ಣನೊಂದಿಗೆ ಊಟ ಮಾಡಲು ಮಹದೇವಪುರ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತ ಯುವಕರು ಬಂದಿದ್ದು, ಓರ್ವ ಆಸಾಮಿ ಸಂತ್ರಸ್ತೆಯ ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನೋರ್ವ ಸಂತ್ರಸ್ತೆಯ ಕೈಗಳನ್ನು ಬಿಗಿಯಾಗಿ ಹಿಡಿದು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಯುವತಿಯ ಕಿರುಚಾಟ ಕೇಳಿ ಜನರು ಸ್ಥಳಕ್ಕೆ ಬಂದಿದ್ದು, ಬೀದಿ ಕಾಮುಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಶಿಫ್ ಹಾಗೂ ಮತ್ತೋರ್ವ ಕಾಮುಕನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.



















