ನವದೆಹಲಿ : ಸ್ವಯಂಪ್ರೇರಿತವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವಯಸ್ಕರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅನೈತಿಕ ವ್ಯವಹಾರ ತಡೆ ಕಾಯ್ದೆ (ITPA) ಯನ್ನು ಕೂಲಂಕಶವಾಗಿ ಪರಿಶೀಲಿಸಿರುವ ಸರ್ವೋಚ್ಚ ನ್ಯಾಯಾಲಯವು, ಸ್ವಯಂ ಇಚ್ಛೆಯಿಂದ ಮಾಡುವ ಲೈಂಗಿಕ ವೃತ್ತಿಯು ಕಾನೂನುಬಾಹಿರವಲ್ಲ ಮತ್ತು ಈ ಕಾಯ್ದೆಯಡಿ ವಯಸ್ಕ ಲೈಂಗಿಕ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ಎಸಗಲು ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಬಲವಂತದ ಪುನರ್ವಸತಿ ಪ್ರಕ್ರಿಯೆಗಳು ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ದಾಳಿಯ ನೆಪದಲ್ಲಿ ಕಿರುಕುಳ ನೀಡುವಂತಿಲ್ಲ
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಲೈಂಗಿಕ ವೃತ್ತಿಗಾಗಿ ವೇಶ್ಯಾಗೃಹ (ಬ್ರೋಥೆಲ್) ನಡೆಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಆದರೆ, ಇಂತಹ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಪತ್ತೆಯಾಗುವ ಸ್ವಯಂಪ್ರೇರಿತ ಲೈಂಗಿಕ ಕಾರ್ಯಕರ್ತೆಯರನ್ನು ಸಂತ್ರಸ್ತರಂತೆ ಕಾಣಬೇಕೇ ಹೊರತು, ಅವರನ್ನು ಅಪರಾಧಿಗಳಂತೆ ನಡೆಸುವುದು ಅಥವಾ ವಶಕ್ಕೆ ಪಡೆಯುವುದು ತಪ್ಪು ಎಂದು ಪೀಠ ಹೇಳಿದೆ. ವಯಸ್ಕ ಮಹಿಳೆಯರು ತಮ್ಮ ಸ್ವಂತ ಇಚ್ಛೆಯಿಂದ ಈ ವೃತ್ತಿಯಲ್ಲಿದ್ದಾಗ, ಅಲ್ಲಿ ಬಲವಂತದ ‘ರಕ್ಷಣೆ’ ಅಥವಾ ‘ಉದ್ಧಾರ’ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೋರ್ಟ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ.
ಇಚ್ಛೆಗೆ ವಿರುದ್ಧವಾಗಿ ಪುನರ್ವಸತಿ ಕೇಂದ್ರಕ್ಕೆ ತಳ್ಳುವಂತಿಲ್ಲ
ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿಯು ಅವರ ಸ್ವಂತ ಇಚ್ಛೆಗೆ ಒಳಪಟ್ಟಿರಬೇಕೇ ವಿನಃ ಅದು ಬಲವಂತದ ಕ್ರಮವಾಗಿರಬಾರದು ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ. ಸಂವಿಧಾನದ ಪ್ರಕಾರ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಆರ್ಥಿಕ ನೆರವು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಸರ್ಕಾರದ ಈ ನೀತಿಯನ್ನು ನೆಪವಾಗಿಟ್ಟುಕೊಂಡು ಮಹಿಳೆಯರ ಇಷ್ಟಕ್ಕೆ ವಿರುದ್ಧವಾಗಿ ಅವರನ್ನು ಬಲವಂತವಾಗಿ ಪುನರ್ವಸತಿ ಕೇಂದ್ರಗಳಿಗೆ ಅಥವಾ ರಕ್ಷಣಾ ಗೃಹಗಳಿಗೆ ತಳ್ಳಲು ರಾಜ್ಯ ಸರ್ಕಾರಗಳಿಗೆ ಯಾವುದೇ ಹಕ್ಕಿಲ್ಲ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅವರ ಒಪ್ಪಿಗೆ ಹಾಗೂ ಸ್ವಾತಂತ್ರ್ಯವನ್ನು ಗೌರವಿಸುವುದು ಅತ್ಯಗತ್ಯ ಎಂದು ನ್ಯಾಯಾಲಯ ಹೇಳಿದೆ.
ಪಿತೃಪ್ರಧಾನ ಮನಸ್ಥಿತಿಗೆ ಬ್ರೇಕ್
ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆಗೆ (ಟ್ರಾಫಿಕಿಂಗ್) ಒಳಗಾದ ಸಂತ್ರಸ್ತರ ಮೂಲಭೂತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬಳಿಕ ನ್ಯಾಯಪೀಠ ಈ ತೀರ್ಪು ನೀಡಿದೆ. ಹಿರಿಯ ವಕೀಲೆ ಅಪರ್ಣಾ ಭಟ್ ಅವರು ಮಂಡಿಸಿದ ‘ಸಂತ್ರಸ್ತರ ರಕ್ಷಣಾ ಯೋಜನೆ’ಯನ್ನು ಪುರಸ್ಕರಿಸಿದ ನ್ಯಾಯಾಲಯವು, ಲೈಂಗಿಕ ವೃತ್ತಿಯಲ್ಲಿರುವವರನ್ನು ಕೇವಲ ರಕ್ಷಣೆಯ ವಸ್ತುವಿನಂತೆ ನೋಡಬಾರದು ಎಂದು ಹೇಳಿದೆ. ಸದ್ಯ ಚಾಲ್ತಿಯಲ್ಲಿರುವ 70 ವರ್ಷ ಹಳೆಯದಾದ ಐಟಿಪಿಎ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿರುವ ಪಿತೃಪ್ರಧಾನ ಧೋರಣೆಯನ್ನು ಕೋರ್ಟ್ ತಿರಸ್ಕರಿಸಿದೆ. ಈ ಹಳೇ ನಿಯಮವು ಬಲವಂತವಾಗಿ ಕಳ್ಳಸಾಗಣೆಯಾದವರನ್ನು ಮತ್ತು ಸ್ವಯಂಪ್ರೇರಿತವಾಗಿ ವೃತ್ತಿ ಆಯ್ದುಕೊಂಡವರನ್ನು ಒಂದೇ ತಕ್ಕಡಿಯಲ್ಲಿ ಅಳೆಯುತ್ತಿತ್ತು. ಈ ‘ಒಂದೇ ಸೂತ್ರ ಎಲ್ಲರಿಗೂ ಅನ್ವಯ’ ಎಂಬ ಧೋರಣೆಯನ್ನು ಕೈಬಿಟ್ಟು, ಪ್ರತಿಯೊಬ್ಬರ ವೈಯಕ್ತಿಕ ಸಂದರ್ಭ ಮತ್ತು ಒಪ್ಪಿಗೆಯನ್ನು ಆಧರಿಸಿ ಮ್ಯಾಜಿಸ್ಟ್ರೇಟರು ನಿರ್ಧಾರ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿದೆ.
ಇದನ್ನೂ ಓದಿ : ಹೆಲಿಕಾಪ್ಟರ್ ಪತನ : ಮದುವೆಯಾದ ಕೆಲವೇ ಗಂಟೆಗಳಲ್ಲೇ ಭಾರತ ಮೂಲದ ಪೈಲಟ್ ದುರಂತ ಅಂತ್ಯ!



















