ಬೆಂಗಳೂರು : ಎಲ್ನಿನೊ ಪರಿಣಾಮದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆಯ ಕೊರತೆ ಮುಂದುವರೆದಿದೆ. ಹೀಗಾಗಿ ರಾಜ್ಯ ಸರ್ಕಾರ ಸಚಿವಾಲಯದ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಉಳಿತಾಯಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ವಿಧಾನಸೌಧ, ವಿಕಾಸಸೌಧ ಸೇರಿದಂತೆ ಎಲ್ಲಾ ಸಚಿವಾಲಯದ ಕಚೇರಿಗಳಿಗೆ ಮಹತ್ವದ ನಿರ್ದೇಶನಗಳನ್ನು ಹೊರಡಿಸಿದ್ದಾರೆ.
ಹೊಸ ಆದೇಶದಂತೆ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಮತ್ತು ನೀರನ್ನು ಮಿತವಾಗಿ ಬಳಸುವುದು ಕಡ್ಡಾಯವಾಗಿದೆ. ಅನಗತ್ಯವಾಗಿ ವಿದ್ಯುತ್ ಮತ್ತು ನೀರು ಪೋಲಾಗದಂತೆ ಎಲ್ಲಾ ಸಿಬ್ಬಂದಿ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ. ಕಚೇರಿ ಸಮಯ ಮುಗಿದ ಬಳಿಕ ಲೈಟ್, ಫ್ಯಾನ್, ಎಸಿ, ಕಂಪ್ಯೂಟರ್ ಸೇರಿದಂತೆ ಎಲ್ಲ ವಿದ್ಯುತ್ ಉಪಕರಣಗಳ ಸ್ವಿಚ್ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು ಎಂದು ಆದೇಶಿಸಲಾಗಿದೆ.
ಸಂಜೆ 6 ಗಂಟೆಯ ಬಳಿಕ ವಿದ್ಯುತ್ ಬಳಕೆಯ ಮೇಲೆ ವಿಶೇಷ ನಿಗಾ ಇರಲಿದ್ದು, ಭದ್ರತಾ ಸಿಬ್ಬಂದಿಗೆ ಈ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿಗಳು ಅಥವಾ ಸಿಬ್ಬಂದಿ ಇಲ್ಲದ ವೇಳೆ ಯಾವುದೇ ವಿದ್ಯುತ್ ಉಪಕರಣಗಳು ಚಾಲ್ತಿಯಲ್ಲಿರಬಾರದು. ಕಚೇರಿಗೆ ಬೀಗ ಹಾಕುವ ಮೊದಲು ಎಲ್ಲ ಸ್ವಿಚ್ಗಳು ಆಫ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆಪ್ತ ಕಾರ್ಯದರ್ಶಿಗಳಿಗೂ ಈ ಸಂಬಂಧ ವಿಶೇಷ ಜವಾಬ್ದಾರಿ ನೀಡಲಾಗಿದೆ.
ಎಸಿ ತಾಪಮಾನವನ್ನು 24ರಿಂದ 26 ಡಿಗ್ರಿ ಸೆಲ್ಸಿಯಸ್ನಲ್ಲೇ ನಿರ್ವಹಿಸಬೇಕು. ಸಾಧ್ಯವಾದಷ್ಟು ನೈಸರ್ಗಿಕ ಬೆಳಕನ್ನು ಬಳಸಲು ಆದ್ಯತೆ ನೀಡಬೇಕು ಹಾಗೂ ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್ ಬಳಸುವಂತೆ ಸೂಚಿಸಲಾಗಿದೆ. ಸಚಿವಾಲಯದ ಕಟ್ಟಡಗಳಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸಲು ಸರ್ಕಾರ ನಿರ್ದೇಶನ ನೀಡಿದೆ.
ಇದರ ಜೊತೆಗೆ ಕಾರಿಡಾರ್ಗಳು ಮತ್ತು ಸಭಾಂಗಣಗಳಲ್ಲಿ ಮೋಶನ್ ಸೆನ್ಸರ್ ಅಳವಡಿಸಲು ಸೂಚಿಸಲಾಗಿದ್ದು, ನೀರಿನ ಟ್ಯಾಪ್ಗಳನ್ನು ಬಳಕೆ ಬಳಿಕ ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ತಿಳಿಸಲಾಗಿದೆ. ನೀರು ಉಳಿತಾಯಕ್ಕಾಗಿ ವಾಟರ್ ಏರೇಟರ್ ಅಳವಡಿಕೆಗೂ ಆದ್ಯತೆ ನೀಡಲಾಗಿದೆ. ಎಲ್ಲಿಯಾದರೂ ನೀರಿನ ಸೋರಿಕೆ ಕಂಡುಬಂದರೆ ಕೂಡಲೇ ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಎಲ್ನಿನೊ ಪರಿಣಾಮದಿಂದ ನೀರು ಮತ್ತು ವಿದ್ಯುತ್ ಬಳಕೆಯ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಉಳಿತಾಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿದ್ದ ಯುವಕನ ಭೀಕರ ಕೊಲೆ ; ರಿಸೆಪ್ಷನ್ ಮುಗಿದ ಮರುದಿನವೇ ಹತ್ಯೆಗೈದ ದುಷ್ಕರ್ಮಿಗಳು!



















