ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಮೈದಾನದ ಮೇಲಿನ ಆಕ್ರಮಣಕಾರಿ ವರ್ತನೆಯ ಬಗ್ಗೆ ಐಸಿಸಿ ಪ್ಯಾನಲ್ನ ಮಾಜಿ ಅಂಪೈರ್ ಅನಿಲ್ ಚೌಧರಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವಿರಾಟ್ ಅವರ ತೀವ್ರತೆ ಮತ್ತು ಆಟದ ಮೇಲಿನ ಉತ್ಸಾಹದ ಬಗ್ಗೆ ಚರ್ಚೆಗಳು ಹೊಸದೇನಲ್ಲ, ಆದರೆ ಚೌಧರಿ ಅವರ ಪ್ರಕಾರ, ಇದು ಆಟಗಾರನಿಗೆ ಅಗತ್ಯವಾದ ಗುಣವಾಗಿದೆ.
ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್, ದೇಶೀಯ ಟೂರ್ನಿಗಳು ಮತ್ತು ಐಪಿಎಲ್ ಸೇರಿದಂತೆ ಎಲ್ಲಾ ಸ್ವರೂಪಗಳಲ್ಲೂ ಮೈದಾನದಲ್ಲಿ ಅಗಾಧ ತೀವ್ರತೆಯನ್ನು ಪ್ರದರ್ಶಿಸುತ್ತಿದ್ದಾರೆ. ಜಿಯೋ-ಹಾಟ್ಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನಿಲ್ ಚೌಧರಿ, “ನಾನು ವಿರಾಟ್ ಅವರನ್ನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ಅವರ ಪಂದ್ಯಗಳಿಗೆ ನಾನು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಹಾಗಾಗಿ ಅವರನ್ನು ಬಹಳ ಹಿಂದಿನಿಂದಲೂ ಬಲ್ಲೆ. ಅವರಲ್ಲಿ ಯಾವುದೇ ರೀತಿಯ ದ್ವೇಷದ ಭಾವನೆಯಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಆಟದಲ್ಲಿ ಲವಲವಿಕೆ ಮತ್ತು ಉತ್ಸಾಹ
ಅನಿಲ್ ಚೌಧರಿ ಅವರ ಪ್ರಕಾರ, ವಿರಾಟ್ ಕೊಹ್ಲಿಯ ಕೋಪವು ದುರುದ್ದೇಶಪೂರಿತವಲ್ಲ. “ಕೆಲವೊಮ್ಮೆ ಅವರು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ, ನಿಮ್ಮ ನಿರ್ಧಾರ ಸರಿಯಾಗಿದ್ದರೆ ಅವರು ‘ಥಂಬ್ಸ್ ಅಪ್’ ಕೂಡ ತೋರಿಸುತ್ತಾರೆ. ಓವರ್ಗಳ ನಡುವಿನ ಬಿಡುವಿನಲ್ಲಿ ಬಂದು ಆತ್ಮೀಯವಾಗಿ ಮಾತನಾಡಿಸುತ್ತಾರೆ. ಮೈದಾನದಲ್ಲಿ ಅವರು ಯಾವಾಗಲೂ ಲವಲವಿಕೆಯಿಂದ ಇರುತ್ತಾರೆ. ಇಂತಹ ಆಟಗಾರರು ಕ್ರಿಕೆಟ್ನಲ್ಲಿ ಇರಲೇಬೇಕು, ಇಲ್ಲದಿದ್ದರೆ ಆಟವು ಬೇಸರ ತರಿಸುತ್ತದೆ,” ಎಂದು ಅವರು ಹೇಳಿದ್ದಾರೆ.
ಉತ್ತರ ಭಾರತದ ಆಟಗಾರರ ನೈಸರ್ಗಿಕ ಗುಣ
ವಿರಾಟ್ ಕೊಹ್ಲಿ ಭವಿಷ್ಯದಲ್ಲಿ ಒಬ್ಬ ಆಕ್ರಮಣಕಾರಿ ಕ್ರಿಕೆಟಿಗನಾಗಿ ಬೆಳೆಯುತ್ತಾರೆ ಎಂಬುದು ತಮಗೆ ಮೊದಲೇ ತಿಳಿದಿತ್ತು ಎಂದು ಚೌಧರಿ ನೆನಪಿಸಿಕೊಂಡರು. ಉತ್ತರ ಭಾರತದ ಆಟಗಾರರಲ್ಲಿ ಈ ಆಕ್ರಮಣಕಾರಿ ಮನೋಭಾವವು ಸ್ವಾಭಾವಿಕವಾಗಿ ಇರುತ್ತದೆ ಎಂಬುದನ್ನು ಅವರು ಎತ್ತಿ ತೋರಿಸಿದರು. “ಉತ್ತರ ಭಾರತದಿಂದ ಬರುವ ಹೆಚ್ಚಿನ ಆಟಗಾರರು ಇಂತಹ ಹುಮ್ಮಸ್ಸಿನಿಂದಲೇ ಆಡುತ್ತಾರೆ. ನಾನು ಕೂಡ ಸ್ಥಳೀಯ ಕ್ರಿಕೆಟ್ ಆಡಿದ್ದೇನೆ. ಆ ಆಕ್ರಮಣಶೀಲತೆ ಇಲ್ಲದಿದ್ದರೆ, ಅವರ ಅತ್ಯುತ್ತಮ ಪ್ರದರ್ಶನ ಹೊರಬರುವುದಿಲ್ಲ. ಆಟಗಾರರ ಮೇಲೆ ಅತಿಯಾದ ನಿರ್ಬಂಧಗಳನ್ನು ಹೇರಿದರೆ, ಆಟದ ಅಸಲಿ ರುಚಿಯೇ ಹೊರಟುಹೋಗುತ್ತದೆ. ಆದರೆ, ಅದಕ್ಕೊಂದು ಮಿತಿ ಇರಬೇಕು ಮತ್ತು ಅದನ್ನು ಮೀರಬಾರದು,” ಎಂದು ಅವರು ಷರಾ ಬರೆದಿದ್ದಾರೆ.
ನಾನ್-ಸ್ಟ್ರೈಕರ್ ರನ್-ಔಟ್ ನಿಯಮದ ಬಗ್ಗೆ ಒಲವು
ವಿರಾಟ್ ಅವರ ಆಕ್ರಮಣಶೀಲತೆಯ ಜೊತೆಗೆ, ಕ್ರಿಕೆಟ್ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ‘ನಾನ್-ಸ್ಟ್ರೈಕರ್ ಎಂಡ್ನಲ್ಲಿನ ರನ್-ಔಟ್’ (ಮುಂಚಿತವಾಗಿ ಮಂಕಡಿಂಗ್ ಎಂದು ಕರೆಯಲ್ಪಡುತ್ತಿದ್ದ) ವಿವಾದದ ಬಗ್ಗೆಯೂ ಅನಿಲ್ ಚೌಧರಿ ಮಾತನಾಡಿದ್ದಾರೆ. “ಈ ರನ್-ಔಟ್ ನಿಯಮವು ಸಂಪೂರ್ಣ ನ್ಯಾಯಸಮ್ಮತವಾಗಿದೆ. ನಾನ್-ಸ್ಟ್ರೈಕರ್ ತುದಿಯಲ್ಲಿರುವ ಬ್ಯಾಟರ್ ಬೌಲರ್ ಚೆಂಡು ಎಸೆಯುವ ಮುನ್ನವೇ ಕ್ರೀಸ್ ಬಿಟ್ಟು ಮುಂದಕ್ಕೆ ಓಡಿದರೆ ಅದು ಅನ್ಯಾಯ. ಇದರಿಂದ ಬ್ಯಾಟರ್ಗೆ ಸುಲಭವಾಗಿ ಮತ್ತೊಂದು ತುದಿಯನ್ನು ತಲುಪಲು ಸಾಧ್ಯವಾಗುತ್ತದೆ. ಇದು ಬೌಲರ್ಗೆ ಮಾಡುವ ಅನ್ಯಾಯ,” ಎಂದು ಅವರು ಬೌಲರ್ಗಳನ್ನು ಬೆಂಬಲಿಸಿದ್ದಾರೆ. ಬಹುಶಃ ಇನ್ನು ಒಂದೆರಡು ವರ್ಷಗಳಲ್ಲಿ ಬ್ಯಾಟರ್ಗಳಿಗೆ ಎಚ್ಚರಿಕೆ ನೀಡುವ, ನಂತರ ರನ್-ಪೆನಾಲ್ಟಿ ವಿಧಿಸುವ ಹೊಸ ನಿಯಮಗಳು ಜಾರಿಗೆ ಬರಬಹುದು ಎಂಬ ಸುಳಿವನ್ನು ಸಹ ಅವರು ನೀಡಿದ್ದಾರೆ.
ಇದನ್ನೂ ಓದಿ : ಟೀಮ್ ಇಂಡಿಯಾದಲ್ಲಿ ಭಿನ್ನಮತದ ಹೊಗೆ : ಗಂಭೀರ್ ಕಾರ್ಯವೈಖರಿ ಬಗ್ಗೆ ಹಿರಿಯ ಆಟಗಾರರ ಅಸಮಾಧಾನ!


















