ಬೆಂಗಳೂರು: ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಜರ್ಮನಿಯ ಬವೇರಿಯಾ ರಾಜ್ಯದ ಆರ್ಥಿಕ ವ್ಯವಹಾರಗಳು, ಪ್ರಾದೇಶಿಕ ಅಭಿವೃದ್ಧಿ ಮತ್ತು ಇಂಧನ ಇಲಾಖೆಯ ಉಪ ಸಚಿವರಾದ ಶ್ರೀ ಟೋಬಿಯಾಸ್ ಗೋಟ್ಹಾರ್ಡ್ ಅವರ ನೇತೃತ್ವದ ನಿಯೋಗದೊಂದಿಗಿನ ಉಪಹಾರ ಸಭೆಯಲ್ಲಿ ಡಿಸಿಎಂ ಡಾ. ಜಿ.ಪರಮೇಶ್ವರ ಅವರು ಪಾಲ್ಗೊಂಡರು.
ಸಭೆಯಲ್ಲಿ ಕೈಗಾರಿಕಾ ವಿಸ್ತರಣೆ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ (R&D), ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ದೀರ್ಘಕಾಲೀನ ಸಹಭಾಗಿತ್ವವನ್ನು ಬಲಪಡಿಸುವ ಕುರಿತು ಪರಸ್ಪರ ಚರ್ಚೆ ನಡೆಯಿತು.
ಆ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿಗಳು, ‘ಟ್ವಿನ್ ಸಿಟಿ’ ಪರಿಕಲ್ಪನೆಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡು, ನಗರಗಳ ನಡುವೆ ಸಾಂಸ್ಥಿಕ ಸಹಭಾಗಿತ್ವವನ್ನು ಉತ್ತೇಜಿಸುವುದು, ಸುಸ್ಥಿರ ನಗರಾಭಿವೃದ್ಧಿ, ಸಾಂಸ್ಕೃತಿಕ ವಿನಿಮಯ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದು, ವಿಶೇಷವಾಗಿ ದ್ವಿತೀಯ ಹಂತದ ನಗರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳ ಕುರಿತು ಸಭೆಯಲ್ಲಿ ಚರ್ಚಿಸಿರುವುದಾಗಿ ತಿಳಿಸಿದರು.
ಈ ಸಭೆಯು ಕರ್ನಾಟಕ–ಬವೇರಿಯಾ ನಡುವಿನ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವುದರೊಂದಿಗೆ, ಜಾಗತಿಕ ಹೂಡಿಕೆದಾರರ ಮೊದಲ ಆಯ್ಕೆಯಾಗಿ ಕರ್ನಾಟಕವನ್ನು ರೂಪಿಸುವ ನಮ್ಮ ಸರ್ಕಾರದ ಬದ್ಧತೆ ಮತ್ತಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


















