ಶಿವಮೊಗ್ಗ: ಜಿಲ್ಲೆಯಲ್ಲಿ ಏಪ್ರಿಲ್ 19 ಮತ್ತು 20 ರಂದು ಕಂಬಳ ಆಯೋಜಿಸಲಾಗಿದೆ. ಹೀಗಾಗಿ ಕಂಬಳದ ಟ್ರ್ಯಾಕ್ಗೆ ಫೆ.10ರಂದು ಮಧ್ಯಾಹ್ನ 3 ಗಂಟೆಗೆ ಭೂಮಿ ಪೂಜೆ ನಡೆಸಲಾಗುತ್ತದೆ ಎಂದು ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳವು ಶಿವಮೊಗ್ಗ – ಭದ್ರಾವತಿ ರಸ್ತೆಯ ಮಾಚೇನಹಳ್ಳಿಯ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಹಿಂಭಾಗ 16 ಎಕರೆ ಜಾಗದಲ್ಲಿ ನಡೆಯಲಿದೆ. ಇದು ಕೇವಲ ಕೋಣ ಓಡಿಸುವ ಸ್ಪರ್ಧೆಯಲ್ಲ ಎಂದಿದ್ದಾರೆ.
ಇದರಲ್ಲಿ ತುಳುನಾಡಿನ ಇತಿಹಾಸ ಮತ್ತು ಸಂಪ್ರದಾಯ ಇದೆ. ಕೃಷಿ ಚಟುವಟಿಕೆ ಮುಗಿದ ನಂತರ ಈ ಸ್ಪರ್ಧೆಗಳು ನಡೆಯುತ್ತವೆ. ಪ್ರತಿ ಬಾರಿ 25 ಕಂಬಳ ನಡೆಯುತ್ತವೆ. ಈ ಬಾರಿಯ ಕೊನೆಯ ಕಂಬಳ ಶಿವಮೊಗ್ಗದಲ್ಲಿ ನಡೆಯಲಿದೆ. ಕಂಬಳ ನಡೆಸಲು ಹಲವು ನಿಯಮಗಳಿವೆ. ಆ ನಿಯಮದಂತೆಯೇ ಸ್ಪರ್ಧೆ ಆಯೋಜಿಸಲಾಗುತ್ತದೆ. ಶಿವಮೊಗ್ಗದಲ್ಲಿ ಇದೇ ಮೊದಲು ಕಂಬಳ ಸ್ಪರ್ಧೆ ನಡೆಯುತ್ತಿದ್ದು ಹಲವಾರು ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ನಟ, ಸಂಗೀತ ನಿರ್ದೇಶಕ ಗುರುಕಿರಣ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ.ಮೋಹನ್ ಆಳ್ವ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಸುಮಾರು 100 ಜೋಡಿ ಚಾಂಪಿಯನ್ ಕೋಣಗಳು ಭಾಗವಹಿಸಲಿವೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕಂಬಳ ಉತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಂಬಳದ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ. ಈಗಾಗಲೆ ಸಂಸದ ರಾಘವೇಂದ್ರ, ಸಚಿವ ಮಧು ಬಂಗಾರಪ್ಪ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಏ.19 ಮತ್ತು 20 ರಂದು ಸ್ಪರ್ಧೆಗಳು ನಡೆಯಲಿದೆ. ಟ್ರ್ಯಾಕ್ ಸಿದ್ಧತೆಗೆ ಒಂದು ತಿಂಗಳು ಹಿಡಿಯಲಿದೆ. ತುಳುನಾಡು, ಮಲೆನಾಡು ಒಂದಾಗಿ ಉತ್ಸವ ಹಮ್ಮಿಕೊಂಡಿವೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇ.ವಿಶ್ವಾಸ್, ಸಂದೀಪ್ ಶೆಟ್ಟಿ, ಕಿರಣ್ ಕುಮಾರ್ ಮಂಜಿಲಾ, ಶಶಿಧರ್ ಶೆಟ್ಟಿ, ಜಾಧವ್, ಚಿದಾನಂದ್, ಶಿವಾಜಿ, ಕುಬೇರಪ್ಪ, ಹರಿಪ್ರಸಾದ್ ಶೆಟ್ಟಿ ಸೇರಿದಂತೆ ಹಲವರು ಇದ್ದರು