ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗುತ್ತಿದ್ದಂತೆಯೇ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಕಾರ್ಯಪ್ರವೃತ್ತವಾಗಿದೆ. ಫಲಿತಾಂಶ ಪ್ರಕಟವಾದ ತಕ್ಷಣವೇ ಗೆದ್ದ ಅಭ್ಯರ್ಥಿಗಳು ಪಣೈಯೂರ್ನಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಹಾಜರಾಗಬೇಕು ಎಂದು ಪಕ್ಷದ ಅಧ್ಯಕ್ಷ ವಿಜಯ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪಣೈಯೂರ್ ಟು ರೆಸಾರ್ಟ್: ವಿಜಯ್ ಪ್ಲಾನ್ ಬಿ!
ಮತ ಎಣಿಕೆಯ ಆರಂಭಿಕ ಹಂತದಲ್ಲೇ ಟಿವಿಕೆ (TVK) ಪಕ್ಷಕ್ಕೆ ಉತ್ತಮ ಸ್ಥಾನಗಳ ಮುನ್ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಎದುರಾಳಿ ಪಕ್ಷಗಳಿಂದ “ಕುದುರೆ ವ್ಯಾಪಾರ” ನಡೆಯುವ ಭೀತಿ ಎದುರಾಗಿದೆ. ಚುನಾವಣಾ ನಾಮಪತ್ರ ಪರಿಶೀಲನೆಯ ಸಮಯದಲ್ಲಿ ಎಡಪ್ಪಾಡಿಯ ಟಿವಿಕೆ ಅಭ್ಯರ್ಥಿಯೊಬ್ಬರು ನಾಪತ್ತೆಯಾಗಿದ್ದ ಘಟನೆಯಿಂದ ಎಚ್ಚೆತ್ತುಕೊಂಡಿರುವ ವಿಜಯ್, ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಗೆದ್ದ ಅಭ್ಯರ್ಥಿಗಳನ್ನು ಪಣೈಯೂರ್ ಕಚೇರಿಯಿಂದ ನೇರವಾಗಿ ಸುರಕ್ಷಿತ ರೆಸಾರ್ಟ್ವೊಂದಕ್ಕೆ ಸ್ಥಳಾಂತರಿಸಲು ಪಕ್ಷವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ – https://www.youtube.com/watch?v=Nb20pfCzHUA
ದ್ರಾವಿಡ ಕೋಟೆಗೆ ನಡುಕ
ತಮಿಳುನಾಡಿನ ಸಾಂಪ್ರದಾಯಿಕ ಡಿಎಂಕೆ ಮತ್ತು ಎಐಎಡಿಎಂಕೆ ರಾಜಕಾರಣಕ್ಕೆ ವಿಜಯ್ ಅವರ ಎಂಟ್ರಿ ದೊಡ್ಡ ಪೆಟ್ಟು ನೀಡಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಅದರಂತೆಯೇ ವಿಜಯ್ ಪಕ್ಷವು ಮತ ಎಣಿಕೆಯ ದಿನವಾಂದ ಇಂದು ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಬಂದಿದೆ. 100 ಸ್ಥಾನಗಳ ಗಡಿಯನ್ನೂ ದಾಟಿದೆ. ‘ಟುಡೇಸ್ ಚಾಣಕ್ಯ’ ಸಮೀಕ್ಷೆಯು ಟಿವಿಕೆ ಸುಮಾರು 63 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದರೆ, ‘ಆಕ್ಸಿಸ್ ಮೈ ಇಂಡಿಯಾ’ ಸಮೀಕ್ಷೆಯು ವಿಜಯ್ ಪಕ್ಷಕ್ಕೆ 98 ರಿಂದ 120 ಸ್ಥಾನಗಳನ್ನು ನೀಡಿತ್ತು. ಈಗಿನ ಟ್ರೆಂಡ್ ನೋಡಿದರೆ ತಮಿಳುನಾಡಿನಲ್ಲಿ ವಿಜಯ್ ‘ಕಿಂಗ್ ಮೇಕರ್’ ಅಲ್ಲ, ಸ್ವತಃ ‘ಕಿಂಗ್’ ಆಗಿ ಹೊರಹೊಮ್ಮುವುದು ಖಚಿತ.
ಯುವಶಕ್ತಿಯ ಬೆಂಬಲವೇ ವಿಜಯ್ ಬಲ
ಮೊದಲ ಬಾರಿಗೆ ಮತದಾನ ಮಾಡಿದ ಯುವಕರು, ನಿರುದ್ಯೋಗಿಗಳು ಮತ್ತು ಬದಲಾವಣೆಯನ್ನು ಬಯಸುವ ನಗರವಾಸಿಗಳು ವಿಜಯ್ ಕೈಹಿಡಿದಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಜನಪ್ರಿಯತೆಯಲ್ಲಿ ವಿಜಯ್ ತೀವ್ರ ಪೈಪೋಟಿ ನೀಡಿದ್ದಾರೆ. ಈ ಹೈ-ವೋಲ್ಟೇಜ್ ರಾಜಕೀಯ ಮೇಲಾಟದಲ್ಲಿ ಪ್ರತಿಯೊಂದು ಸ್ಥಾನವೂ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ಟಿವಿಕೆ ತನ್ನ “ಗೆಲ್ಲುವ ಕುದುರೆ”ಗಳನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದೆ.
ಇದನ್ನೂ ಓದಿ : ತಮಿಳುನಾಡಲ್ಲಿ ಇತಿಹಾಸ ರಚಿಸಿದ ದಳಪತಿ ವಿಜಯ್ – ಮೊದಲ ಪ್ರಯತ್ನದಲ್ಲೇ ಮೋಡಿ ಮಾಡಿದ್ದು ಹೇಗೆ?



















