ಭೋಪಾಲ್ : ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜ್ಶಾಲಾ ಸಂಕೀರ್ಣವನ್ನು ಹಿಂದೂ ದೇವಾಲಯ ಎಂದು ಹೈಕೋರ್ಟ್ ಘೋಷಿಸಿದ ಬೆನ್ನಲ್ಲೇ ಅಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೈಕೋರ್ಟ್ ತೀರ್ಪು ಹೊರಬಿದ್ದ ನಂತರದ ಮೊದಲ ಶುಕ್ರವಾರದ ಪ್ರಾರ್ಥನೆಯ (ನಮಾಜ್) ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಈ ನಡುವೆ ಧಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಚಿನ್ ಶರ್ಮಾ ಅವರು ಮುಸ್ಲಿಮರಿಗೆ ನೀಡಿರುವ ಖಡಕ್ ಎಚ್ಚರಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೀಪ್ ಮೇಲೇರಿ ನಿಂತು ಎಸ್ಪಿ ಸಿಂಹಗರ್ಜನೆ
ಕಳೆದ ಶುಕ್ರವಾರದವರೆಗೂ ಮುಸ್ಲಿಂ ಸಮುದಾಯದವರು ನಮಾಜ್ ಮಾಡಲು ಅವಕಾಶವಿದ್ದ ಭೋಜ್ಶಾಲಾ ಸಂಕೀರ್ಣದಲ್ಲಿ ಈಗ ಕೆಲವು ಗುಂಪುಗಳು ಬಲವಂತವಾಗಿ ಪ್ರಾರ್ಥನೆ ಸಲ್ಲಿಸಲು ಯತ್ನಿಸಬಹುದು ಎಂಬ ಆತಂಕದ ನಡುವೆ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದೆ. ಶಾಂತಿ ಕದಡಲು ಯತ್ನಿಸುವ ಸಮಾಜಘಾತುಕ ಶಕ್ತಿಗಳಿಗೆ ಎಸ್ಪಿ ಸಚಿನ್ ಶರ್ಮಾ ಅವರು ಪೊಲೀಸ್ ಜೀಪ್ ಮೇಲೇರಿ ನಿಂತು ನೇರವಾಗಿಯೇ ಸವಾಲು ಹಾಕಿದ್ದಾರೆ. “ಕಾನೂನಿಗೆ ಸವಾಲು ಹಾಕುವ ಧೈರ್ಯ ಅಥವಾ ಗತ್ತು ಇದೆ ಎಂದು ಯಾರಾದರೂ ನಂಬಿದ್ದರೆ, ಅವರು ನಾಳೆ (ಶುಕ್ರವಾರ) ಒಮ್ಮೆ ಪ್ರಯತ್ನಿಸಿ ನೋಡಲಿ. ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ತಾಕತ್ತಿದ್ದರೆ ಅವರು ಇಲ್ಲಿಗೆ ಬರಲಿ,” ಎಂದು ಸವಾಲುಭರಿತ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಬ್ರೇಕ್
ಯಾವುದೇ ಪರಿಸ್ಥಿತಿಯಲ್ಲೂ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಸ್ಪಷ್ಟಪಡಿಸಿರುವ ಪೊಲೀಸ್ ಅಧಿಕಾರಿ, ನ್ಯಾಯಾಲಯದ ಆದೇಶವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡದಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ತಮ್ಮ ಭಾಷಣದ ಕೊನೆಯಲ್ಲಿ ಅವರು “ಭಾರತ್ ಮಾತಾ ಕೀ ಜೈ” ಎಂದು ಘೋಷಣೆ ಕೂಗಿದ್ದು, ಅಲ್ಲಿ ನೆರೆದಿದ್ದ ಸಾರ್ವಜನಿಕರು ಮತ್ತು ಸಿಬ್ಬಂದಿ ಕೂಡ ಭಾರಿ ಜೋಶ್ನಿಂದ ಧ್ವನಿಗೂಡಿಸಿದ್ದಾರೆ. ಈ ವಿಡಿಯೋ ಈಗ ಇಂಟರ್ನೆಟ್ನಲ್ಲಿ ತೀವ್ರ ಸಂಚಲನ ಮೂಡಿಸಿದೆ.
ದಶಕಗಳ ವಿವಾದಕ್ಕೆ ಹೈಕೋರ್ಟ್ ತೆರೆ
ಭಾರತೀಯ ಪುರಾತತ್ವ ಇಲಾಖೆಯ (ASI) 2003ರ ಆದೇಶದ ಪ್ರಕಾರ, ಭೋಜ್ಶಾಲಾ ಸಂಕೀರ್ಣದಲ್ಲಿ ಹಿಂದೂಗಳಿಗೆ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಮರಿಗೆ ಶುಕ್ರವಾರ ನಮಾಜ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಹಿಂದೂ ಸಂಘಟನೆಗಳು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಸುದೀರ್ಘ ಕಾನೂನು ಹೋರಾಟದ ನಂತರ, ಮೇ 15ರಂದು ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠವು ಈ ಸಂಕೀರ್ಣವನ್ನು ವಾಗ್ದೇವಿ (ಸರಸ್ವತಿ) ದೇವಿಯ ಮಂದಿರ ಎಂದು ತೀರ್ಪು ನೀಡಿತು. ಜೊತೆಗೆ ಹಿಂದೂಗಳಿಗೆ ಪೂರ್ಣ ಪ್ರಮಾಣದ ಪೂಜೆಗೆ ಹಾದಿ ಸುಗಮಗೊಳಿಸಿತು. ಅಲ್ಲದೆ, ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಾಣಕ್ಕಾಗಿ ಪ್ರತ್ಯೇಕ ಭೂಮಿಯನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ಜಂಟಿ ಸಮಿತಿ
ಮಧ್ಯಪ್ರದೇಶ ಹೈಕೋರ್ಟ್ನ ಈ ಮಹತ್ವದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ ಪರವಾಗಿ ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ವಿವಾದಿತ ಜಾಗದ ಕುರಿತಾದ ಕಾನೂನು ಪ್ರಕ್ರಿಯೆಗಳು ಈಗ ದೇಶದ ಅತ್ಯುನ್ನತ ನ್ಯಾಯಾಲಯದ ಅಂಗಳ ತಲುಪಿದ್ದರೂ, ಸ್ಥಳೀಯವಾಗಿ ಯಾವುದೇ ರೀತಿಯ ಕೋಮು ಸಂಘರ್ಷ ಉಂಟಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಪಡೆ ತೀವ್ರ ಕಟ್ಟೆಚ್ಚರ ವಹಿಸಿದೆ.
ಇದನ್ನೂ ಓದಿ : ‘ಕಾಕ್ರೋಚ್ ಜನತಾ ಪಾರ್ಟಿ’ ಖಾತೆ ಬ್ಲಾಕ್ : ಕೇಂದ್ರದ ವಿರುದ್ಧ ಸಂಸದೆ ಮಹುವಾ ಮೊಯಿತ್ರಾ ಕಿಡಿ



















