ಬೆಂಗಳೂರು : ಎಂ.ಜಿ.ರಾಮಚಂದ್ರನ್, ಜಯಲಲಿತಾ ಸೇರಿ ತಮಿಳುನಾಡಿನಲ್ಲಿ ಸಿನಿಮಾ ಕ್ಷೇತ್ರದ ಹಲವು ನಾಯಕರು ರಾಜಕೀಯದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ಅಭಿಮಾನಿಗಳನ್ನೇ ಮತದಾರರನ್ನಾಗಿ ಬದಲಿಸಿಕೊಂಡು ಇಡೀ ರಾಜ್ಯವನ್ನು ಆಳಿದ್ದಾರೆ. ಇವರ ಸಾಲಿಗೆ ಈಗ ನಟ ದಳಪತಿ ವಿಜಯ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ತಮಿಳಗ ವೇಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಸ್ಥಾಪಿಸಿದ ಕೆಲವೇ ವರ್ಷಗಳಲ್ಲಿ ದಳಪತಿ ವಿಜಯ್ ಅವರು ತಮಿಳುನಾಡಿನಲ್ಲಿ ಮೋಡಿ ಮಾಡುವ ಮೂಲಕ ದಶಕಗಳವರೆಗೆ ಆಡಳಿತ ನಡೆಸಿದ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಆಡಳಿತಾರೂಢ ಡಿಎಂಕೆಯ ಪ್ರಾಬಲ್ಯ, ವಿಜಯ್ ಮೇಲೆ ನಡೆಸಿದ ವಾಗ್ದಾಳಿ, ಕೊನೆಯ ಸಿನಿಮಾ ಜನನಾಯಗನ್ ಬಿಡುಗಡೆಗೆ ಅಡೆತಡೆ, ರಾಜಕೀಯ ಕುತಂತ್ರದ ಮಧ್ಯೆಯೂ ಟಿವಿಕೆ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದು ಅಚ್ಚರಿ ಮೂಡಿಸಿದೆ. ಹಾಗೆ ನೋಡಿದರೆ, ತಮಿಳುನಾಡಿನಲ್ಲಿ ವಿಜಯ್ ಅವರಿಗೆ ಬೃಹತ್ ಸಂಖ್ಯೆಯ ಯುವ ಅಭಿಮಾನಿಗಳಿದ್ದಾರೆ. ಈ ಯುವಶಕ್ತಿಯೇ ಅವರ ರಾಜಕೀಯದ ದೊಡ್ಡ ಬಲವಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ – https://www.youtube.com/watch?v=Nb20pfCzHUA
ಕಳೆದ ಎರಡು ವರ್ಷಗಳಲ್ಲಿ ಅವರು ಶಾಲಾ-ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಪೋಷಕರು ಮತ್ತು ಯುವ ಸಮೂಹದ ಮನಗೆದ್ದಿದ್ದಾರೆ. ವಿಜಯ್ ಅವರ ಪಕ್ಷವು ಪ್ರಮುಖವಾಗಿ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ನಿಂತಿರುವುದು ಕೂಡ ಟಿವಿಕೆಗೆ ಪ್ಲಸ್ ಪಾಯಿಂಟ್ ಆಗಿದೆ. ಇದರೊಂದಿಗೆ ದ್ರಾವಿಡರ ನಾಡಿನಲ್ಲಿ ಟಿವಿಕೆ “ಗೆಲುವಿನ ವಿಷಲ್’’ ಹೊಡೆದಿದೆ.
ತಮಿಳು ಭಾಷೆಯ ರಕ್ಷಣೆ ಮತ್ತು ರಾಜ್ಯದ ಸ್ವಾಯತ್ತತೆಯ ಬಗ್ಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಬಡವರಿಗಾಗಿ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಅವರ ಪ್ರಮುಖ ಚುನಾವಣಾ ಭರವಸೆಗಳಾಗಿವೆ. ಜಯಲಲಿತಾ ಅವರ ನಂತರ ಸಮರ್ಥ ನಾಯಕನ ಹುಡುಕಾಟದಲ್ಲಿರುವ ಮತದಾರರಿಗೆ ವಿಜಯ್ ಒಂದು ಪರ್ಯಾಯವಾಗಿ ಕಾಣಿಸುತ್ತಿದ್ದಾರೆ. ಇದರಿಂದಾಗಿ ಜನ ಅವರ ಪರವಾಗಿ ನಿಂತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ನಟ ರಜನಿಕಾಂತ್ ಅವರು ಚುನಾವಣೆಗೆ ಸ್ಪರ್ಧಿಸುವ ಘೋಷಣೆ ಮಾಡಿ ಕೊನೆಗೆ ಹಿಂದೆ ಸರಿದರು. ನಟ ಕಮಲ್ ಹಾಸನ್ ಕೂಡ ಹೊಸ ಪಕ್ಷ ಸ್ಥಾಪಿಸಿದರೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಆಗಲಿಲ್ಲ. ಕೊನೆಗೆ ಅವರು ಡಿಎಂಕೆ ಸಖ್ಯಉ ಮಾಡಬೇಕಾಯಿತು. ಆದರೆ, ದಳಪತಿ ವಿಜಯ್ ಅವರು ಕೆಲವೇ ವರ್ಷಗಳಲ್ಲಿ ತಮಿಳುನಾಡಿನಲ್ಲಿ ಭಾರಿ ಮುನ್ನಡೆ ಸಾಧಿಸುವ ಮೂಲಕ ಡಿಎಂಕೆ ಹಾಗೂ ಎಐಎಡಿಎಂಕೆಗೆ ತಿರುಗೇಟು ನೀಡಿದ್ದಾರೆ. ಇದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನವನ್ನೂ ಮೂಡಿಸಿದೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ರಾಜಕೀಯ ಲೆಕ್ಕಾಚಾರ ಧೂಳಿಪಟ – ಶತಕ ಬಾರಿಸಿದ ‘ಜನನಾಯಗನ್’ ವಿಜಯ್ ಪಕ್ಷ


















