ಚೆನ್ನೈ : ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ಹೊರಡಿಸಿದ್ದ ಸರ್ಕಾರಿ ಟೆಂಡರ್ನಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ಡಿಎಂಕೆ ಗಂಭೀರ ಆರೋಪ ಮಾಡಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಕೆಲವೇ ಗಂಟೆಗಳಲ್ಲಿ ಆ ಟೆಂಡರ್ ಅನ್ನು ರದ್ದುಗೊಳಿಸಿದೆ.
ತೂತುಕುಡಿ ಜಿಲ್ಲೆಯ ಹಳ್ಳಿಯೊಂದರಲ್ಲಿ 3,000 ಲೀ. ಸಾಮರ್ಥ್ಯದ ಮೇಲ್ಛಾವಣಿ ನೀರಿನ ಟ್ಯಾಂಕ್ ನಿರ್ಮಿಸಲು 16.83 ಲಕ್ಷ ರೂ. ಮೊತ್ತದ ಈ ಟೆಂಡರ್ ಪ್ರಕ್ರಿಯೆಯ ಅಸಹಜ ಕಾಲಮಿತಿ ಈಗ ತಮಿಳುನಾಡು ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ನಿಯಮಗಳ ಪ್ರಕಾರ ಮೇ 13ರಿಂದಲೇ ಗುತ್ತಿಗೆದಾರರಿಗೆ ಟೆಂಡರ್ ವಿವರಗಳು ಲಭ್ಯವಿರಬೇಕಿತ್ತು. ಆದರೆ, ಮೇ 18ರಂದು ಬೆಳಿಗ್ಗೆ 9 ಗಂಟೆಗೆ ಪ್ರಕಟಗೊಂಡ ಟೆಂಡರ್ ಅನ್ನು ಕೇವಲ ಆರೇ ಗಂಟೆಗಳಲ್ಲಿ, ಅಂದರೆ ಅಂದು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳಿಸಲಾಗಿತ್ತು. ಮರುದಿನವೇ ಗುತ್ತಿಗೆಯನ್ನು ಹಂಚಿಕೆ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಕಾರಣಗಳನ್ನು ನೀಡಿ ಟೆಂಡರ್ ರದ್ದುಗೊಳಿಸಲಾಗಿದ್ದು, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ.
ಡಿಎಂಕೆ ತೀವ್ರ ವಾಗ್ದಾಳಿ, ಭ್ರಷ್ಟಾಚಾರದ ಆರೋಪ
ಕಳೆದ ತಿಂಗಳಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷದ ಎದುರು ಸೋತು ಅಧಿಕಾರ ಕಳೆದುಕೊಂಡಿರುವ ಡಿಎಂಕೆ, ಈ ಅಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ನಿರ್ದಿಷ್ಟ ಕಂಪನಿಯೊಂದಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಈ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಡಿಎಂಕೆ ಆರೋಪಿಸಿದೆ. ಈ ಕುರಿತು ಮಾತನಾಡಿದ ಹಿರಿಯ ಡಿಎಂಕೆ ನಾಯಕ ಅಮುದರಸನ್, ಕೇವಲ ಆರೇ ಗಂಟೆಗಳ ಅವಧಿಯಲ್ಲಿ ಯಾವುದೇ ಕಂಪನಿಯು ಯೋಜನೆಯ ವಿಸ್ತೃತ ವರದಿಯನ್ನು (DPR) ಸಿದ್ಧಪಡಿಸಿ ಎಲ್ಲಾ ಅಧಿಕೃತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದು ಆಡಳಿತಾತ್ಮಕ ವೇಗವಲ್ಲ, ಬದಲಿಗೆ ಮುಂಚಿತವಾಗಿಯೇ ನಿರ್ಧರಿಸಲಾದ ಒಪ್ಪಂದದ ರಾಜಕೀಯ ಎಂದು ಅವರು ಕಿಡಿಕಾರಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಎನ್. ಆನಂದ್ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿರುವ ಅವರು, ಪ್ರಾಮಾಣಿಕತೆಯ ರಾಜಕೀಯ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ಈಗ ಇಂತಹ ಟೆಂಡರ್ ರಾಜಕಾರಣ ಮಾಡುತ್ತಿರುವುದೇಕೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಆರಂಭಿಕ ದಿನಗಳಲ್ಲೇ ಸರ್ಕಾರಕ್ಕೆ ಹಲವು ಸವಾಲು
ನಟ, ರಾಜಕಾರಣಿ ವಿಜಯ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಒಂದು ತಿಂಗಳ ಅವಧಿಯಲ್ಲಿ ಎದುರಿಸುತ್ತಿರುವ ಎರಡನೇ ಪ್ರಮುಖ ಹಿನ್ನಡೆ ಇದಾಗಿದೆ. ಇದಕ್ಕೂ ಮುನ್ನ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ವೈಯಕ್ತಿಕ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಸರ್ಕಾರದ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ (OSD) ನೇಮಕ ಮಾಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಟಿವಿಕೆ ಪಕ್ಷವು ಇದನ್ನು ಸಮರ್ಥಿಸಿಕೊಂಡು, ಅವರ ವೃತ್ತಿಗೂ ಮತ್ತು ಹುದ್ದೆಗೂ ಸಂಬಂಧವಿಲ್ಲ ಎಂದು ವಾದಿಸಿತ್ತಾದರೂ, ವಿರೋಧ ಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದು ಅಂತಿಮವಾಗಿ ಜ್ಯೋತಿಷಿಯ ನೇಮಕ ಆದೇಶ ವಾಪಸ್ ಪಡೆದಿತ್ತು.
ಇದನ್ನೂ ಓದಿ : ಉದ್ಯೋಗ ಕಳೆದುಕೊಂಡ್ರೆ 60 ದಿನಗಳಲ್ಲಿ ಅಮೆರಿಕ ತೊರೆಯುವ ಭೀತಿ : ಸಂಕಷ್ಟದಲ್ಲಿ ಭಾರತೀಯ ಟೆಕ್ಕಿಗಳು


















