ಶ್ರೀಲಂಕಾ : ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದ ಬಳಿಕ ಶ್ರೀಲಂಕಾದ ವೇಗಿ ಅಸಿತ ಫರ್ನಾಂಡೊ ನೀಡಿದ ಸಂಭ್ರಮಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಜೈಸ್ವಾಲ್, ಮೈದಾನ ತೊರೆಯುವ ವೇಳೆ ಮತ್ತೆ ಫರ್ನಾಂಡೊ ಬಳಿ ತೆರಳಿ ಮಾತಿನ ಚಕಮಕಿಗೆ ಇಳಿದರು.
ಕೆಲ ಕ್ಷಣಗಳಲ್ಲೇ ಇಬ್ಬರೂ ಪರಸ್ಪರ ತಳ್ಳಾಟ ನಡೆಸುವ ಹಂತಕ್ಕೆ ತಲುಪಿದ್ದು, ಸಹ ಆಟಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 37 ರನ್ ಸೇರಿಸಿದರು. ರಾಹುಲ್ 18 ರನ್ ಗಳಿಸಿ ಲಹಿರು ಕುಮಾರ ಬೌಲಿಂಗ್ನಲ್ಲಿ ಔಟಾದರು.
ಆ ನಂತರವೂ ಆಕ್ರಮಣಕಾರಿ ಆಟ ಆಡಿದ್ದ ಜೈಸ್ವಾಲ್ ಉತ್ತಮ ಲಯದಲ್ಲಿದ್ದರು. ಅಸಿತ ಫರ್ನಾಂಡೊ ಅವರ ಒಂದೇ ಓವರ್ನಲ್ಲಿ ಸತತ ಮೂರು ಬೌಂಡರಿ ಬಾರಿಸಿ ಒತ್ತಡ ಹೇರಿದರು. ಅಂತಿಮವಾಗಿ 53 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 45 ರನ್ ಗಳಿಸಿದ್ದ ಜೈಸ್ವಾಲ್ ಅವರ ವಿಕೆಟ್ನ್ನು ಫರ್ನಾಂಡೊ ಪಡೆದರು.
ಕ್ಲೀನ್ಬೌಲ್ಡ್ ಮಾಡಿದ ಅಸಿತ ಫರ್ನಾಂಡೊ
17ನೇ ಓವರ್ನಲ್ಲಿ ಅಸಿತ ಫರ್ನಾಂಡೊ ವಿಕೆಟ್ ಸುತ್ತಿನಿಂದ ಬೌಲಿಂಗ್ ಮಾಡಿದರು. ಉತ್ತಮ ಲೆಂತ್ ಎಸೆತವನ್ನು ಜೈಸ್ವಾಲ್ ಆಫ್ಸೈಡ್ನಲ್ಲಿ ಹೊಡೆಯಲು ಮುಂದಾದರು. ಆದರೆ ಚೆಂಡು ಒಳಮುಖವಾಗಿ ಚಲಿಸಿ ಬ್ಯಾಟ್ನ ಒಳತುದಿಗೆ ತಗುಲಿ ನೇರವಾಗಿ ಆಫ್ಸ್ಟಂಪ್ಗೆ ಬಡಿದಿತು.
ಜೈಸ್ವಾಲ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದ ಫರ್ನಾಂಡೊ ಭಾವೋದ್ರಿಕ್ತವಾಗಿ ಸಂಭ್ರಮಿಸಿದರು. ಈ ಸಂಭ್ರಮಾಚರಣೆಯಿಂದ ಜೈಸ್ವಾಲ್ ಅಸಮಾಧಾನಗೊಂಡರು ಎನ್ನಲಾಗಿದೆ.
ಡ್ರೆಸ್ಸಿಂಗ್ ರೂಮ್ಗೆ ಹೋಗುತ್ತಿದ್ದ ಜೈಸ್ವಾಲ್ ಮತ್ತೆ ವಾಪಸ್
ವಿಕೆಟ್ ಕಳೆದುಕೊಂಡ ಬಳಿಕ ಜೈಸ್ವಾಲ್ ಪೆವಿಲಿಯನ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅವರು ಹಿಂದೆ ತಿರುಗಿ ಅಸಿತ ಫರ್ನಾಂಡೊ ಬಳಿ ತೆರಳಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ವಾಗ್ವಾದ ತೀವ್ರಗೊಂಡಂತೆ ಇಬ್ಬರೂ ಬಹಳ ಸಮೀಪಕ್ಕೆ ಬಂದು ಪರಸ್ಪರ ತಳ್ಳಾಟ ನಡೆಸಿದರು. ಪರಿಸ್ಥಿತಿ ಕೈಮೀರುವ ಮುನ್ನ ಶ್ರೀಲಂಕಾ ಆಟಗಾರ ಕಾಮಿಂದು ಮೆಂಡಿಸ್ ಸೇರಿದಂತೆ ಇತರ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು. ಘಟನೆಯ ಬಳಿಕ ಪಂದ್ಯ ಮುಂದುವರಿಯಿತು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
66 ರನ್ಗೆ ಇಬ್ಬರು ಆರಂಭಿಕರ ವಿಕೆಟ್
ಮೊದಲ ಟೆಸ್ಟ್ನಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ, ಎರಡನೇ ಟೆಸ್ಟ್ನಲ್ಲೂ ಸರಣಿ ಜಯದ ಗುರಿಯೊಂದಿಗೆ ಕಣಕ್ಕಿಳಿದಿದೆ. ಆದರೆ ಕೊಲಂಬೊದಲ್ಲಿ ಶ್ರೀಲಂಕಾ ವೇಗಿಗಳು ಆರಂಭದಲ್ಲೇ ಭಾರತಕ್ಕೆ ಎರಡು ಹೊಡೆತ ನೀಡಿದರು. 17 ಓವರ್ಗಳಲ್ಲಿ 66 ರನ್ ಗಳಿಸುವಷ್ಟರಲ್ಲಿ ಭಾರತ ರಾಹುಲ್ ಮತ್ತು ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು.
ಇದನ್ನೂ ಓದಿ : ಒಡಿಶಾ ಕರಾವಳಿಯಲ್ಲಿ ಪನಾಮಾ ಸರಕು ಹಡಗು ಮುಳುಗಡೆ : 22 ವಿದೇಶಿ ಸಿಬ್ಬಂದಿ ನಾಪತ್ತೆ, ಇಬ್ಬರ ರಕ್ಷಣೆ!



















