ಚಿಕ್ಕಮಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ತಮ್ಮ ಜಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮರು ಎಣಿಕೆಯ ನಂತರ ರಾಜೇಗೌಡ ಅವರ ಲೀಡ್ ಮತ್ತಷ್ಟು ಹೆಚ್ಚಾಗಿದೆ.

ಈ ಹಿಂದೆ ನಡೆದಿದ್ದ ಸಾಮಾನ್ಯ ಮತ ಎಣಿಕೆಯ ವೇಳೆ ರಾಜೇಗೌಡ ಅವರು 201ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂಬ ಕಾರಣಕ್ಕೆ ಹೈಕೋರ್ಟ್ ನಿರ್ದೇಶನದಂತೆ ಇಂದು ಮರು ಎಣಿಕೆ ನಡೆಸಲಾಯಿತು. ಮರು ಎಣಿಕೆಯ ನಂತರ ರಾಜೇಗೌಡ ಅವರ ಲೀಡ್ 201ರಿಂದ 203ಕ್ಕೆ ಏರಿಕೆಯಾಗಿದೆ. ಅಂದರೆ ಅಂತಿಮವಾಗಿ ಅವರು 203 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಮತಎಣಿಕೆ ಪ್ರಕ್ರಿಯೆ ಆರಂಭವಾಗುವ ಒಂದು ಗಂಟೆ ಮೊದಲೇ ಮತಗಳಿರುವ ಬಾಕ್ಸ್ನ ಸೀಲ್ ಓಪನ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಏಜೆಂಟ್ಗಳು ತೀವ್ರ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು.
ಕೊನೆಗೆ ಅಂಚೆ ಮತಗಳ ಟ್ರಂಕ್ ಸೇಫಾಗಿದೆ. ಯಾವುದೇ ಗೊಂದ ಇಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಬಳಿಕ ಮತ ಎಣಿಕೆಗೆ ಅನುವು ಮಾಡಿಕೊಟ್ಟರು. ಬಳಿಕ ಬಿಗಿ ಪೊಲೀಸ್ ಭದ್ರತೆಯಲ್ಲಿ ಮರು ಎಣಿಕೆ ಪ್ರಕ್ರಿಯೆ ನಡೆಯಿತು. ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ ಒಟ್ಟು 1,822 ಅಂಚೆ ಮತಗಳನ್ನು ಮರು ಎಣಿಕೆಗೆ ಒಳಪಡಿಸಲಾಯಿತು. ಈ ಪೈಕಿ ಈ ಹಿಂದೆ ತಿರಸ್ಕೃತಗೊಂಡಿದ್ದ 279 ಮತಗಳನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ, ವ್ಯಾಲಿಡ್ ಇರುವ ಮತಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಯಿತು.
ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ :
ರಾಜೇಗೌಡ ಅವರ ಗೆಲುವು ಅಧಿಕೃತವಾಗುತ್ತಿದ್ದಂತೆ ಐಡಿಎಸ್ಜಿ ಕಾಲೇಜಿನ ಹೊರಗೆ ಜಮಾಯಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆ ನಡೆಸಿದರು. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಇದನ್ನೂ ಓದಿ : ಮೇ 20ರಿಂದ ರಸ್ತೆಗಿಳಿಯುತ್ತವೆಯೇ ಸಾರಿಗೆ ಬಸ್ಗಳು? ಮುಷ್ಕರ ಭೀತಿ ಹೆಚ್ಚಳ!



















