ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಕಾಂಗ್ರೆಸ್ನ “ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್” ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟರ್ಕಿ ಮೂಲದ ಆಕ್ರಮಣಕಾರ ಮೊಹಮ್ಮದ್ ಘಜ್ನಿಗೆ ಹೋಲಿಕೆ ಮಾಡುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಎಂ.ರೇವಂತ್ ರೆಡ್ಡಿ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿರುವ ರೇವಂತ್ ರೆಡ್ಡಿ “ಘಜ್ನಿ ಮಹ್ಮೂದ್ ಭಾರತವನ್ನು ಲೂಟಿ ಮಾಡಲು ಮತ್ತು ಆಕ್ರಮಣಗೈಯ್ಯಲು ಮತ್ತೆ ಮತ್ತೆ ಪ್ರಯತ್ನಿಸಿದ್ದ ಎಂದು ನಾವು ಇತಿಹಾಸದಲ್ಲಿ ಓದಿದ್ದೇವೆ. ಅದೇ ರೀತಿ, ಇಂದು ಪ್ರಧಾನಮಂತ್ರಿ ಮೋದಿಯವರು ಕೂಡ ಪದೇ ಪದೇ ಭಾರತದ ಸಂವಿಧಾನವನ್ನು ಬದಲಿಸಲು ಮತ್ತು ಮೀಸಲಾತಿಯನ್ನು ರದ್ದು ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ,” ಎಂದು ಹೇಳಿದ್ದಾರೆ. ರೇವಂತ್ ರೆಡ್ಡಿಯವರ ಈ ಹೇಳಿಕೆಗೆ ಬಿಜೆಪಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು “ನಾಚಿಕೆಗೇಡಿನ ಹೇಳಿಕೆ” ಎಂದು ಕಿಡಿಕಾರಿದ್ದಾರೆ.

“ಖಂಡನೀಯ ಹೇಳಿಕೆ! ಭಾರತ ಮಾತ್ರವಲ್ಲದೇ ಜಗತ್ತೇ ಕೊಂಡಾಡುತ್ತಿರುವಂತಹ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ವಿದೇಶಿ ದರೋಡೆಕೋರ, ಆಕ್ರಮಣಕಾರ ಮೊಹಮ್ಮದ್ ಘಜ್ನಿಯೊಂದಿಗೆ ಹೋಲಿಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿಯವರು ತಮ್ಮ ದ್ವೇಷಪೂರಿತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ,” ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಅಸಮರ್ಥನೀಯ ಹೇಳಿಕೆ ನೀಡಿದ ರೆಡ್ಡಿಯವರು ದೇಶದ ಮತ್ತು ಪ್ರಧಾನಮಂತ್ರಿಗಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ತೆಲಂಗಾಣದ ಬಿಜೆಪಿ ಮಾಜಿ ಎಂಎಲ್ಸಿ ರಾಮಚಂದರ್ ರಾವ್ ಪ್ರತಿಕ್ರಿಯಿಸಿ, ವಾಸ್ತವದಲ್ಲಿ ಸಂವಿಧಾನಕ್ಕೆ ಧಕ್ಕೆ ತಂದಿದ್ದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ, ನಾಗರಿಕರ ಹಕ್ಕುಗಳನ್ನು, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ. ರೇವಂತ್ ರೆಡ್ಡಿ ಮತ್ತು ಅವರ ಸಂಗಡಿಗರು “ಆಲಿಬಾಬಾ ಮತ್ತು 40 ಕಳ್ಳರಿದ್ದಂತೆ”. ಲೂಟಿ ಮಾಡುವುದು ಕಾಂಗ್ರೆಸ್ನ ಹಾಲ್ ಮಾರ್ಕ್. ಅವರು ಕರ್ನಾಟಕ ಮತ್ತು ತೆಲಂಗಾಣದ ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದೂ ರಾವ್ ಹೇಳಿದ್ದಾರೆ.
ಈ ಎಲ್ಲ ಆಕ್ರೋಶಗಳ ನಡುವೆಯೇ ಟ್ವೀಟ್ ಮಾಡಿರುವ ರೇವಂತ್ ರೆಡ್ಡಿ, “ದೇಶವು ಈಗ ಎರಡು ಬಗೆಯ ಶಕ್ತಿಯನ್ನು ಹೊಂದಿದೆ- ಒಂದು ಸಂವಿಧಾನವನ್ನು ತಿರುಚುವ ಮತ್ತು ನಾಶಗೊಳಿಸುವ ಶಕ್ತಿ, ಮತ್ತೊಂದು ನಮ್ಮ ಸಂವಿಧಾನ, ನಮ್ಮ ದೇಶ, ನಮ್ಮ ಮೌಲ್ಯಗಳು ಹಾಗೂ ನಮ್ಮ ಜನರ ಭವಿಷ್ಯವನ್ನು ರಕ್ಷಿಸಲು ತಮ್ಮ ಜೀವವನ್ನೇ ಪಣಕ್ಕಿಡಲು ಸಿದ್ಧವಾಗಿರುವ ಶಕ್ತಿ,” ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ದೇಶವನ್ನು ಸ್ವಾತಂತ್ರ್ಯಗೊಳಿಸಲು ಕಾಂಗ್ರೆಸ್ ಕುಟುಂಬ ಹೇಗೆ ಹೋರಾಡಿತ್ತೋ, ಅದೇ ರೀತಿ ಸಂವಿಧಾನವನ್ನು ರಕ್ಷಿಸಲೂ ಕಾಂಗ್ರೆಸ್ ಕುಟುಂಬ ಹೋರಾಡಲಿದೆ ಎಂದೂ ಬರೆದುಕೊಂಡಿದ್ದಾರೆ.


















