ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ನಲ್ಲಿ ತ್ವಿಷಾ ಶರ್ಮಾ ಅವರ ಶಂಕಾಸ್ಪದ ಸಾವು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿಯಾದ ನಿವೃತ್ತ ಜಿಲ್ಲಾ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ಕಾನೂನಿನ ಉರುಳು ಬಿಗಿಗೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಭೋಪಾಲ್ ಪೊಲೀಸರು ಮೃತ ಯುವತಿ ತ್ವಿಷಾ ಅವರ ಅತ್ತೆ ಗಿರಿಬಾಲಾ ಸಿಂಗ್ ಅವರಿಗೆ ಅಂತಿಮ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವೇಳೆ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಲು ವಿಫಲವಾದರೆ, ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಲು ಪೊಲೀಸರು ನಿರ್ಧರಿಸಿದ್ದಾರೆ.
ಆರೋಪಿಗೆ ಈಗಾಗಲೇ ಮೂರನೇ ನೋಟಿಸ್ ನೀಡಲಾಗಿದ್ದರೂ, ತಾವು ಮನೆಯಲ್ಲಿಲ್ಲ ಎಂಬ ಕಾರಣ ನೀಡಿ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಭೋಪಾಲ್ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ಹೇಳಿದ್ದಾರೆ. ಆದರೆ ಗಿರಿಬಾಲಾ ಸಿಂಗ್ ಈ ಆರೋಪವನ್ನು ನಿರಾಕರಿಸಿದ್ದು, ತಮಗೆ ಯಾವುದೇ ಹಳೇ ನೋಟಿಸ್ ತಲುಪಿಲ್ಲ, ಕೇವಲ ನಿನ್ನೆ ವಾಟ್ಸಾಪ್ ಮೂಲಕ ಮೊದಲ ನೋಟಿಸ್ ಬಂದಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಮೇ 15 ರಂದು ಗಿರಿಬಾಲಾ ಅವರಿಗೆ ಸಿಕ್ಕಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ ಕಸ್ಟಡಿಗೆ ಒಪ್ಪಿಸುವಂತೆ ಕೋರಿ ತ್ವಿಷಾ ಕುಟುಂಬದ ಪರ ವಕೀಲ ಅನುರಾಗ್ ಶ್ರೀವಾಸ್ತವ್ ಅವರು ಮಧ್ಯಪ್ರದೇಶ ಹೈಕೋರ್ಟ್ನ ಜಬಲ್ಪುರ ಪೀಠಕ್ಕೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.
ತ್ವಿಷಾ ಸಾವಿನ ಬೆನ್ನಲ್ಲೇ ನಡೆದ 46 ರಹಸ್ಯ ಕರೆಗಳು
ತ್ವಿಷಾ ಸಾವನ್ನಪ್ಪಿದ ತಕ್ಷಣವೇ ಗಿರಿಬಾಲಾ ಸಿಂಗ್ ಅವರು ಪ್ರಭಾವಿ ವ್ಯಕ್ತಿಗಳಿಗೆ ಸರಣಿ ಕರೆಗಳನ್ನು ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ಇದು ಭಾರೀ ಸಂದೇಹ ಹುಟ್ಟುಹಾಕಿದೆ. ಎಫ್ಐಆರ್ ದಾಖಲಾದ ಕಟಾರಾ ಹಿಲ್ಸ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಯೊಂದಿಗೆ ಆರೋಪಿ ಗಿರಿಬಾಲಾ ದೀರ್ಘಕಾಲ ಮಾತನಾಡಿದ್ದು ಏಕೆ ಎಂದು ಸಂತ್ರಸ್ತ ಕುಟುಂಬದ ವಕೀಲ ಅಂಕುರ್ ಶರ್ಮಾ ಪ್ರಶ್ನಿಸಿದ್ದಾರೆ. ಗಿರಿಬಾಲಾ ಸಿಂಗ್ ಅವರು ಈ ಎಲ್ಲಾ ಕರೆಗಳನ್ನು ಕೇವಲ “ಸಂತಾಪ ಸೂಚಕ ಕರೆಗಳು” ಎಂದು ಕರೆದಿದ್ದರೂ, ಅವರು ಸಂಪರ್ಕಿಸಿದವರ ಪಟ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ, ಲೋಕಾಯುಕ್ತ ಅಧಿಕಾರಿ, ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ ಅಧಿಕಾರಿ ಮತ್ತು ಇಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹೆಸರುಗಳಿರುವುದು ಪ್ರಕರಣಕ್ಕೆ ರಾಜಕೀಯ ಮತ್ತು ಆಡಳಿತಾತ್ಮಕ ತಿರುವು ನೀಡಿದೆ.
ಸಿಸಿಟಿವಿ ದೃಶ್ಯಾವಳಿ ನಾಶದ ಆತಂಕ
ಗಿರಿಬಾಲಾ ಸಿಂಗ್ ಅವರು ಸಿಸಿಟಿವಿ ನಿರ್ವಹಣೆ ಮತ್ತು ರಿಪೇರಿ ಮಾಡುವ ಸಿಬ್ಬಂದಿಗಳಾದ ರೋಹಿತ್ ವಿಶ್ವಕರ್ಮ ಮತ್ತು ವಿನೋದ್ ವಾನಿ ಅವರಿಗೆ ಕರೆ ಮಾಡಿರುವುದನ್ನು ತನಿಖಾ ತಂಡ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಪ್ರಮುಖ ಡಿಜಿಟಲ್ ಸಾಕ್ಷ್ಯವಾದ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಲು ಈ ಕರೆಗಳನ್ನು ಮಾಡಲಾಗಿರಬಹುದು ಎಂದು ತ್ವಿಷಾ ಕುಟುಂಬ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಾಟ್ಸ್ ಆ್ಯಪ್ ಚಾಟ್, ಕಾಲ್ ರೆಕಾರ್ಡ್ಸ್, ಟವರ್ ಲೊಕೇಶನ್ ಮತ್ತು ಕ್ಲೌಡ್ ಡೇಟಾಗಳನ್ನು ವಿಧಿವಿಜ್ಞಾನ ತನಿಖೆಗೆ ಒಳಪಡಿಸಬೇಕೆಂದು ಕುಟುಂಬ ಒತ್ತಾಯಿಸಿದೆ. ಆದರೆ, ಮನೆಯಲ್ಲಿ ಅಂದು ಏನಾಯಿತು ಎಂದು ತಿಳಿದುಕೊಳ್ಳಲು ನಾನು ಸಿಸಿಟಿವಿ ತಂಡಕ್ಕೆ ಕರೆ ಮಾಡಿದ್ದೆ ಎಂದು ಗಿರಿಬಾಲಾ ಹೇಳಿದ್ದಾರೆ.
ವೈರಲ್ ವಿಡಿಯೋದಿಂದ ಹೊರಬಂದ ಸತ್ಯ
ತ್ವಿಷಾ ಅವರ ಕೊನೆಯ ಕ್ಷಣಗಳ ಸಿಸಿಟಿವಿ ವಿಡಿಯೋವೊಂದು ಸಾರ್ವಜನಿಕವಾಗಿ ಲೀಕ್ ಆಗಿದ್ದು, ಅದರಲ್ಲಿ ಪತಿ ಸಮರ್ಥ್ ಸಿಂಗ್ ತನ್ನ ಪತ್ನಿಗೆ ಸಿಪಿಆರ್ ನೀಡಲು ಯತ್ನಿಸುತ್ತಿರುವುದು ಮತ್ತು ತಾಯಿ ಗಿರಿಬಾಲಾ ಸಿಂಗ್ ಕೊಠಡಿಯ ಒಳಗೆ ಮತ್ತು ಹೊರಗೆ ಓಡಾಡುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮನೆಗೆಲಸದವ ಹಾಗೂ ಮತ್ತೊಬ್ಬ ಸಂಬಂಧಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯಕ್ಕೆ ಸಿಸಿಟಿವಿ ಸಿಸ್ಟಮ್ ಅಥವಾ ಡಿವಿಆರ್ (DVR) ನಲ್ಲಿ ಯಾವುದೇ ತರಹದ ಸಾಕ್ಷ್ಯ ನಾಶವಾಗಿಲ್ಲ ಎಂದು ಭೋಪಾಲ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗದ ಹಿನ್ನೆಲೆ ಹೊಂದಿರುವ ಪ್ರಭಾವಿ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿರುವುದರಿಂದ ಇಡೀ ದೇಶದ ಕಣ್ಣು ಈ ಹೈಪ್ರೊಫೈಲ್ ಕೇಸ್ ಮೇಲೆ ನೆಟ್ಟಿದೆ.
ಇದನ್ನೂ ಓದಿ : ಧಮ್ ಇದ್ರೆ ಕಾನೂನು ಕೈಗೆತ್ತಿಕೊಳ್ಳಿ : ಭೋಜ್ಶಾಲಾದಲ್ಲಿ ನಮಾಜ್ಗೆ ಯತ್ನಿಸುವವರಿಗೆ SP ಖಡಕ್ ಎಚ್ಚರಿಕೆ!



















