ಟೆಹ್ರಾನ್ : ಹೊರ್ಮುಜ್ ಜಲಸಂಧಿಯ ನಿಯಂತ್ರಣದ ವಿಚಾರದಲ್ಲಿ ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಭೀಕರ ಸರಣಿ ವೈಮಾನಿಕ ದಾಳಿಗಳು ನಡೆಯುತ್ತಿದ್ದು, ಪರಿಸ್ಥಿತಿ ತೀವ್ರ ಸ್ವರೂಪಕ್ಕೆ ತಿರುಗಿದೆ. ಅಂತಾರಾಷ್ಟ್ರೀಯ ಹಡಗು ಸಂಚಾರದ ಮೇಲಿನ ದಾಳಿಗಳನ್ನು ತಡೆಯುವ ಉದ್ದೇಶದಿಂದ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ)ಗೆ ಸಂಬಂಧಿಸಿದ ತಾಣಗಳ ಮೇಲೆ ಅಮೆರಿಕದ ಸೆಂಟ್ರಲ್ ಕಮಾಂಡ್ ಭಾನುವಾರ ರಾತ್ರಿ ಬೃಹತ್ ವೈಮಾನಿಕ ದಾಳಿ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಬಹ್ರೇನ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ದಾಳಿ ನಡೆಸಿ, ಅಲ್ಲಿನ ಇಡೀ ಡ್ರೋನ್ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್ನ ಕರಾವಳಿ ರಾಡಾರ್ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿ ತಾಣಗಳು ಮತ್ತು ಸಣ್ಣ ಬೋಟ್ಗಳನ್ನು ಗುರಿಯಾಗಿಸಿಕೊಂಡು ಡಜನ್ಗಟ್ಟಲೆ ನಿಖರ ದಾಳಿಗಳನ್ನು ನಡೆಸಿರುವುದಾಗಿ ಅಮೆರಿಕದ ಸೇನೆ ತಿಳಿಸಿದೆ.
ಈ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನಗಳು ಮತ್ತು ನೌಕಾ ಹಡಗುಗಳ ಜೊತೆಗೆ ಏಕಮುಖ ದಾಳಿ ನಡೆಸುವ ವಾಯು ಮತ್ತು ಸಮುದ್ರ ಡ್ರೋನ್ಗಳನ್ನು ಅಮೆರಿಕ ಬಳಸಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಮೇಲಿನ ಅತ್ಯಂತ ಭೀಕರ ದಾಳಿ ಇದಾಗಿದ್ದು, ಸುಮಾರು 140 ತಾಣಗಳನ್ನು ಧ್ವಂಸಗೊಳಿಸಲಾಗಿದೆ. ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ನಿನ್ನೆ ರಾತ್ರಿ ಅವರ ತಾಣಗಳನ್ನು ಧೂಳೀಪಟ ಮಾಡಿದ್ದೇವೆ,” ಎಂದು ಹೇಳಿದ್ದಾರೆ.
ಪ್ರತಿದಾಳಿ ನಡೆಸಿದ ಇರಾನ್ ಪಡೆಗಳು
ಅಮೆರಿಕದ ದಾಳಿಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಇರಾನ್ನ ಐಆರ್ಜಿಸಿ ಪಡೆಗಳು, ಬಹ್ರೇನ್, ಕುವೈತ್, ಕತಾರ್, ಜೋರ್ಡಾನ್ ಮತ್ತು ಒಮಾನ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಡ್ರೋನ್ ದಾಳಿಗಳನ್ನು ಮುಂದುವರಿಸಿವೆ. ಬಹ್ರೇನ್ನಲ್ಲಿರುವ ಅಮೆರಿಕದ ಡ್ರೋನ್ ಕಮಾಂಡ್ ಕೇಂದ್ರ, ಹೆಲಿಕಾಪ್ಟರ್ ನಿರ್ವಹಣಾ ಘಟಕಗಳು ಮತ್ತು ಪಿ-8 ವಿಮಾನದ ಹ್ಯಾಂಗರ್ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ನ ಇರ್ನಾ (IRNA) ಸುದ್ದಿ ಸಂಸ್ಥೆ ವರದಿ ಮಾಡಿದೆ. ಕುವೈತ್ನ ಅಲಿ ಸಲೇಮ್ ಮತ್ತು ಅಹ್ಮದ್ ಅಲ್-ಜಾಬರ್ ನೆಲೆಗಳ ಮೇಲೆಯೂ ಇರಾನ್ ವಿನಾಶಕಾರಿ ಡ್ರೋನ್ ದಾಳಿಗಳನ್ನು ನಡೆಸಿದ್ದು, ಅಲ್ಲಿನ ರಕ್ಷಣಾ ಬಂಕರ್ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳಿಗೆ ಹಾನಿ ಮಾಡಲಾಗಿದೆ ಎಂದು ಇರಾನ್ ಮಾಧ್ಯಮಗಳು ಹೇಳಿಕೊಂಡಿವೆ.
ರಾಜತಾಂತ್ರಿಕ ಬಿಕ್ಕಟ್ಟು
ಅಮೆರಿಕದ ಕ್ಷಿಪಣಿಯೊಂದು ಇರಾನ್ನ ಖುಜೆಸ್ತಾನ್ ಪ್ರಾಂತ್ಯದ ಮಾಹ್ಶಹರ್ ಎಂಬಲ್ಲಿನ ಕೃಷಿ ನೀರೆತ್ತುವ ಪಂಪಿಂಗ್ ಸ್ಟೇಷನ್ಗೆ ಅಪ್ಪಳಿಸಿದ ಪರಿಣಾಮ, ಅಲ್ಲಿ ಕಾವಲುಗಾರನಾಗಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇರಾನ್ನ ಬಂದರ್ ಅಬ್ಬಾಸ್, ಚಬಹಾರ್, ಜಸ್ಕ್ ಸೇರಿದಂತೆ ಪ್ರಮುಖ ಸೇನಾ ಹಾಗೂ ರಾಡಾರ್ ನೆಲೆಗಳಿರುವ ನಗರಗಳ ಮೇಲೆ ಅಮೆರಿಕ ದಾಳಿ ವಿಸ್ತರಿಸಿದೆ. ಈ ಹೊಸ ದಾಳಿಗಳ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವಾಲಯವು, ಪಶ್ಚಿಮ ಏಷ್ಯಾ ವಲಯದಲ್ಲಿ ಶಾಂತಿ ಸ್ಥಾಪನೆಗಾಗಿ ಕಳೆದ ಕೆಲವು ತಿಂಗಳುಗಳಿಂದ ನಡೆಸಲಾಗುತ್ತಿದ್ದ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನು ಅಮೆರಿಕದ ಈ ಕ್ರಮವು ವ್ಯರ್ಥಗೊಳಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಬ್ಯಾಂಕಾಕ್ ಪಬ್ನಲ್ಲಿ 27 ಜನರ ಸಜೀವ ದಹನಕ್ಕೆ ಮುಚ್ಚಿದ ತುರ್ತು ನಿರ್ಗಮನ ದ್ವಾರಗಳು ಕಾರಣ!



















