ಪ್ರಯಾಗ್ರಾಜ್: ಪರಸ್ಪರ ಒಪ್ಪಿಗೆಯಿಂದ ದೀರ್ಘಕಾಲದವರೆಗೆ ದೈಹಿಕ ಸಂಬಂಧ ಹೊಂದಿದ್ದು, ಆ ಬಳಿಕ ಮದುವೆಯ ಭರವಸೆಯನ್ನು ಈಡೇರಿಸದ ಕಾರಣಕ್ಕೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಯಸ್ಕರಿಬ್ಬರ ನಡುವಿನ ಇಂತಹ ಸಹಮತದ ಸಂಬಂಧ ಮುರಿದುಬಿದ್ದಾಗ ಅದನ್ನು ಕಾನೂನಿನ ದುರುಪಯೋಗಕ್ಕೆ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧದ ಸಂಪೂರ್ಣ ಕ್ರಿಮಿನಲ್ ವಿಚಾರಣೆಯನ್ನು ನ್ಯಾಯಾಲಯವು ರದ್ದುಗೊಳಿಸಿದೆ.
ಏನಿದು ಪ್ರಕರಣ?
ಪ್ರಯಾಗ್ರಾಜ್ನ ಕರ್ನಲ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ರಲ್ಲಿ ಸಂಜಯ್ ಸರೋಜ್ ಅಲಿಯಾಸ್ ಸಂಜಯ್ ಕುಮಾರ್ ಎಂಬವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರತಾಪಗಢ ಮೂಲದ ಯುವತಿಯೊಬ್ಬಳು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ 2014ರಲ್ಲಿ ಪ್ರಯಾಗ್ರಾಜ್ಗೆ ಬಂದಾಗ, ಆಕೆಗೆ ದೂರದ ಸಂಬಂಧಿಯಾದ ಸಂಜಯ್ ವಸತಿ ಮತ್ತು ವಿದ್ಯಾಭ್ಯಾಸಕ್ಕೆ ನೆರವಾಗಿದ್ದ. ಈ ಸಂದರ್ಭದಲ್ಲಿ ಇಬ್ಬರ ನಡುವೆ ನಿಕಟತೆ ಬೆಳೆದು ದೈಹಿಕ ಸಂಬಂಧ ಏರ್ಪಟ್ಟಿತ್ತು. ಆದರೆ, ಮದುವೆಯ ಸುಳ್ಳು ಭರವಸೆ ನೀಡಿ ತನ್ನೊಂದಿಗೆ ಸಂಬಂಧ ಹೊಂದಿದ್ದು, ನಂತರ ಮದುವೆಯಾಗಲು ನಿರಾಕರಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದರು. 2020 ರಲ್ಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.
ಒತ್ತಡ ಹೇರಲು ಮೊಕದ್ದಮೆ!
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ ಅವರಿದ್ದ ಏಕಸದಸ್ಯ ಪೀಠವು, ಯುವತಿಯ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಿತು. ಎಫ್ಐಆರ್ ದಾಖಲಾದ ನಂತರ ಇಬ್ಬರೂ ವಿವಾಹವಾಗಿದ್ದರು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು. ಇದರಿಂದಾಗಿ, ಯುವತಿಯು ಕೇವಲ ಮದುವೆಯಾಗುವಂತೆ ತೀವ್ರ ಒತ್ತಡ ಹೇರುವ ಉದ್ದೇಶದಿಂದಲೇ ಈ ಪ್ರಕರಣ ದಾಖಲಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಮಿನಲ್ ಪ್ರಕ್ರಿಯೆಯನ್ನು ಮುಂದುವರಿಸುವುದು ನ್ಯಾಯಾಂಗ ವ್ಯವಸ್ಥೆಯ ದುರುಪಯೋಗವಾಗುತ್ತದೆ ಮತ್ತು ಇದು ಅತ್ಯಂತ ಅಪರೂಪದ ಪ್ರಕರಣಗಳ ಸಾಲಿಗೆ ಸೇರುತ್ತದೆ ಎಂದು ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪುಗಳ ಉಲ್ಲೇಖ
ತನ್ನ 34 ಪುಟಗಳ ಸುದೀರ್ಘ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್ನ ಪ್ರಮೋದ್ ಸೂರ್ಯಭನ್ ಪವಾರ್ ಮತ್ತು ಭಜನ್ ಲಾಲ್ ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿದೆ. ಆರಂಭದಿಂದಲೇ ವಂಚಿಸುವ ಉದ್ದೇಶದಿಂದ ಸುಳ್ಳು ಭರವಸೆ ನೀಡಿ ಸಹಮತ ಪಡೆದಿದ್ದರೆ ಮಾತ್ರ ಅದನ್ನು ಅತ್ಯಾಚಾರ ಎಂದು ಪರಿಗಣಿಸಬಹುದು. ಆದರೆ, ಇಲ್ಲಿ 2014 ರಿಂದ 2019 ರವರೆಗೆ ಅಂದರೆ ಸುಮಾರು ಐದು ವರ್ಷಗಳ ಕಾಲ ಇಬ್ಬರ ನಡುವೆ ದೀರ್ಘಾವಧಿಯ ಸಂಬಂಧವಿತ್ತು. ಪ್ರತಿಯೊಂದು ಬಾರಿಯೂ ಕೇವಲ ಮದುವೆಯ ಭರವಸೆಯ ಮೇಲೆಯೇ ದೈಹಿಕ ಸಂಬಂಧಕ್ಕೆ ಒಪ್ಪಿಗೆ ನೀಡಲಾಗಿತ್ತು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಪರಸ್ಪರ ಒಪ್ಪಿಗೆಯಿಂದ ಆರಂಭವಾಗಿ, ನಂತರ ಬಿರುಕು ಬಿಟ್ಟ ಸಂಬಂಧವೇ ಹೊರತು ವಂಚನೆಯಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಕೆಳ ನ್ಯಾಯಾಲಯದಲ್ಲಿದ್ದ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಅರ್ಜಿದಾರನಿಗೆ ದೊಡ್ಡ ರಿಲೀಫ್ ನೀಡಿದೆ.


















